ಪೂರಕ ಬಜೆಟ್ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ದೇವೇಗೌಡ

Recommended Video

      ಸಿದ್ದರಾಮಯ್ಯನವರ ಪೂರಕ ಬಜೆಟ್ ಸಲಹೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ ಎಚ್ ಡಿ ದೇವೇಗೌಡ

      ಬೆಂಗಳೂರು, ಜೂನ್ 27 : ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪೂರ್ಣಪ್ರಮಾಣದ ಬಜೆಟ್ ಮಂಡಿಸುವ ಬದಲು ಪೂರಕ ಬಜೆಟ್ ಮಾತ್ರ ಮಂಡಿಸಬೇಕು ಎಂಬ ಸಿದ್ದರಾಮಯ್ಯನವರ ಮನವಿಯನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

      ನಾನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದಲ್ಲಿ ಯಾವುದೇ ರೀತಿ ತಲೆ ಹಾಕುವುದಿಲ್ಲ ಎಂದು ಹಿಂದೆ ಹೇಳಿದ್ದರೂ, ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯೇ ಅಂತಿಮ ಎನ್ನುವಂತೆ ದೇವೇಗೌಡ ಅವರು ಹೇಳಿರುವುದು ಅಚ್ಚರಿಯ ಸಂಗತಿಯೇನಲ್ಲ. ಗೌಡರ ಹಿಡಿತದಲ್ಲಿಯೇ ಸರಕಾರವೂ ಇದೆ ಎಂಬುದು ಇದರಿಂದ ಸಾಬೀತಾಗಿದೆ.

      ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದೇ ಇದೆ. ಕುಮಾರಸ್ವಾಮಿ ಸರಕಾರ 5 ವರ್ಷ ಉಳಿಯುವುದು ಕಷ್ಟ ಎಂದು ಸಿದ್ದರಾಮಯ್ಯ ಹೇಳಿರುವ ವಿಡಿಯೋ ಸಂಘರ್ಷದ ಕಿಡಿಯನ್ನು ಹಚ್ಚಿದೆ. ಸಿದ್ದರಾಮಯ್ಯನವರು ಮೂಗು ತೂರಿಸುತ್ತಿರುವುದರ ವಿರುದ್ಧ ಕುಮಾರಸ್ವಾಮಿ ರಾಹುಲ್ ಅವರಿಗೆ ದೂರು ನೀಡಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಗಾಯದ ಮೇಲೆ ಬರೆ ಎಳೆದಂತೆ ಪೂರಕ ಬಜೆಟ್ ಮನವಿಯನ್ನು ಕೂಡ ತಿರಸ್ಕರಿಸಲಾಗಿದೆ.

      ಇಬ್ಬರ ನಡುವಿನ ಜಗಳಕ್ಕೆ ಕಲಶವಿಟ್ಟಂತೆ ಸಾಲಮನ್ನಾ ಕುರಿತಂತೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನೇರವಾಗಿಯೇ ಮಾತಿನ ಯುದ್ಧಕ್ಕೆ ಇಳಿದಿದ್ದಾರೆ. ಸಾಲಮನ್ನಾ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಹೊರೆ ಬೀಳಲಿದೆ ಎಂದು ಸಿದ್ದರಾಮಯ್ಯ ಆಡಿದ ಮಾತಿಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಯವರು, ರೈತರ ಸಾಲಮನ್ನಾ ಮಾಡಿಯೇ ತೀರುತ್ತೇನೆ ಎಂದು ತೊಡೆತಟ್ಟಿದ್ದಾರೆ.

      ಇದೀಗ, ಪೂರಕ ಬಜೆಟ್ ಮಂಡನೆ ಕುರಿತಂತೆ ದೇವೇಗೌಡರು ನೀಡಿರುವ ಹೇಳಿಕೆ, ಮೈತ್ರಿಕೂಟದ ಸಾಮರಸ್ಯವನ್ನು ಒಡೆಯುವುದರಲ್ಲಿ ಸಂಶಯವೇ ಇಲ್ಲ. ಜುಲೈ 5ರಂದು ಕುಮಾರಸ್ವಾಮಿಯವರು ಪೂರ್ಣಪ್ರಮಾಣದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಎಲ್ಲ ಇಲಾಖೆಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

