ಮಂಗಳೂರು ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್?
ಮಂಗಳೂರು, ಫೆ.10: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 'ಪಕ್ಷ ಜಿಗಿತ' ಶುರುವಾಗಿದೆ. ಅತ್ತ ಗೂಳಿಹಟ್ಟಿ ಶೇಖರ್ ಗೆ ಜೆಡಿಎಸ್ ಧ್ವಜ ಹಸ್ತಾಂತರವಾಗಿದೆ. ಈ ಮಧ್ಯೆ, ಕೆಜೆಪಿ/ಬಿಜೆಪಿ ಮುಖಂಡ ವೇಣೂರು ಧನಂಜಯ್ ಕುಮಾರ್ ಆಳ್ವಾ ಚಿತ್ತ ಜೆಡಿಎಸ್ ಪಕ್ಷದತ್ತ ನೆಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ.
ಇದಕ್ಕೆ ಪೂರಕವಾಗಿ ಧನಂಜಯ್ ಕುಮಾರ್ ತಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ನಾನೊಬ್ಬ ಶಕ್ತಿ ಸಾಮರ್ಥ್ಯವಿರುವ ಸಾಮಂತ. ನಮ್ಮಂಥ ವ್ಯಕ್ತಿಗಳನ್ನು ಕಡೆಗಣಿಸಿದರೆ ಹೇಗೆ ಎಂದು ಬಿಜೆಪಿ ಪಕ್ಷದ ಬಗ್ಗೆಯೂ ಧನಂಜಯ್ ಕುಮಾರ್ ಕಿಡಿಕಾರಿದ್ದಾರೆ.

ಅತಂತ್ರನಾಗಿ ಕುಳಿತಿರಲು ಸಾಧ್ಯವಿಲ್ಲ-ಧನಂಜಯ್
ಅಡ್ವಾಣಿ ವಿರುದ್ಧ ಹಗುರವಾಗಿ ಮಾತನಾಡಿದ್ದೆ ಯಡಿಯೂರಪ್ಪ ಅವರಿಗಾಗಿ. ಈಗ ಅದನ್ನೇ ಮುಂದಿಟ್ಟುಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಇನ್ನೇನು ಲೋಕಸಭೆ ಚುನಾವಣೆ ಯಾವುದೇ ಕ್ಷಣ ಘೋಷಣೆಯಾಗಬಹುದು. ಈ ಹೊತ್ತಿನಲ್ಲಿ ನಾನು ಅತಂತ್ರನಾಗು ಕುಳಿತಿರಲು ಸಾಧ್ಯವಿಲ್ಲ. ನನ್ನ ಭವಿಷ್ಯ ನಾನು ಕಂಡು ಕೊಳ್ಳಬೇಕು ಎಂಬುದು ಧನಂಜಯ್ ಕುಮಾರ್ ಅವರ ಮನದಾಳದ ಮಾತು/ ಲೆಕ್ಕಾಚಾರ.

