ಧರ್ಮಸ್ಥಳಕ್ಕೆ ಮೀನು ಮಾತ್ರ ಯಾಕೆ, ಕೋಳಿನೂ ತಿಂದು ಹೋಗಿದ್ದೆ: ಸಿಎಂ
Recommended Video

ಚಿಕ್ಕಬಳ್ಳಾಪುರ, ಅ 30: ನಾನು ನಾಸ್ತಿಕ, ದೇವಾಲಯಕ್ಕೆ ಹೋಗುವುದಿಲ್ಲ ಎಂದು ಎಲ್ಲೂ ಹೇಳಿಕೊಂಡು ಬಂದಿಲ್ಲ. ಉಪವಾಸ ಮಾಡಿಕೊಂಡು ದೇವಾಲಯಕ್ಕೆ ಬಾ, ಮಾಂಸ ತಿಂದು ದೇವಾಲಯಕ್ಕೆ ಬರಬೇಡ ಎಂದು ದೇವರೆಲ್ಲೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸೋಮವಾರ (ಅ 30) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ವೀರೇಂದ್ರ ಹೆಗ್ಗಡೆಯವರು ದೇವರ ದರ್ಶನ ಮಾಡಿಕೊಂಡು ಹೋಗಿ ಎಂದು ಹೇಳಿದರು, ಅವರ ಮಾತಿಗೆ ಬೆಲೆಕೊಡಲು ನಾನು ದೇವಸ್ಥಾನಕ್ಕೆ ಹೋಗಿದ್ದೆ. (ಮೀನು ತಿಂದು ದೇವಸ್ಥಾನಕ್ಕೆ ಬರಬೇಡ ಎಂದು ದೇವ್ರು ಹೇಳಿಲ್ಲ, ಆದ್ರೆ ಸ್ವಾಮೀ)
ಅಂದು ಮಧ್ಯಾಹ್ನ ಮೀನು ಮಾತ್ರ ಯಾಕೆ ಕೋಳಿನೂ ತಿಂದು ಧರ್ಮಸ್ಥಳ ದೇವಾಲಯಕ್ಕೆ ಹೋಗಿದ್ದೆ. ಮಾಂಸ ತಿಂದು ಹೋದರೆ ದೇವರು ಅಪವಿತ್ರ ಆಗ್ಬಿಡ್ತಾನಾ ಎಂದು ಸಿದ್ದರಾಮಯ್ಯ ಪ್ರಶ್ನಿಸುವ ಮೂಲಕ, ಈ ವಿವಾದವನ್ನು ಮತ್ತೆ ಜೀವಂತವಾಗಿಸಿದ್ದಾರೆ.
ಮೈಸೂರಿನಿಂದ ಸಿಎಂ ಸಿದ್ದರಾಮಯ್ಯ ನೇರವಾಗಿ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ. ತಾಲೂಕಿನ ಮಂಚನಬಲೆ ಗ್ರಾಮದ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆ ನಡೆಸಿ, ರಾಜ್ಯದಲ್ಲಿ ಭಾರೀ ಚರ್ಚೆಯ ವಿಷಯವಾಗಿರುವ ಧರ್ಮಸ್ಥಳ ವಿವಾದದ ಬಗ್ಗೆ ಮಾತನಾಡಿದರು.
ಚಿಕ್ಕಬಳ್ಳಾಪುರ ಕಾರ್ಯಕ್ರಮಕ್ಕೆ ಬರುವ ವೇಳೆ, ಹೆಲಿಕಾಪ್ಟರ್ ನಿಂದ ಕೆಳಗಿಳಿಯುವ ವೇಳೆ ಮುಖ್ಯಮಂತ್ರಿಗಳ ಪಂಚೆಯೂ ಸ್ವಲ್ಪ ಹರಿದ ಘಟನೆ ನಡೆಯಿತು. ನಂತರ SJT ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ಪಂಚೆ ಬದಲಾಯಿಸಿ, ದೇವಾಲಯ ಕಾರ್ಯಕ್ರಮದ ಉದ್ಘಾಟನೆಗೆ ತೆರಳಿದರು. ಮುಂದೆ ಓದಿ.

