ಮರಾಠಿಗರ ತೆಕ್ಕೆಗೆ ಬೆಳಗಾವಿ ಮಹಾನಗರ ಪಾಲಿಕೆ
ಬೆಳಗಾವಿ. ಮಾ.10 : ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳು ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳ ಪಾಲಾಗಿವೆ. ಸೋಮವಾರ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಮಹೇಶ್ ನಾಯಕ್ ಮತ್ತು ಉಪ ಮೇಯರ್ ಆಗಿ ರೇಣು ಮುತಗೇಕರ್ ಆಯ್ಕೆ ಆಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ 16ನೇ ಅವಧಿಯ ಮೇಯರ್, ಉಪ ಮೇಯರ್ ಹುದ್ದೆಗಳಿಗೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಿತು. ಎಂಇಎಸ್ ಅಭ್ಯರ್ಥಿಗಳಾದ ಮಹೇಶ್ ನಾಯಕ್ ಮೇಯರ್ ಆಗಿ ಮತ್ತು ರೇಣು ಮುತಗೇಕರ್ ಉಪ ಮೇಯರ್ ಆಗಿ ಚುನಾವಣೆಯಲ್ಲಿ ಆಯ್ಕೆಯಾದರು.
ಲೋಕಸಭೆ ಚುನಾವಣೆ ತಯಾರಿಯಲ್ಲಿ ತೊಡಗಿರುವ ಸ್ಥಳೀಯ ಶಾಸಕರು ಮತ್ತು ಸಂಸದರು ಮಹಾನಗರ ಪಾಲಿಕೆ ಚುನಾವಣೆಯಿಂದ ದೂರವುಳಿದರು. ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ನಾಯಕ್ 31 ಮತಗಳನ್ನು ಪಡೆದು, ಕನ್ನಡ ಅಭ್ಯರ್ಥಿ ಪಾಯಿನ್ ನಾಯಕ್ ವಿರುದ್ಧ ಜಯಗಳಿಸಿದರು. [ಕರ್ನಾಟಕರ ಇತರ ಜಿಲ್ಲಾಸುದ್ದಿಗಳು]
ಬೆಳಗಾವಿ ಪಾಲಿಕೆ ಎಂಇಎಸ್ ಪಾಲು
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿಗಳ ಪಾಲಾಗಿವೆ. 16ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಮಹೇಶ್ ನಾಯಕ್ ಮೇಯರ್ ಆಗಿ ಮತ್ತು ರೇಣು ಮುತಗೇಕರ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಶಂಕಿತ ನಕ್ಸಲ್ ನಾಪತ್ತೆ
ನಕ್ಸಲ್ ಸಂಘಟನೆಯಲ್ಲಿ ತೊಡಗಿದ್ದ ಕಾರಣಕ್ಕಾಗಿ ಜೈಲು ವಾಸ ಅನುಭವಿಸಿ ನಂತರ ಬಿಡುಗಡೆಯಾಗಿದ್ದ ಜೆ.ಎಂ. ಕೃಷ್ಣ ನಾಪತ್ತೆಯಾಗಿದ್ದಾರೆ. ಕೃಷ್ಣ ಅವರ ಸಹೋದರ ಜೆ.ಎಂ. ಉಮೇಶ್ ಕಳಸ ಪೊಲೀಸರಿಗೆ ಕೃಷ್ಣ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ಕಳಸ ಹೋಬಳಿಯ ಹೆಮ್ಮಕ್ಕಿ ಗ್ರಾಮದ ನಿವಾಸಿಯಾದ ಜೆ.ಎಂ. ಕೃಷ್ಣ ಅವರನ್ನು 2007ರಲ್ಲಿ ಆಲ್ದೂರು ಪೊಲೀಸರು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಮೈಸೂರು ಜೈಲಿನಲ್ಲಿದ್ದ ಕೃಷ್ಣ 2010ರಲ್ಲಿ ಬಿಡುಗಡೆಯಾಗಿದ್ದರು. ಎರಡು ತಿಂಗಳ ಹಿಂದೆ ನೆಂಟರ ಮನೆಗೆ ಹೋಗುತ್ತೇನೆಂದು ತಾಯಿ ಲಿಂಗಮ್ಮ ಅವರ ಬಳಿ ಹೇಳಿ ಹೋದ ಅವರು ನಾಪತ್ತೆಯಾಗಿದ್ದಾರೆ.
