ಯುವನಿಧಿ ಯೋಜನೆ: ಫಲಾನುಭವಿಗಳಿಗೆ ಮಹತ್ವದ ಸೂಚನೆ
ಬೆಂಗಳೂರು, ಜೂನ್ 24: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ 'ಯುವನಿಧಿ' ಸಹ ಒಂದು. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಸರ್ಕಾರದ ಈ ಗ್ಯಾರಂಟಿ ಯೋಜನೆಯನ್ನು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಆರಂಭಿಸಿದೆ.
'ಯುವನಿಧಿ' ಯೋಜನೆಯಡಿ ಫಲಾನುಭವಿಯಾಗಲು ಸೇವಾಸಿಂಧು ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಬೇಕಿತ್ತು. ಈಗ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಅರ್ಹ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕಪತ್ರಗಳು, ಆಧಾರ್ ಕಾರ್ಡ್ ಹಾಗೂ ಇತರ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಪರಿಶೀಲನೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.

ಅಲ್ಲದೇ 'ಯುವನಿಧಿ' ಯೋಜನೆಗೆ ಅರ್ಹರಾದ ಎಲ್ಲಾ ಫಲಾನುಭವಿಗಳು ಪ್ರತಿ ತಿಂಗಳ 25ನೇ ತಾರೀಖಿನ ಒಳಗಾಗಿ ಉನ್ನತ ವ್ಯಾಸಂಗ ಮುಂದುವರೆಸದಿರುವ ಕುರಿತು ಹಾಗೂ ಯಾವುದೇ ಉದ್ಯೋಗ ಹೊಂದಿಲ್ಲದಿರುವ ಕುರಿತು ಸ್ವಯಂ ಘೋಷಣೆ ನೀಡಬೇಕಾಗಿರುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಯುವನಿಧಿ ಯೋಜನೆಗೆ ಚಾಲನೆ: ಕರ್ನಾಟಕ ಸರ್ಕಾರ ಜನವರಿ 12, 2024ರಂದು ಯುವನಿಧಿ ಯೋಜನೆಗೆ ಚಾಲನೆ ನೀಡಿತು. ಯೋಜನೆಯನ್ನು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಯೋಜನೆಯಡಿ ಫಲಾನುಭವಿಗಳಾಗಲು 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಅರ್ಹರು.
ಯೋಜನೆ ಜಾರಿಯಾಗುವ ಸಂದರ್ಭದಲ್ಲಿಯೇ 'ಯುವನಿಧಿ' ಯೋಜನೆಯ ಲಾಭ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರಿಗೆ ದೊರೆಯುವುದಿಲ್ಲ. ಅಲ್ಲದೆ ಅಪ್ರೆಂಟಿಸ್ ಹುದ್ದೆಯಲ್ಲಿರುವವರಿಗೆ ಕೂಡ ಈ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಷರತ್ತು ವಿಧಿಸಲಾಗಿತ್ತು.
'ಯುವನಿಧಿ' ಗ್ಯಾರಂಟಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1,500 ರೂ. ಸಿಗಲಿದೆ. ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ.
ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ಈ ಯೋಜನೆಯು ಕರ್ನಾಟಕ ರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಿರುತ್ತದೆ. ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಯೋಜನೆ ಹಣವನ್ನು ಡಿಬಿಟಿ ಮೂಲಕ ಒದಗಿಸಲಾಗುತ್ತದೆ.
'ಯುವನಿಧಿ' ಯೋಜನೆಗೆ ಅರ್ಜಿ ಸಲ್ಲಿಸುವವರು ನಿರುದ್ಯೋಗ ಸ್ಥಿತಿಯ ಪರಿಶೀಲನೆಗೆ ಒಳಪಡಬೇಕು. ಉದ್ಯೋಗ ಹೊಂದಿದ್ದರೂ ಕೂಡ 'ಯುವನಿಧಿ' ಯೋಜನೆ ಲಾಭವನ್ನು ಮುಂದುವರಿಸಿಕೊಂಡು ಹೋದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇದೇ ಕಾರಣಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ನಿರುದ್ಯೋಗಿಗಳೆಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ತಾವು ಉತ್ತರಿಸಿದ ದಿನಾಂಕದಿಂದ 6 ತಿಂಗಳ ತಮ್ಮ ಅಧಿಕೃತ ಬ್ಯಾಂಕ್ ಖಾತೆಯ ವಹಿವಾಟು ಸ್ಟೇಟ್ಮೆಂಟ್ ಪ್ರತಿ ಸಲ್ಲಿಸಬೇಕು. ಒಂದು ವೇಳೆ ಬ್ಯಾಂಕ್ಗೆ ಪ್ರತಿ ಸಲ್ಲಿಸದಿದ್ದರೆ ಅರ್ಜಿ ತಿರಸ್ಕಾರವಾಗಲಿದೆ.












Click it and Unblock the Notifications