ಸಿದ್ದು 'ಅಹಿಂದ'ಅಸ್ತ್ರಕ್ಕೆ, ದೇವೇಗೌಡ್ರ ಅಹಿಂದ + ಒಕ್ಕಲಿಗ ತಿರುಗುಬಾಣ
Recommended Video
ದೇವೇಗೌಡ್ರು ಚುನಾವಣೆ ಸೋತಿದ್ದೇ ಪಕ್ಷ ಸಂಘಟನೆ ಮಾಡಲು ಎಂದು ಜೆಡಿಎಸ್ ಮುಖಂಡರೊಬ್ಬರು ಹೇಳಿದ್ದರು. ಅದರಂತೆಯೇ, ಒಂದು ಕಡೆ ಪಾದಯಾತ್ರೆಗೆ ಮುನ್ನುಡಿ ಬರೆಯಲು ಮುಂದಾಗಿರುವ ಗೌಡ್ರು, ಇನ್ನೊಂದು ಕಳೆ, ಅಳೆದುತೂಗಿ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲೂ ರಾಜಕೀಯ ಮುತ್ಸದ್ದಿತನ ತೋರಿದ್ದಾರೆ.
ಗುರುವಾರ (ಜು 4) ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಯುವ ಘಟಕದ ರಾಜ್ಯಾಧ್ಯಕ್ಷರನ್ನು ಗೌಡ್ರು ನೇಮಿಸಿದ್ದಾರೆ. ಪಕ್ಷದ ಬೇರಿನ ವಿಸ್ತರಣೆಗೆ ಇದು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಹಾಗೇ, ಪ್ರಮುಖ ಜಾತಿಗಳ ನಾಯಕರನ್ನು ಆಯ್ಕೆಮಾಡಿ, ಹೊಸ ರಣತಂತ್ರ ರೂಪಿಸಲು ಗೌಡ್ರು ಹೊರಟಿರುವುದಂತೂ ಸ್ಪಷ್ಟವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದೇವೇಗೌಡ ಆಪ್ತ ಎಚ್.ಕೆ.ಕುಮಾರಸ್ವಾಮಿ ನೇಮಕ
ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದಾರೆ ಎನ್ನುವ ಸುದ್ದಿಯ ನಡುವೆ, ಗೌಡ್ರು ಹೊಸ ದಾಳವನ್ನು ಉರುಳಿಸಿದ್ದಾರೆ. ಸಿದ್ದರಾಮಯ್ಯನವರ ಅಹಿಂದ ಮಂತ್ರಕ್ಕೆ ಪ್ರತಿಯಾಗಿ ಒಂದು ಕಡೆ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿತ, ದಲಿತ) ಇನ್ನೊಂದು ಕಡೆ ಅಹಿಂದದ ಜೊತೆಗೆ ಒಕ್ಕಲಿಗ ಅಸ್ತ್ರವನ್ನೂ ಜೊತೆಯಾಗಿ ಗೌಡ್ರು ಇಟ್ಟುಕೊಂಡು ಹೊರಟಂತಿದೆ.
ಸಿದ್ದರಾಮಯ್ಯ ಕಟ್ಟಲು ಹೊರಟಿರುವ ಅಹಿಂದ ಸೈನ್ಯದ ಸದಸ್ಯರ ಪಟ್ಟಿ?
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಕೆ ಕುಮಾರಸ್ವಾಮಿ ಪರಿಶಿಷ್ಟ ಜಾತಿ ಸಮುದಾಯದವರು, ಇನ್ನು ಕಾರ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ ಸಮುದಾಯದ ಎನ್ ಎಂ ನಬಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ.
ಗೌಡ್ರ ಚಾಣಾಕ್ಷತನ
ಕೆ ಗೋಪಾಲಯ್ಯ ಅವರು ಉಪಾಧ್ಯಕ್ಷರಾಗಿದ್ದಾರೆ. ಇವರು ಮತ್ತು ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಒಕ್ಕಲಿಗ ಸಮುದಾಯದವರು. ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿರುವ ಪಕ್ಷ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಗೌಡ್ರ ಈ ನೇಮಕಾತಿಯಲ್ಲಿ ಚಾಣಾಕ್ಷತನ ಪ್ರದರ್ಶಿಸಿದ್ದಾರೆ.