ಮೀನಿನ ಜೊತೆ ಕೋಳಿಯನ್ನೂ ತಿಂದು, ದೇವಾಲಯಕ್ಕೆ ಹೋಗಿದ್ದು ಹೌದು
ಧರ್ಮಸ್ಥಳದಲ್ಲಿ ನಾನು ದೇವರ ಗರ್ಭಗುಡಿಯನ್ನು ಪ್ರವೇಶಿಸಲಿಲ್ಲ. ಶುದ್ದ ಮನಸ್ಸಿನಿಂದ ದೇವಾಲಯಕ್ಕೆ ಹೋಗಬೇಕು ಎನ್ನುವುದು ನನ್ನ ನಂಬಿಕೆ. ನಾನು ಅಂದು ಮಧ್ಯಾಹ್ನದ ಊಟಕ್ಕೆ ಮೀನಿನ ಜೊತೆ ಕೋಳಿಯನ್ನೂ ತಿಂದು, ದೇವಾಲಯಕ್ಕೆ ಹೋಗಿದ್ದು ಹೌದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಲ್ಲರಲ್ಲಿಯೂ ದೇವರು ಇದ್ದಾನೆ ಅಲ್ಲವೇ
ಮನುಷ್ಯ, ಮನುಷ್ಯರ ನಡುವೆ ಯಾರು ಬೆಂಕಿ ಇಡುತ್ತಾರೋ ಅವರು ಮನುಷ್ಯರಾಗುವುದಿಲ್ಲ. ಅಂಥವರಿಂದ ದೇವಾಲಯ ಪವಿತ್ರ ಆಗಲು ಸಾಧ್ಯವಿಲ್ಲ. ಅಂಥವರನ್ನು ದೇವರೇ ದೂರ ಇಡುತ್ತಾನೆ. ಎಲ್ಲರಲ್ಲಿಯೂ ದೇವರು ಇದ್ದಾನೆ ಅಲ್ಲವೇ? ಹಾಗಾದರೆ ಮಾಂಸ ತಿನ್ನುವವರು ಏನು ಮಾಡಬೇಕು. ಮಾಂಸ ತಿನ್ನುವುದನ್ನು ಬಿಡಬೇಕೇ? ವಿರೋಧಿಸುವವರಿಗೆ ದೇವರ ಬಗ್ಗೆ ತಿಳುವಳಿಕೆ ಇಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಆತ್ಮಸಾಕ್ಷಿಗೆ ದ್ರೋಹ ಮಾಡದವರೇ ನಿಜವಾದ ಮನುಷ್ಯರು
ಆತ್ಮ ಸಾಕ್ಷಿಯೇ ದೇವರು. ಆತ್ಮಸಾಕ್ಷಿಗೆ ದ್ರೋಹ ಮಾಡದವರೇ ನಿಜವಾದ ಮನುಷ್ಯರು. ಅದನ್ನೇ ದೇವರು ಸಹ ಮೆಚ್ಚುವುದು. ಮಾಡಬಾರದ್ದನ್ನೆಲ್ಲ ಮಾಡಿ ಗಂಧದ ಕಡ್ಡಿ ಹಚ್ಚಿ, ತೆಂಗಿನ ಕಾಯಿಒಡೆದರೂ ದೇವರು ಮೆಚ್ಚುವುದಿಲ್ಲ.ಶುದ್ಧ ಮನಸ್ಸಿನಿಂದ ಪೂಜೆ ಮಾಡುವವರನ್ನು ಮಾತ್ರ ದೇವರು ಮೆಚ್ಚುತ್ತಾನೆ - ಸಿಎಂ ಟ್ವೀಟ್

ಪರ, ವಿರೋಧ ಕಾಮೆಂಟುಗಳು
ಮಾಂಸಾಹಾರ ಸೇವಿಸುವವರು ದೇವಾಲಯಕ್ಕೆ ಬರುವುದು ತಪ್ಪಾದರೆ, ಸಸ್ಯಾಹಾರಿಗಳು ಮಾತ್ರ ದೇವಾಲಯಕ್ಕೆ ಹೋಗಲಿ ಮುಂತಾದ ಕಾಮೆಂಟುಗಳು.

ವಿರೋಧ ವ್ಯಕ್ತವಾಗಿದ್ದೇ ಹೆಚ್ಚು
ಚಿಕ್ಕ ವಯಸ್ಸಿನಿಂದ ಸಂಸ್ಕಾರ ಕಲಿತಿದ್ದರೆ ಇಂತಹ ಮಾತು ಬರುತ್ತಿರಲಿಲ್ಲ, ಮುಂದಿನ ಚುನಾವಣೆಯಲ್ಲಿ ಮಂಜುನಾಥ ನಿಮಗೆ ಸತ್ಯಾಸತ್ಯತೆಯನ್ನು ತಿಳಿಸುತ್ತಾನೆ..ಹೀಗೆ ಪ್ರತಿಕ್ರಿಯೆಗಳು.












Click it and Unblock the Notifications