ಬೆಂಗಳೂರು-ಮೈಸೂರು-ಮುರುಡೇಶ್ವರ ರೈಲು ವೇಳಾಪಟ್ಟಿ ಬದಲಿಸಿ
ಬೆಂಗಳೂರು, ಸೆಪ್ಟೆಂಬರ್ 22; ಮಂಗಳೂರು ತನಕ ಮಾತ್ರವಿದ್ದ ಬೆಂಗಳೂರು-ಮೈಸೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಈ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ನೈಋತ್ಯ ರೈಲ್ವೆ ಕಳೆದ ವಾರದಿಂದ ಬೆಂಗಳೂರು- ಮಂಗಳೂರು ವಯಾ ಮೈಸೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿತ್ತು. ಇದರಿಂದಾಗಿ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಿದೆ.

ರೈಲು ನಂಬರ್ 16585/ 16586 ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಇದರ ಹಿಂದೆ ಯಾವ ಲಾಬಿ ಅಡಗಿದೆ? ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ. ರೈಲು ಮಂಗಳೂರು ಮತ್ತು ಸುರತ್ಕಲ್ ನಡುವೆ ನಿಧಾನವಾಗಿ ಸಂಚಾರ ನಡೆಸುತ್ತಿದೆ. ಆದ್ದರಿಂದ ವೇಳಾಪಟ್ಟಿ ಬದಲಿಸಿ ಎಂಬುದು ಬೇಡಿಕೆಯಾಗಿದೆ.
ಮೂರು ಗಂಟೆಗಳ ವಿಳಂಬ; ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ರೈಲು ಮಂಗಳೂರಿಗೆ 8.15ಕ್ಕೆ ಆಗಮಿಸುತ್ತದೆ. ಅಲ್ಲಿಂದ ಸುರತ್ಕಲ್ಗೆ ಬರುವಾಗ 11 ಗಂಟೆ ಆಗುತ್ತಿದೆ. ಈ ಮೂರು ಗಂಟೆಯ ವಿಳಂಬ ತಪ್ಪಿಸಿ, ಅವೈಜ್ಞಾನಿಕವಾಗಿರುವ ವೇಳಾಪಟ್ಟಿ ಬದಲಾಯಿಸಿ ಎಂಬುದು ಆಗ್ರಹವಾಗಿದೆ.
ಮಂಗಳೂರು ಸುರತ್ಕಲ್ ನಡುವಿನ ಅಂತರ 20 ಕಿ. ಮೀ. ಇದನ್ನು ಕ್ರಮಿಸಲು 3.30 ಗಂಟೆ ತೆಗೆದುಕೊಳ್ಳುವುದು ಏಕೆ?. ಈ ಅವೈಜ್ಞಾನಿಕ ವೇಳಾಪಟ್ಟಿ ಸರಿ ಪಡಿಸಿದರೆ ರೈಲನ್ನು ಗೋಕರ್ಣ, ಕಾರವಾರ ತನಕ ವಿಸ್ತರಣೆ ಮಾಡಬಹುದು ಎಂಬುದು ಪ್ರಯಾಣಿಕರ ಅಭಿಪ್ರಾಯ.
ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಮಂಗಳೂರು-ಕುಂದಾಪುರ ನಡುವೆ 2 ಗಂಟೆಯಲ್ಲಿ ಸಂಚಾರ ನಡೆಸುತ್ತಿದೆ. ಅಷ್ಟೇ ನಿಲುಗಡೆ ಇರುವ ಬೆಂಗಳೂರು-ಮುರುಡೇಶ್ವರ ರೈಲು ಇದೇ ಮಾರ್ಗದಲ್ಲಿ ಸಂಚಾರ ನಡೆಸಲು 3 ಗಂಟೆ ಯಾಕೆ ತೆಗೆದುಕೊಳ್ಳುತ್ತದೆ ಎಂಬುದು ಪ್ರಮಾಣಿಕರ ಪ್ರಶ್ನೆಯಾಗಿದೆ.
ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಗೊಂದಲದ ಕಾರಣ ಈ ವಿಳಂಬವಾಗುತ್ತಿದೆ. ಸುರತ್ಕಲ್ಗೆ ಬಂದು 30 ರಿಂದ 40 ನಿಮಿಷ ಕಾಯುವ ಬದಲು ಬೇಗ ಬರುವಂತೆ ಆದರೆ ಉಡುಪಿ, ಕುಂದಾಪುರಕ್ಕೆ ಬೇಗ ತಲುಪಬಹುದು ಎಂಬುದು ಪ್ರಯಾಣಿಕರ ಸಲಹೆಯಾಗಿದೆ.
ಮಂಗಳೂರು ಸೆಂಟ್ರಲ್ನಿಂದ 8.40ಕ್ಕೆ ಹೊರಡುವ ರೈಲು ಕುಂದಾಪುರಕ್ಕೆ 11.45, ಮುರುಡೇಶ್ವರಕ್ಕೆ 1.35ಕ್ಕೆ ತಲುಪುತ್ತದೆ. ಇದು ಬಹಳ ವಿಳಂಬವಾಗಿದೆ. ಮಂಗಳೂರು ಸೆಂಟ್ರಲ್ನಿಂದ ಮುರುಡೇಶ್ವರಕ್ಕೆ ರೈಲು ಮೂರು ಗಂಟೆಯಲ್ಲಿ ತಲುಪಬಹುದು ಎಂದು ಪ್ರಯಾಣಿಕರು ಹೇಳಿದ್ದಾರೆ.
ಮುರುಡೇಶ್ವರದಿಂದ 2.10ಕ್ಕೆ ಹೊರಡು ರೈಲು 3.10ಕ್ಕೆ ಕುಂದಾಪುರದಿಂದ ಹೊರಡುತ್ತದೆ. ಉಡುಪಿಗೆ 3.50ಕ್ಕೆ ತಲುಪುತ್ತದೆ. 6.25ಕ್ಕೆ ಮಂಗಳೂರು ಸೆಂಟ್ರಲ್ಗೆ ಬರುತ್ತದೆ. ರೈಲಿನ ವೇಳಾಪಟ್ಟಿ ಪ್ರಯಾಣಿಕರಿಗೆ ಪೂರಕವಾಗಿಲ್ಲ. ಮರುಡೇಶ್ವರದಿಂದ ಸಂಜೆ ಹೊರಡುವಂತೆ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಈ ರೈಲಿನ ಮೂಲಕ ಮೈಸೂರು, ಉಡುಪಿ, ಆನೆಗುಡ್ಡೆ, ಹಟ್ಟಿಯಂಗಡಿ, ಕೊಲ್ಲೂರು, ಈಡಗುಂಜಿ, ಗೋಕರ್ಣಕ್ಕೆ ಹಲವಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಸರಿಪಡಿಸಿ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ನಡೆಸಿದ ಹೋರಾಟದ ಫಲವಾಗಿ ಬೆಂಗಳೂರು-ಮೈಸೂರು-ಮಂಗಳೂರು ರೈಲು ಮುರುಡೇಶ್ವರ ತನಕ ವಿಸ್ತರಣೆಯಾಗಿದೆ. ಇದರಿಂದ ಕರ್ನಾಟಕ ಕರಾವಳಿ ಭಾಗದ ಜನರಿಗೆ ಅನುಕೂಲವಾಗಿದೆ.












Click it and Unblock the Notifications