ಶಿರಾದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ
ಬೆಂಗಳೂರು, ಡಿ.13 : ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಜಪಾನಿ ಸಂಸ್ಥೆಯ ವತಿಯಿಂದ ಟೌನ್ ಶಿಪ್ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದಾರೆ. ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಜಪಾನಿ ರಾಯಭಾರಿಗೆ ಶಿರಾ ಸಮೀಪ ಟೌನ್ ಶಿಪ್ ನಿರ್ಮಾಣ ಮಾಡಲು ಸರ್ಕಾರ ಭೂಮಿ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜಪಾನ್ ರಾಯಭಾರಿ ಅಕೇಶಿಯಾ ಐಯಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಸಂಬಂಧ ಮಾತುಕತೆ ನಡೆಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಎರಡನೇ ಹಂತದ ನಗರದಲ್ಲಿ ಬಂಡವಾಳ ಹೂಡಿಕೆ ಮಾಡುವುದಾದದರೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಮತ್ತು ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿರುವ ಶಿರಾದಲ್ಲಿ ಉಪ ನಗರ ನಿರ್ಮಾಣ ಮಾಡಲು ಆಸಕ್ತಿ ಹೊಂದಿರುವುದಾಗಿ ಜಪಾನ್ ರಾಯಭಾರಿ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಜೊತೆಗಿದ್ದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಜೊತೆ ಚರ್ಚೆ ನಡೆಸಿದ ಸಿಎಂ ಉಪ ನಗರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
228ಕ್ಕೂ ಅಧಿಕ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಿವೆ. 900ಕ್ಕೂ ಅಧಿಕ ಮಂದಿ ಜಪಾನಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ನಾವು ಆಸಕ್ತಿ ಹೊಂದಿದ್ದೇವೆ. ಸರ್ಕಾರದ ನಿರ್ದೇಶನದಂತೆ ಎರಡನೇ ಹಂತದ ನಗರಗಳಲ್ಲಿಯೇ ಹೂಡಿಕೆ ಮಾಡಲಾಗುವುದು ಎಂದು ಜಪಾನ್ ರಾಯಭಾರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದರು. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)
ಶಿರಾದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಒಪ್ಪಿಗೆ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಜಪಾನಿ ಸಂಸ್ಥೆಯ ವತಿಯಿಂದ ಟೌನ್ ಶಿಪ್ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದಾರೆ. ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಜಪಾನಿ ರಾಯಭಾರಿ ಅಕೇಶಿಯಾ ಐಯಾಜಿ ಅವರಿಗೆ ಶಿರಾ ಸಮೀಪ ಟೌನ್ ಶಿಪ್ ನಿರ್ಮಾಣ ಮಾಡಲು ಸರ್ಕಾರ ಭೂಮಿ ನೀಡಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜಪಾನ್ ರಾಯಭಾರಿ ಅಕೇಶಿಯಾ ಐಯಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಸಂಬಂಧ ಮಾತುಕತೆ ನಡೆಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಎರಡನೇ ಹಂತದ ನಗರದಲ್ಲಿ ಬಂಡವಾಳ ಹೂಡಿಕೆ ಮಾಡುವುದಾದದರೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಶನಿವಾರ ಸೀಬರ್ಡ್ ನೌಕಾನೆಲೆಗೆ ಉಚಿತ ಪ್ರವೇಶ
ನೌಕಾ ದಿನಾಚರಣೆ ಅಂಗವಾಗಿ ಕಾರವಾರದ ಸೀಬರ್ಡ್ ನೌಕಾನೆಲೆಗೆ ಡಿ.14ರ ಶನಿವಾರ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5ರ ಒಳಗೆ ನೌಕಾನೆಲೆಗೆ ಕದಂಬ ದ್ವಾರ, ಅರ್ಗಾ ಮೂಲಕ ಪ್ರವೇಶಿಸಬಹುದಾಗಿದೆ. ಮುಖ್ಯದ್ವಾರದಿಂದ ನೌಕಾಜೆಟ್ಟಿ ತನಕ ಸಾರ್ವಜನಿಕರನ್ನು ಕರೆದುಕೊಂಡು ಹೋಗಲು ಸಾಕಷ್ಟು ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕ್ಯಾಮೆರಾ ಅಥವಾ ಮೊಬೈಲ್ ತರಬಾರದು ಎಂದು ನೌಕಾನೆಲೆ ಅಧಿಕಾರಿ ತಿಳಿಸಿದ್ದಾರೆ.
