ಇನ್ನೇನು, ಬರಲಿದೆ : ಬಿಬಿಎಂಪಿ ಮುಂಗಡಪತ್ರ-ಪ್ರಸಾದ!
ಬೆಂಗಳೂರು, ಫೆ.10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2014-15ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧವಾಗಿದೆ. ಫೆ.17ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಶಿವಪ್ರಸಾದ್ ಬಜೆಟ್ ಮಂಡಿಸಲಿದ್ದಾರೆ.
ಫೆ.14ರಂದು ಸಿಎಂ ಸಿದ್ದರಾಮಯ್ಯ ಕರ್ಣಾಟಕದ ರಾಜ್ಯದ ಬಜೆಟ್ ಮಂಡಿಸಲಿದ್ದು, ನಂತರ ಫೆ.17ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2014-15ನೇ ಸಾಲಿನ ಬಜೆಟ್ ಮಂಡಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಸಹ ತಮ್ಮ ಬಜೆಟ್ ನಲ್ಲಿ ಬಿಬಿಎಂಪಿಗೆ ವಿಶೇಷ ಅನುದಾನ ನೀಡುವ ಸಾಧ್ಯತೆ ಇದೆ.
ಫೆ.17ರಂದು ಸುಮಾರು 7 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಲಾಗುತ್ತದೆ ಎಂದು ಡಾ.ಶಿವಪ್ರಸಾದ್ ಹೇಳಿದ್ದಾರೆ. ಈಗಾಗಲೇ ಆರ್ಥಿಕವಾಗಿ ಪಾಲಿಕೆ ಸಂಕಷ್ಟಕ್ಕೆ ಸಿಲುಕಿದ್ದು, ಬಜೆಟ್ ನಲ್ಲಿ ಅದನ್ನು ಸರಿದೂಗಿಸಲು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಫೆ.17ಕ್ಕೆ ಬಿಬಿಎಂಪಿ ಬಜೆಟ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2014-15ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧವಾಗಿದೆ. ಫೆ.17ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಶಿವಪ್ರಸಾದ್ ಸುಮಾರು 7 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಲಿದ್ದಾರೆ.

ಗುರುವಾರ ದೊಡ್ಡಬಳ್ಳಾಪುರ ಬಂದ್
ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ದೊಡ್ಡಬಳ್ಳಾಪುರ ಬಂದ್ ಗೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಕರೆ ನೀಡಿದೆ. ಕನ್ನಡ ಜಾಗೃತ ಭವನದಲ್ಲಿ ಭಾನುವಾರ ನಡೆದ ವಿವಿಧ ಸಂಘ-ಸಂಸ್ಥೆಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು, ಶಾಲಾ-ಕಾಲೇಜು, ಆಡಳಿತ ಕಚೇರಿಗಳು, ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು, ನೇಕಾರಿಕೆ ಸೇರಿದಂತೆ ಎಲ್ಲ ಉದ್ಯಮ-ವ್ಯವಹಾರಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಸರ್ಕಾರಕ್ಕೆ ಜನರ ಸಂದೇಶ ರವಾನಿಸಬೇಕು ಎಂದು ಹೋರಾಟ ಸಮಿತಿ ಕರೆ ನೀಡಿದೆ.