ಜೆಡಿಎಸ್ಸಿನಲ್ಲಿಯೂ ಪೂರಕವಾದ ಎಣಿಕೆ
ಧನಂಜಯ್ ಕುಮಾರ್ ಅವರು ಹೀಗೆ ಬುಸುಗುಟ್ಟುತ್ತಿರುವ ಹೊತ್ತಿನಲ್ಲೇ ಅತ್ತ ಜೆಡಿಎಸ್ಸಿನಲ್ಲಿಯೂ ಇದಕ್ಕೆ ಪೂರಕವಾದ ಎಣಿಕೆ ನಡೆದಿದೆ. ಒಂದು ವೇಳೆ ಧನಂಜಯ್ ಕುಮಾರ್, ಯಡಿಯೂರಪ್ಪ ಅವರಿಂದ ದೂರವಾದರೆ ಅವರನ್ನು ನಾವು ಬಳಸಿಕೊಳ್ಳಬೇಕು. ಸಾಧ್ಯವಾದರೆ ಮಂಗಳೂರು (ದಕ್ಷಿಣ ಕನ್ನಡ) ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಆಲೋಚಿಸಿಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿಗೆ ಧನಂಜಯ್ ಗೆಲ್ಲುವ ಕುದುರೆಯಲ್ಲ
ಧನಂಜಯ್ ಕುಮಾರ್ ಚುನಾವಣೆಗೆ ಸ್ಪರ್ಧಿಸದೆ 10 ವರ್ಷಗಳಾಗಿವೆ. ಈ ಬಾರಿಯಾದರೂ ಮಂಗಳೂರು ಅಥವಾ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಯಸಿದ್ದರು. ಟಿಕೆಟ್ ನೀಡುವಂತೆ ಬಿಜೆಪಿ ನಾಯಕರನ್ನೂ ವಿನಂತಿಸಿದ್ದರು.
ಆದರೆ ಮೋದಿಯನ್ನು ಪ್ರಧಾನಿಯನ್ನಾಗಿ ಕಾಣಬೇಕೆಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ ಗೆಲ್ಲುವ ಕುದುರೆಗಳನ್ನಷ್ಟೇ ನೆಚ್ಚಿಕೊಂಡಿದೆ. ಹಾಗಾಗಿ, ಧನಂಜಯ್ ವಿಷಯದಲ್ಲಿ ಕುರುಡಾಗಿದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಸುಳಿದಿಲ್ಲ ಎಂಬುದನ್ನು ತುಸು ಹೆಚ್ಚಿಗೇ ಅರ್ಥ ಮಾಡಿಕೊಂಡಿರುವ ಧನಂಜಯ್, ಬಿಜೆಪಿಯೂ ಬೇಡ, ಯಡಿಯೂರಪ್ಪನೂ ಬೇಡ ಎಂಬ ನಿರ್ಧಾರಕ್ಕೆ ಬಂದಾಗಿದೆ.

ಈ ಬಾರಿ ಜೆಡಿಎಸ್ ಅವಕಾಶ ವೇಸ್ಟ್ ಮಾಡಿಕೊಳ್ಳಲಾರೆ
2004ರಲ್ಲಿಯೂ ಇಂತಹುದೇ ಪರಿಸ್ಥಿತಿ ಎದುರಾಗಿತ್ತು. ಧನಂಜಯ್ ಗೆ ಟಿಕೆಟ್ ನೀಡದೆ ಸದಾನಂದ ಗೌಡರನ್ನು ಮಂಗಳೂರಿನಿಂದ ಬಿಜೆಪಿ ಕಣಕ್ಕಿಳಿಸಿತ್ತು. ಆಗ ಜೆಡಿಎಸ್ ಅಧಿನಾಯಕ ದೇವೇಗೌಡರು ನನ್ನನ್ನು ಸಂಪರ್ಕಿಸಿದ್ದರು. ಜೆಡಿಎಸ್ ನಿಂದ ಸದಾನಂದ ವಿರುದ್ಧ ನಿಂತ್ಕೋ ಎಂದು ಸೂಚಿಸಿದ್ದರು. ಆದರೆ ಪಕ್ಷ ನಿಷ್ಠೆಗೆ ಜೋತುಬಿದ್ದು, ದೇವೇಗೌಡರ ಮಾತಿಗೆ ಬೆಲೆ ಕೊಡಲಿಲ್ಲ.
ಆದರೆ ಈ ಬಾರಿ ಹಾಗೆ ಅವಕಾಶವನ್ನು ವೇಸ್ಟ್ ಮಾಡಿಕೊಳ್ಳಲಾರೆ. ದೇವೇಗೌಡರು ಆಶೀರ್ವದಿಸಿದರೆ ಮಂಗಳೂರಿಂದ ಜೆಡಿಎಸ್ ಕ್ಯಾಂಡಿಡೇಟ್ ಆಗಲು ತಾನು ಸಿದ್ಧವಿರುವುದಾಗಿ ವೇಣೂರು ಧನಂಜಯ್ ಕುಮಾರ್ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದಾರೆ.












Click it and Unblock the Notifications