      ಪೂರಕ ಬಜೆಟ್ ಇಲ್ಲ, ಪೂರ್ಣಪ್ರಮಾಣದ ಬಜೆಟ್

      ಪೂರಕ ಬಜೆಟ್ ಇಲ್ಲ, ಪೂರ್ಣಪ್ರಮಾಣದ ಬಜೆಟ್

      "ನಾನು ಸಿದ್ದರಾಮಯ್ಯನವರ (ಪೂರಕ ಬಜೆಟ್ ಮಂಡಿಸಬೇಕೆಂಬ) ಸಲಹೆಗೆ ಯಾವುದೇ ಪ್ರತಿಕ್ರಿಯೆ ಅಥವಾ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಮತ್ತು ಅದಕ್ಕೂ ಮೊದಲು ಕೂಡ ಅವರು ಹಲವಾರು ಬಾರಿ ಬಜೆಟ್ ಮಂಡಿಸಿದ್ದಾರೆ. ಕುಮಾರಸ್ವಾಮಿಯವರು ಹೊಸತೇನೂ ಮಾಡುತ್ತಿಲ್ಲ. ಇದಕ್ಕೆ ಸಾಂವಿಧಾನಿಕ ಹಿನ್ನೆಲೆಯೂ ಇದೆ. ಹೊಸ ಸರಕಾರ ಪೂರಕ ಬಜೆಟ್ ಮಂಡಿಸುವ ಬದಲು ಪೂರ್ಣಪ್ರಮಾಣದ ಬಜೆಟ್ ಮಂಡಿಸಬಹುದು" ಎಂದು ದೇವೇಗೌಡರು ಷರಾ ಬರೆದಿದ್ದಾರೆ.

      ಚಿದಂಬರಂ ಪೂರ್ಣಪ್ರಮಾಣದ ಬಜೆಟ್ಟನ್ನೇ ಮಂಡಿಸಿದ್ದರು

      ಚಿದಂಬರಂ ಪೂರ್ಣಪ್ರಮಾಣದ ಬಜೆಟ್ಟನ್ನೇ ಮಂಡಿಸಿದ್ದರು

      ನಾನು ಪ್ರಧಾನಿಯಾಗಿದ್ದಾಗ 1996ರ ಜುಲೈ 22ರಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಹಣಕಾಸು ಸಚಿವರಾಗಿ ಕೇಂದ್ರ ಬಜೆಟ್ ಮಂಡಿಸಿದ್ದರು. ಆಗಿನ ಮೈತ್ರಿಕೂಟದ ಸರಕಾರ ಪೂರಕ ಬಜೆಟ್ ಬದಲು ಪೂರ್ಣಪ್ರಮಾಣದ ಬಜೆಟ್ಟನ್ನೇ ಮಂಡಿಸಿತ್ತು. ಆಗ ಆ ಬಜೆಟ್ಟನ್ನು 'ಕನಸಿನ ಬಜೆಟ್' ಎಂದು ಬಣ್ಣಿಸಲಾಗಿತ್ತು. ಆಗ, ಪೂರ್ಣಪ್ರಮಾಣದ ಬಜೆಟ್ ಮಂಡಿಸಿ ಕಾಂಗ್ರೆಸ್ ತನ್ನ ಹೊಳಪನ್ನು ಕಳೆದುಕೊಂಡಿತ್ತೆ? ಎಂದು ದೇವೇಗೌಡರು ಸಿದ್ದರಾಮಯ್ಯನವರಿಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಈಗ ಪೂರ್ಣಪ್ರಮಾಣದ ಬಜೆಟ್ ಮಂಡಿಸಿದರೆ ತಪ್ಪೇನು ಎಂದೂ ಕೇಳಿದ್ದಾರೆ.

      ಕಾಂಗ್ರೆಸ್ನ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ

      ಕಾಂಗ್ರೆಸ್ನ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ

      ಆಗ, ಸಂಯುಕ್ತ ರಂಗದ ಸರಕಾರ ಕಾಂಗ್ರೆಸ್ ಆರಂಭಿಸಿದ್ದ ಯಾವುದೇ ಯೋಜನೆಗಳನ್ನು ನಿಲ್ಲಿಸಿದ್ದಿಲ್ಲ. ಮೈತ್ರಿ ಸರಕಾರದ ಹೊರೆ ನನ್ನ ಮೇಲಿತ್ತು. ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿದ್ದರಿಂದ ಅವರ ಯೋಜನೆಗಳನ್ನು ನಾನು ಮುಂದುವರಿಸಲೇಬೇಕಿತ್ತು. ಈಗಲೂ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಆರಂಭಿಸಿರುವ ಯಾವುದೇ ಯೋಜನೆಯನ್ನು ನಿಲ್ಲಿಸುವುದಿಲ್ಲ. ಮೈತ್ರಿ ಸರಕಾರ ತೊಂದರೆಯಲ್ಲಿ ಸಿಲುಕಿಕೊಳ್ಳುವುದು ಕುಮಾರಸ್ವಾಮಿಯವರಿಗೆ ಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.

