ಜನಾರ್ದನ ರೆಡ್ಡಿಗೆ ಮಧ್ಯಂತರ ಜಾಮೀನು ಸಿಕ್ತು
ಬೆಂಗಳೂರು, ಫೆ.17 : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ನೀಡಿದೆ. ಆದರೆ, ಈ ಜಾಮೀನನ್ನು ಜನಾರ್ದನ ರೆಡ್ಡಿ ಅವರು ಚಿಕಿತ್ಸೆ ಪಡೆಯಲು ಮಾತ್ರ ನೀಡಲಾಗಿದೆ.
ತಾವು ಬೆನ್ನುನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯಲು ತಮಗೆ ಮಧ್ಯಂತರ ಜಾಮೀನು ನೀಡಬೇಕೆಂದು ಜನಾರ್ದನ ರೆಡ್ಡಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸೋಮವಾರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ರೆಡ್ಡಿ ತಮ್ಮ ಸ್ವಂತ ಖರ್ಚಿನಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯಬೇಕಾಗಿದೆ.
ನ್ಯಾಯಾಲಯದಿಂದ ಜಾಮೀನು ದೊರಕಿರುವ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಅವರು, ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ನ್ಯಾಯಾಲಯದ ಷರತ್ತಿನಂತೆ ಈ ಸಮಯದಲ್ಲಿಯೂ ರೆಡ್ಡಿ ಸಿಬಿಐ ಕಣ್ಗಾವಲಿನಲ್ಲಿ ಇರಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಯಾರನ್ನೂ ಭೇಟಿ ಮಾಡಬಾರದು ಎಂದು ಷರತ್ತು ವಿಧಿಸಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]
ಚಿಕಿತ್ಸೆಗಾಗಿ ರೆಡ್ಡಿಗೆ ಜಾಮೀನು
ಜೈಲು ಸೇರಿರುವ ಗಣಿಧಣಿ ಜನಾರ್ಧನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜನಾರ್ದನ ರೆಡ್ಡಿ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ. ಆದರೆ, ಈ ಸಮಯದಲ್ಲಿ ಅವರು ಯಾರನ್ನು ಭೇಟಿ ಮಾಡಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಚಿಕಿತ್ಸಾ ವೆಚ್ಚವನ್ನು ಸಹ ರೆಡ್ಡಿ ಅವರೇ ಭರಿಸಬೇಕಾಗಿದೆ.
ತುಂಬಿದ ಕೊಡ ಮೂರು ಭಾಗ ಆದೀತಲೇ
ಬಳ್ಳಾರಿ ಜಿಲ್ಲೆಯ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ "ತುಂಬಿದ ಕೊಡ ಮೂರು ಭಾಗ ಆದೀತಲೇ" ಎಂದು ಗೊರವಯ್ಯ ಮಂಜಪ್ಪ ಕಾರ್ಣಿಕ ನುಡಿದಿದ್ದಾರೆ. ಭಾನುವಾರ ಮೈಲಾರದ ಡೆಂಕಣ ಮರಡಿಯಲ್ಲಿ ತುಪ್ಪ ಹಚ್ಚಿದ 20 ಅಡಿ ಉದ್ದದ ಬಿಲ್ಲನೇರಿದ ಗೊರವಯ್ಯ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಮುಂದೆ ಕಾರ್ಣಿಕ ನುಡಿದರು. ಈ ಭವಿಷ್ಯ ನುಡಿ ರಾಜಕೀಯ ಮತ್ತು ಕೃಷಿ ಕ್ಷೇತ್ರಕ್ಕೆ ಅನ್ವಯವಾಗಲಿದ್ದು, ರಾಜಕೀಯ ಕ್ಷೇತ್ರದಲ್ಲಿ ಪಕ್ಷಗಳಲ್ಲಿ ಮೂರು ಭಾಗವಾಗಿ ಸಂಘಟನೆಯಲ್ಲಿ ಕೊರತೆ, ಯಾವುದೇ ರಾಜಕೀಯ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗದೆ ಹೋಗಬಹುದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಳೆ ಬೆಳೆ ಬಂದರೂ ಲಾಭದಾಯಕ ಆಗಿರುವುದಿಲ್ಲ, ಬರುವ ಆದಾಯದಲ್ಲಿ ಮೂರು ಭಾಗವಾಗಿ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಭಕ್ತರು ವಿಶ್ಲೇಷಣೆ ಮಾಡಿದ್ದಾರೆ.
ಪುಂಡರ ಹಾವಳಿ ತಪ್ಪಿಸಿ
ಮೈಸೂರು ನಗರದಲ್ಲಿ ಸಂಜೆ ವೇಳೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾನುವಾರ ನಗರ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ಈ ಮನವಿ ಮಾಡಿದ್ದಾರೆ. ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ ಎಂದು ಸಭೆಯಲ್ಲಿ ಸಾರ್ವಜನಿಕರು ದೂರಿದ್ದಾರೆ.
ಬಸವೇಶ್ವರ ಪುತ್ಥಳಿ ಅನಾವರಣ
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ಪುತ್ಥಳಿಯನ್ನು ಮಾ.2ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನಾವರಣಗೊಳಿಸಲಿದ್ದಾರೆ ಎಂದು ಶಾಸಕ ಭೀಮಾನಾಯ್ಕ ತಿಳಿಸಿದ್ದಾರೆ. ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದಂತೆ ಕೆಲ ಮುಖಂಡರನ್ನೊಳಗೊಂಡ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು. ವಿವಿಧ ಸ್ವಾಮೀಜಿಗಳು ಈ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.