ಸಕಾಲಕ್ಕೆ ಸಾಲ ಮರುಪಾವತಿ ಮಾಡಿ
ರೈತರು ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಬೇಕೆಂದು ಮಾಜಿ ಸಚಿವ ಮುರಗೇಶ ನಿರಾಣಿ ಕರೆ ನೀಡಿದ್ದಾರೆ. ಮುಧೋಳದಲ್ಲಿ ಐಡಿಬಿಐ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕಾಲಕ್ಕೆ ಸಾಲ ಮರುಪಾವತಿಯಿಂದ ಬ್ಯಾಂಕ್ ಅಭಿವೃದ್ಧಿ ಹೊಂದುವುದರ ಜತೆಗೆ ಇತರರಿಗೂ ಸಹಾಯವಾಗುತ್ತದೆ ಎಂದರು. ಬಾಗಲಕೋಟೆ ಜಿಲ್ಲೆ ಸಕ್ಕರೆ, ಸಿಮೆಂಟ್, ಗ್ರಾನೈಟ್ ಉದ್ಯಮದ ಪ್ರಮುಖ ಸ್ಥಳವಾಗಿದೆ. ಆದ್ದರಿಂದ ಜಿಲ್ಲೆಯ 6 ತಾಲೂಕುಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸಬೇಕಾಗಿದೆ ಎಂದು ಅವರು ಮನವಿ ಮಾಡಿದರು.
240 ಚೀಲ ಅಕ್ಕಿ ವಶ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಕ್ರಮವಾಗಿ ಮನೆಯೊಂದರಲ್ಲಿ ದಾಸ್ತಾನು ಮಾಡಲಾಗಿದ್ದ 240 ಚೀಲ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ಕಿ ಸಂಗ್ರಹಿಸುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಇನ್ಸ್ಪೆಕ್ಟರ್ ಪ್ರಸಾದ್ ಗೋಖಲೆ, 1 ಲಕ್ಷ 40 ಸಾವಿರ ರೂ.ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ನಬೀ ರಸೂಲ್ಲಾ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ 50 ಕೆಜಿಯ 240 ಚೀಲ ಅಕ್ಕಿಯನ್ನು ಸಂಗ್ರಹಿಸಲಾಗಿತ್ತು. ಆರೋಪಿ ರಸೂಲ್ಲಾ ಪರಾರಿಯಾಗಿದ್ದು, ಸಿರುಗುಪ್ಪ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ತುಮಕೂರಿನಲ್ಲಿ ಬಾಂಬ್ ಭೀತಿ
ತುಮಕೂರು ಹೊರವಲಯದ ಪೆಟ್ರೋಲ್ ಬಂಕ್ ಹಾಗೂ ಕೊರಟಗೆರೆ ಬಳಿಯ ಪೆಟ್ರೋಲ್ ಬಂಕ್ ಸಮೀಪ ಬಾಂಬ್ ಹೋಲುವಂತಹ ಬಾಟಲಿಯಲ್ಲಿದ್ದ ಸ್ಫೋಟಕ ಭಾನುವಾರ ಮಧ್ಯ ರಾತ್ರಿ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಗ್ರಾಮಾಂತರ ಪೊಲೀಸ್ ಠಾಣೆಗೆ ಎಂ.ಆರ್. ಸರ್ವೀಸ್ ಸ್ಟೇಷನ್ ಪೆಟ್ರೋಲ್ ಬಂಕ್ನಲ್ಲಿ ಬಾಂಬ್ ಇಡಲಾಗಿದೆ ಎಂದು ಆ ಪೆಟ್ರೋಲ್ ಬಂಕ್ ಮಾಲೀಕರು ಕರೆ ಮಾಡಿ ತಿಳಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ಗುಪ್ತ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಬ್ಯಾಗ್ವೊಂದರಲ್ಲಿ ಪ್ಲಾಸ್ಟಿಕ್ ಬಾಟಲಿಯೊಳಗೆ ಹಲವು ವೈರ್ ಜೋಡಿಸಿ, ಮೇಲೆ ಪೇಪರ್ ತುಣುಕು ತುರುಕಲಾಗಿತ್ತು. ಆದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.