ಪಕ್ಷ ಬಲವರ್ಧನೆ ಹೆಸರಿನಲ್ಲಿ ಮತ್ತೆ ಸಿದ್ದರಾಮಯ್ಯ ಅಹಿಂದ ಸಮಾವೇಶ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಬೆಂಬಲ ಸಿಗದೇ, ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿತ್ತು. ಪಕ್ಷ ಬಲವರ್ಧನೆ ಹೆಸರಿನಲ್ಲಿ ಮತ್ತೆ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ಹೊರಟಿದ್ದಾರೆ ಎನ್ನುವ ಸುದ್ದಿಯ ನಡುವೆ, ಗೌಡ್ರ ಈ ಹೆಜ್ಜೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪಾದಯಾತ್ರೆ ದೊಡ್ಡಮಟ್ಟಿಗೆ ಯಶಸ್ಸಿಗೆ ಪ್ರಯತ್ನ
ಪಾದಯಾತ್ರೆ ನಡೆಸಲು ಮುಂದಾಗಿರುವ ದೇವೇಗೌಡ್ರು ಅದನ್ನು ದೊಡ್ಡಮಟ್ಟಿಗೆ ಯಶಸ್ಸು ಬರುವಂತೆ ಮಾಡಲು ಬೇಕಾಗಿರುವ ಕಾರ್ಯತಂತ್ರವನ್ನು ಹಣೆಯುತ್ತಿದ್ದಾರೆ. ಹಾಗಾಗಿ, ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ನೇಮಕಾತಿಯನ್ನು ಗೌಡ್ರು ಬಹಳ ಮುತುವರ್ಜಿಯಿಂದ ಆಯ್ಕೆಮಾಡಿದ್ದಾರೆ. ಮುಂಬರುವ ಅಸೆಂಬ್ಲಿ ಚುನಾವಣೆಗೆ ಗೌಡ್ರು ಈಗಲೇ ಮುನ್ನುಡಿ ಬರೆದಂತಿದೆ.
ಅವರದ್ದೂ ಒಂದು ಪಕ್ಷವಲ್ಲವೇ, ಸಂಘಟನೆ ಮಾಡಿಕೊಳ್ಲಲಿ ಬಿಡಿ
ಅವರದ್ದೂ ಒಂದು ಪಕ್ಷವಲ್ಲವೇ, ಸಂಘಟನೆ ಮಾಡಿಕೊಳ್ಲಲಿ ಬಿಡಿ ಎಂದು ಹಾಸ್ಯದ ಮೂಲಕ ಸಿದ್ದರಾಮಯ್ಯ, ಜೆಡಿಎಸ್ ಪಾದಯಾತ್ರೆಯ ಬಗ್ಗೆ ಲಘು ಹಾಸ್ಯದ ಮೂಲಕ ಹೇಳಿಕೆಯನ್ನು ನೀಡಿದ್ದರು. ಇದುವರೆಗೆ ನಡೆದ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಒಂದು ಮಟ್ಟಿಗೆ ಯಶಸ್ಸನ್ನು ಪಡೆದಿರುವುದಂತೂ ಹೌದು. ಇದರ ಜೊತೆಗೆ, ಹೊಸ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕಾತಿಯಿಂದ, ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹೊಸ ಹುರುವು ಬರಬಹುದು ಎನ್ನುವುದು ಗೌಡ್ರ ಲೆಕ್ಕಾಚಾರ.
ಹಳೇ ಮೈಸೂರು ಭಾಗದ ಮತಗಳನ್ನು ಮಾತ್ರ ನಂಬಿಕೊಂಡರೆ ಕಷ್ಟ
ಜಿಲ್ಲಾ ಘಟಕದ ಅಧ್ಯಕ್ಷರ ನೇಮಕಾತಿಯಲ್ಲೂ ಎಲ್ಲಾ ಜಾತಿಯವರಿಗೆ ಮಣೆಹಾಕಲಿದ್ದೇವೆ ಎಂದು ಗೌಡ್ರು ಹೇಳಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವುದಾಗಿ ಹೇಳಿದ್ದಾರೆ. ಹಳೇ ಮೈಸೂರು ಭಾಗದ ಮತಗಳನ್ನು ಮಾತ್ರ ನಂಬಿಕೊಂಡರೆ ಕಷ್ಟ ಎನ್ನುವುದನ್ನು ಅರಿತಿರುವ ಗೌಡ್ರು, ಹೊಸಹೊಸ ಹೆಜ್ಜೆಯನ್ನು ಇಡುತ್ತಿದ್ದಾರೆ. ಇದು ಹೇಗೆ ವರ್ಕೌಟ್ ಆಗುತ್ತೆ ಎನ್ನುವುದು ಕಾದುನೋಡಬೇಕಿದೆ.