ಕಾಡಿಗೆ ಮರಳಿದ ಒಂಟಿ ಸಲಗ
ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮಕ್ಕೆ ನುಗಿದ್ದ ಕಾಡಾನೆಯೊಂದನ್ನು ಸೋಮವಾರ ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಂಡೇಲಿ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಕಲಘಟಗಿ ತಾಲೂಕಿನ ಕಬ್ಬಿನ ಗದ್ದೆಗಳಿಗೆ ಕಳೆದ ಹಲವು ದಿನಗಳಿಂದ ಆನೆಗಳು ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು. ಭಾನುವಾರ ಬೆಳಗಿನ ಜಾವ ಮುಂಡಗೋಡ ತಾಲೂಕಿನ ಹುಲಿಹೊಂಡ ಪ್ರದೇಶದಿಂದ ಬೆಲವಂತರ ಗ್ರಾಮಕ್ಕೆ ಆಗಮಿಸಿದ ಕಾಡಾನೆಯು ಬಮ್ಮಿಗಟ್ಟಿ, ತಾವರಗೇರಿ ಗ್ರಾಮಗಳ ಜಮೀನುಗಳಲ್ಲಿ ಸಂಚರಿಸಿ, ಬೆಲವಂತರ ಗ್ರಾಮದ ಮನೆಯೊಂದರ ಬಳಿ ನಿಂತಿರುವುದನ್ನು ಗ್ರಾಮಸ್ಥರೊಬ್ಬರು ನೋಡಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಆನೆ ಪಳಗಿಸಲು ಸಕ್ರೈಬೈಲು ಸಜ್ಜು
ಮೈಸೂರು, ಹಾಸನ ಭಾಗದ ಜನರನ್ನು ಇನ್ನಿಲ್ಲದಂತೆ ಕಾಡಿದ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ 10 ದಿನಗಳಲ್ಲಿ ಆರಂಭವಾಗಲಿದ್ದು, ಸೆರೆ ಹಿಡಿದ ಆನೆಗಳನ್ನು ಪಳಗಿಸಲು ಶಿವಮೊಗ್ಗ ಸಮೀಪದ ಸಕ್ರೈಬೈಲು ಆನೆ ಶಿಬಿರ ಸಜ್ಜಾಗಿದೆ. ಮೊದಲ ಹಂತದಲ್ಲಿ 25 ಕಾಡಾನೆಗಳನ್ನು ಗುರುತಿಸಿ ಹಿಡಿಯಲು ಉದ್ದೇಶಿಸಲಾಗಿದ್ದು, ಅವುಗಳನ್ನು ಸಕ್ರೈಬೈಲು ಸೇರಿದಂತೆ ವಿವಿಧ ಶಿಬಿರಗಳಿಗೆ ರವಾನಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಆನೆಗಳನ್ನು ಪಳಗಿಸಲು ಸಕ್ರೆಬೈಲ್, ದುಬಾರೆ, ಮತ್ತಿಗೋಡಿನಲ್ಲಿ ಪೂರ್ವತಯಾರಿ ಆರಂಭವಾಗಿದೆ.

ರಾಯಲ್ ಕ್ರಿಕೆಟ್ ಟೂರ್ನಿ ಆರಂಭ
ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಯಲ್ ಕ್ರಿಕೆಟ್ ಕ್ಲಬ್, ಕೆಎಸ್ಸಿಎ ಸಹಯೋಗದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತ ಮಟ್ಟದ ಕ್ರಿಕೆಟ್ ಟೂರ್ನಿಗೆ ಭಾನುವಾರ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಚಾಲನೆ ನೀಡಿದ್ದಾರೆ. ಕ್ರಿಕೆಟ್ ಕ್ಲಬ್ ಈ ಭಾಗದಲ್ಲಿ ಟೂರ್ನಿಗಳನ್ನು ನಡೆಸುವ ಮೂಲಕ ಕ್ರೀಡಾಪಟುಗಳಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.[ಫೆ.9ರಿಂದ ರಾಯಲ್ ಟ್ರೋಫಿ]

ದೊಡ್ಡರಸಿನಕೆರೆಯ ಬಸವ ಇನ್ನಿಲ್ಲ
ಮಂಡ್ಯ ಜಿಲ್ಲೆ ದೊಡ್ಡರಸಿನಕೆರೆಯ ಕಾಲಭೈರವೇಶ್ವರಸ್ವಾಮಿಯ 'ಬಸಪ್ಪ' ಭಾನುವಾರ ರಾತ್ರಿ ನಿಧನ ಹೊಂದಿತು. 13 ವರ್ಷಗಳಿಗೂ ಹೆಚ್ಚು ಕಾಲ ಭಕ್ತರ ಪ್ರೀತಿಗೆ ಪಾತ್ರವಾಗಿದ್ದ ಇದು ಚಿಕ್ಕರಸಿನಕೆರೆ ಗ್ರಾಮದಲ್ಲಿನ ಕಾಲಭೈರವೇಶ್ವರಸ್ವಾಮಿ ದೇವರ ಮೂಲ ಬಸಪ್ಪವಾಗಿತ್ತು. ಕಳೆದ ನಾಲ್ಕೈದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬಸಪ್ಪ ನಾಲ್ಕೈದು ದಿನಗಳ ಹಿಂದೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು, ಭಾನುವಾರ ಸಾವನ್ನಪ್ಪಿದೆ. ದೊಡ್ಡಅರಸಿನಕೆರೆ ಗ್ರಾಮದ ಕಾಳಮ್ಮನ ದೇಗುಲದ ಮುಂದಿನ ಬಸಪ್ಪನ ಪ್ರತಿಮೆ ಬಳಿ ಪೂಜಾ ವಿಧಿ-ವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.












Click it and Unblock the Notifications