ಎಲ್ಲರ ಭಾವನೆ ಗಮನಿಸಿ ಗಣೇಶೋತ್ಸವ ಆಚರಣೆಗೆ ತೀರ್ಮಾನ: ಸಿಎಂ ಬಸವರಾಜ ಬೊಮ್ಮಾಯಿ!
ಬೆಂಗಳೂರು, ಆ. 30: ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಸೇರಿದಂತೆ ಕೊರೊನಾ ವೈರಸ್ ಕುರಿತು ತೀರ್ಮಾನ ಮಾಡಲು ಕೆಲ ಹೊತ್ತಿನಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗಲಿದೆ. ಜೊತೆಗೆ ಈಗಾಗಲೇ ಆರಂಭವಾಗಿರುವ ಶಾಲಾ ತರಗತಿಗಳು ಹಾಗೂ ಗಣೇಶ ಹಬ್ಬ ಆಚರಣೆ ಕುರಿತೂ ಸಭೆಯಲ್ಲಿ ಚರ್ಚೆ ಆಗಲಿದೆ ಎಂಬ ಮಾಹಿತಿಯಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾಹಿತಿ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತಜ್ಞರ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ. ಗಣೇಶ ಉತ್ಸವ ಆಚರಣೆ ಕುರಿತು ಮಾತಣಾಡಿರುವ ಸಿಎಂ, "ಸರ್ಕಾರ ಎಲ್ಲವನ್ನೂ ಗಮನಿಸಿದೆ. ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಜೊತೆಗೆ ಮೂರನೇ ಅಲೆಯ ಬಗ್ಗೆ ತಜ್ಞರು ಹೇಳಿದ್ದಾರೆ. ಕಳೆದ ವರ್ಷ ಏನಾಯ್ತು, ಈ ವರ್ಷ ಏನಾಗಿದೆ ಎಂಬುದನ್ನು ನೋಡುತ್ತೇವೆ. ಆ ಬಳಿಕ ತಜ್ಞರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
ಜೊತೆಗೆ ವಿಧಾನಸೌಧದಲ್ಲಿ ನಡೆದ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆಯ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. "ರಾಜ್ಯದಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳು ಇವೆ. ಆ ಪ್ರಕರಣಗಳ ಸಾಕ್ಷಿಗಳಿಗೆ ಸುರಕ್ಷತೆ ನೀಡಬೇಕು. ಅವರಿಗೆ ಸೂಕ್ತವಾದ ರಕ್ಷಣೆ ಕೊಡಬೇಕು. ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ನ್ಯಾಯವಾದಿಗಳನ್ನು ನೇಮಕ ಮಾಡುತ್ತೇವೆ. ಇನ್ನೂ ಸುಮಾರು 1.10 ಲಕ್ಷ ಪ್ರಖರಣಗಳಿವೆ. ಪ್ರಕರಣಗಳನ್ನ ನೋಡಿಕೊಳ್ಳುವುದಕ್ಕೆ ವಿಶೇಷ ಸಮಿತಿ ನೇಮಕ ಮಾಡುತ್ತೇವೆ" ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
"ಎಸ್ಸಿ, ಎಸ್ಟಿ ನಕಲಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಅದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗೆ ನಕಲಿ ಪ್ರಮಾಣಪತ್ರ ಕೊಟ್ಟಿರುವ ಅಧಿಕಾರಿ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ಪರಿಶಿಷ್ಟ ಜಾತಿ, ಪಂಗಡದ ಯೋಜನೆಗಳ ವಿಳಂಬಕ್ಕೆ ಕಡಿವಾಣ ಹಾಕುವ ನಿರ್ಧಾರವಾಗಿದೆ. ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಕೆಲವೊಂದು ನಿಯಮಗಳು ಅಡ್ಡಿಯಾಗಿವೆ. ಅವುಗಳಿಗೆ ಕಾನೂನಿನಲ್ಲಿ ತಿದ್ದುಪಡಿ ತರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Recommended Video