ಗಣಿಗಾರಿಕೆ ನಿಷೇಧಿಸುವಂತೆ ರಾಜ್ಯಪಾಲರಿಗೆ ಪತ್ರ
ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಪ್ಪು ಹಾಗೂ ಬಿಳಿಕಲ್ಲು ಗಣಿಗಾರಿಕೆಗಳನ್ನು ನಿಷೇಧಿಸುವಂತೆ ರಾಜ್ಯಪಾಲರಿಗೆ ಪರಿಸರ ಹೋರಾಟಗಾರ ಡಿ.ಎಸ್.ದೊರೆಸ್ವಾಮಿ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ 95 ಕಪ್ಪು ಶಿಲೆ ಹಾಗೂ 114 ಬಿಳಿಕಲ್ಲು ಗಣಿಗಾರಿಕೆಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ನಡೆಯುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಸರ್ಕಾರದ ಅದೇಶ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಗಣಿಕಾರಿಕೆ ನಡೆಸಲಾಗುತ್ತಿದೆ. ಅರಣ್ಯ, ಗೋಮಾಳ, ಖರಾಬು, ಕೆರೆ, ನದಿ, ರಸ್ತೆ ಮತ್ತು ಕಂದಾಯ ಭೂಮಿಗಳಲ್ಲಿ ಅಕ್ರಮ ಕಪ್ಪುಕಲ್ಲು ಮತ್ತು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಟೆಂಡರ್ ಅವಧಿ ಮುಗಿದಿದ್ದರೂ ಗಣಿಗಾರಿಕೆ ಮುಂದುವರೆದಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಭೂ ಸ್ವಾಧೀನಕ್ಕೆ ರೈತರ ವಿರೋಧ ಚಿತ್ರದುರ್ಗ
ಚಿತ್ರದುರ್ಗ ತಾಲೂಕಿನ ಅನ್ನೇಹಾಳು ಕೆರೆಯಿಂದ ಭೀಮಸಮುದ್ರ ಕೆರೆಗೆ ಪೂರಕ ನಾಲೆ ಮೂಲಕ ನೀರುಹರಿಸಲು ಜಲಸಂಪನ್ಮೂಲ ಇಲಾಖೆ ಯೋಜನೆ ಸಿದ್ಧಪಡಿಸಿದೆ. ಉದ್ದೇಶಿತ ಯೋಜನೆಗಾಗಿ 67 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಉಪ ವಿಭಾಗಾಧಿಕಾರಿ ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹುಲ್ಲೂರು ವಿಘ್ನೇಶ್ವರ ಕೆರೆ ಬಳಕೆದಾರರ ಸಂಘ, ಟಿ.ನುಲೇನೂರು, ಬಂಜಗೊಂಡನಹಳ್ಳಿ, ಹೊಳಲ್ಕೆರೆ ತಾಲೂಕು ಹಾಗೂ ಬೆನಕನಹಳ್ಳಿ, ಹುಲ್ಲೂರು, ಸಿಂಗಪೂರ, ಕಾತ್ರಾಳು ಕೆರೆ ಅಚ್ಚುಕಟ್ಟುದಾರ ರೈತರು ಜಿಲ್ಲಾಧಿಕಾರಿಗೆ ಭೂಸ್ವಾಧೀನ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಶನಿವಾರದಿಂದ ಫಲಪುಷ್ಪ ಪ್ರದರ್ಶನ
ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಮತ್ತು ಆತ್ಮ ಯೋಜನೆ ಇವುಗಳ ಸಹಯೋಗದಲ್ಲಿ ಡಿಸೆಂಬರ್ 14 ರಂದು ಮಹಾತ್ಮ ಗಾಂಧಿ ಪಾರ್ಕ್ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಹೆಚ್. ಶಂಕರಮೂರ್ತಿ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉಪಸ್ಥಿತರಿರುವರು.
ಫಲಾನುಭವಿಗಳಿಂದ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಬೆಂಗಳೂರು ಇವರ ಮೂಲಕ 2013-14ನೇ ಸಾಲಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ರೂ 2 ಲಕ್ಷ ಘಟಕ ವೆಚ್ಚವನ್ನು ನಿಗದಿ ಪಡಿಸಲಾಗಿದ್ದು, ನಗರ ಪ್ರದೇಶದ ವಸತಿ ರಹಿತ ಫಲಾನುಭವಿಗಳಿಗೆ ಪ್ರತಿ ಮನೆಗೆ ರೂ. 1,20,000 ಸಹಾಯಧನವನ್ನು ನೀಡಲಾಗುತ್ತಿದೆ. ರೂ. 50, 00 ಬ್ಯಾಂಕ್ ಸಾಲ ಹಾಗೂ ರೂ. 30,000 ಫಲಾನುಭವಿಗಳ ವಂತಿಕೆ ಮೂಲಕ ಮನೆಯನ್ನು ಫಲಾನುಭವಿಯು ನಿರ್ಮಿಸಿಕೊಳ್ಳಬೇಕಾಗುತ್ತದೆ. ಉಡುಪಿ ನಗರಸಭಾ ವ್ಯಾಪ್ತಿಯ ಅರ್ಹ ವಸತಿ ರಹಿತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಹೆಚ್ಚಿನ ವಿವರಗಳನ್ನು ನಗರಸಭಾ ಕಛೇರಿಯಿಂದ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ 0820-2520306