      ಗೊಂದಲ ಕಾಂಗ್ರೆಸ್ ನಾಯಕರೇ ಪರಿಹರಿಸಲಿ

      ಗೊಂದಲ ಕಾಂಗ್ರೆಸ್ ನಾಯಕರೇ ಪರಿಹರಿಸಲಿ

      ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹಲವಾರು ಸಂಗತಿಗಳನ್ನು ರಾಜ್ಯದ ಜನರ ಮುಂದಿಟ್ಟಿದ್ದು, ಹಲವಾರು ಭರವಸೆಗಳನ್ನು ನೀಡಿವೆ. ಅವರನ್ನು ಪೂರೈಸಬೇಕಿದ್ದರೆ ಪೂರಕ ಬಜೆಟ್ ಬದಲು ಪೂರ್ಣಪ್ರಮಾಣದ ಬಜೆಟ್ಟನ್ನೇ ಮಂಡಿಸಬೇಕಾಗುತ್ತದೆ. ಈ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿರುವ ಹಿರಿಯ ನಾಯಕರು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು ಪರಿಹರಿಸುತ್ತಾರೆ ಎಂದು ದೇವೇಗೌಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

      ಯಡಿಯೂರಪ್ಪ ಸರಕಾರ ಅಸ್ಥಿರಗೊಳಿಸಲಾರರು

      ಯಡಿಯೂರಪ್ಪ ಸರಕಾರ ಅಸ್ಥಿರಗೊಳಿಸಲಾರರು

      ಬಿಜೆಪಿ ನಾಯಕ ಯಡಿಯೂರಪ್ಪನವರು ಅಮಿತ್ ಶಾ ಅವರನ್ನು ಅಹ್ಮದಾಬಾದ್ ನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ ಅವರು, ಅವರಿಬ್ಬರ ಮಧ್ಯೆ ಏನು ನಡೆದಿದೆ ಎಂದು ನಾನು ಊಹಿಸುವುದಿಲ್ಲ, ಏನು ಮಾತಾಡಿದ್ದಾರೋ ನನಗೆ ಗೊತ್ತೂ ಇಲ್ಲ. ಆದರೆ, ನನಗೆ ಬಂದಿರುವ ವರದಿಯ ಪ್ರಕಾರ, ಯಡಿಯೂರಪ್ಪ ಅವರು ಕರ್ನಾಟಕದಲ್ಲಿನ ಮೈತ್ರಿಕೂಟದ ಸರಕಾರವನ್ನು ಅಸ್ಥಿರಗೊಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಸಿದ್ದರಾಮಯ್ಯನವರು ಆಡಿರುವ ಮಾತುಗಳು...

      ಸಿದ್ದರಾಮಯ್ಯನವರು ಆಡಿರುವ ಮಾತುಗಳು...

      ಮೈತ್ರಿ ಸರಕಾರದ ಆರಂಭದ ದಿನಗಳಲ್ಲಿ ಇಂಥ ಗೊಂದಲಗಳು, ಅಡೆತಡೆಗಳು ಸಾಮಾನ್ಯ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ. ಒಟ್ಟಿನಲ್ಲಿ ಸರಕಾರ ಸುಗಮವಾಗಿ ಸಾಗುತ್ತಿರಬೇಕು ಎಂದು ದೇವೇಗೌಡರು ಆಶಯ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಯಾವುದೊ ವ್ಯಕ್ತಿಯೊಬ್ಬನ ಜೊತೆ ಸಿದ್ದರಾಮಯ್ಯನವರು ಆಡಿರುವ ಮಾತುಗಳು ರಾಜ್ಯದಲ್ಲಿ ಭಾರೀ ಸಂಚಲನವೆಬ್ಬಿಸಿವೆ. ವೈರಲ್ ಆಗಿರುವ ಆ ವಿಡಿಯೋದಲ್ಲಿ ಪ್ರಸ್ತುತ ಸರಕಾರ 5 ವರ್ಷ ಪೂರೈಸುವುದೇ ಕಷ್ಟ. ಲೋಕಸಭೆ ಚುನಾವಣೆಯ ನಂತರ ಏನೂ ಆಗಬಹುದು ಎಂದು ಸಿದ್ದರಾಮಯ್ಯ ಹೇಳಿರುವುದು ಭಾರೀ ಕುತೂಹಲಕಾರಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+