Breaking; ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ವರ್ಗಾವಣೆ
ಬೆಂಗಳೂರು, ಅಕ್ಟೋಬರ್ 20; ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಅವರ ವಿರುದ್ಧ ಹಲವಾರು ಆರೋಪ ಕೇಳಿ ಬಂದಿತ್ತು.
ಕರ್ನಾಟಕ ಸರ್ಕಾರ ಗುರುವಾರ ಈ ಕುರಿತು ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿ. ಎಂ. ಲಕ್ಷ್ಮೀ ಪ್ರಸಾದ್ರನ್ನು ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿ ನಿಶಾ ಜೇಮ್ಸ್ ವಿರುದ್ಧ ದೂರು ನೀಡಿದ್ದರು. 20ಕ್ಕೂ ಅಧಿಕ ಎಫ್ಡಿಎ, ಎಸ್ಡಿಎಗಳು ಆಡಳಿತ ವಿಭಾಗದ ಎಡಿಜಿಪಿ ಡಾ. ಎಂ. ಎ. ಸಲೀಂಗೆ ದೂರು ನೀಡಿದ್ದರು.
ದೂರುಗಳು ಏನು?: ನಿಶಾ ಜೇಮ್ಸ್ ಸಾಮಾನ್ಯ ವಿಷಯಗಳನ್ನು ದೊಡ್ಡದಾಗಿ ಮಾಡಿ ಕಾನೂನು ಬಾಹಿರವಾಗಿ ಶಿಸ್ತು ಕ್ರಮಕ್ಕೆ ಮುಂದಾಗುತ್ತಾರೆ. ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನು ತಡರಾತ್ರಿಯ ತನಕ ಕಚೇರಿಯಲ್ಲಿ ಉಳಿಸಿಕೊಳ್ಳುತ್ತಾರೆ ಎಂಬುದು ಪ್ರಮುಖ ದೂರು.
ಸಂಜೆ 6ಕ್ಕೆ ಕೆಲಸ ಆರಂಭ ಮಾಡಿ ರಾತ್ರಿ 3ಕ್ಕೆ ಕೆಲಸ ಮುಗಿಸುತ್ತಾರೆ. ಇದರಿಂದಾಗಿ ಕೌಟುಂಬಿಕ ಜೀವನಕ್ಕೆ ತೊಂದರೆಯಾಗುತ್ತಿದೆ. ಅವರ ಕಿರುಕುಳದಿಂದ ನಿದ್ದೆಯ ಸಮಸ್ಯೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ನಿಶಾ ಜೇಮ್ಸ್ ವಿರುದ್ಧವಾಗಿ 13 ಪುಟಗಳ ದೂರು ಸಲ್ಲಿಕೆಯಾಗಿತ್ತು. ಆದರೆ ಕೆಲವು ಸಿಬ್ಬಂದಿಗಳು ಅವರ ಬೆಂಬಲಕ್ಕೆ ನಿಂತಿದ್ದರು. ವಿ ಸಪೋರ್ಟ್ ಯೂ ಎಂಬ ಅಭಿಯಾನ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು.
ಈ ವಿಚಾರದ ಕುರಿತು ಇಲಾಖೆಯಲ್ಲಿಯೂ ಚರ್ಚೆ ನಡೆದಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಈ ದೂರಿನ ಬಗ್ಗೆ ಇಲಾಖಾ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದರು.












Click it and Unblock the Notifications