ದುರ್ಬಲ ಸಿಎಂ ಇದ್ದಾಗ ಮಾತ್ರ ಡಿಸಿಎಂ ಹುದ್ದೆ ಬೇಕು: ರೇಣುಕಾಚಾರ್ಯ
ಬೆಂಗಳೂರು, ಡಿ. 17: ಉಪಮುಖಮಂತ್ರಿ ಸ್ಥಾನದ ಬಗ್ಗೆ ಕರ್ನಾಟಕದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಹಾಲಿ ಮೂವರು ಡಿಸಿಎಂಗಳ ಜೊತೆಗೆ ಇನ್ನು ಎರಡು ಡಿಸಿಎಂ ಹುದ್ದೆ ಸೃಷ್ಟಿಸುವ ಸುದ್ದಿ ಹಬ್ಬಿದೆ.
ಈ ನಡುವೆ ಡಿಸಿಎಂ ಹುದ್ದೆಗಳ ವಿಚಾರದಲ್ಲಿ ಯಡಿಯೂರಪ್ಪ ಆಪ್ತ, ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೊಟ್ಟಿರುವ ಹೇಳಿಕೆ ಬಿಜೆಪಿಯಲ್ಲಿ ಸಂಚಲನವನ್ನುಂಟು ಮಾಡಿದೆ. ಸಿಎಂ ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿ ನಿವಾಸದ ಬಳಿ ಶಾಸಕ ರೇಣುಕಾಚಾರ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ರಾಜ್ಯದಲ್ಲಿ ಸಿಎಂ ದುರ್ಬಲರಾಗಿದ್ದಾಗ ಡಿಸಿಎಂ ಹುದ್ದೆ ಅಗತ್ಯವಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮರ್ಥರಿದ್ದಾರೆ, ಅವರು ಪ್ರಬಲ ನಾಯಕರು. ಅಧಿಕಾರ ವಿಕೇಂದ್ರೀಕರಣ ಆಗಬಾರದು. ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆಗಳ ಅಗತ್ಯವಿಲ್ಲ. ಡಿಸಿಎಂ ಸ್ಥಾನಗಳು ಇರುವುದು ಬೇಡ ಅಂತ ನೇರವಾಗಿ ಯಡುಯೂರಪ್ಪರಿಗೆ ಆಗ್ರಹ ಮಾಡಿದ್ದೇನೆ ಎಂದಿದ್ದಾರೆ.

ಮಂತ್ರಿಸ್ಥಾನವನ್ನೇ ಗಿಟ್ಟಿಸಿಕೊಳ್ಳಲಾಗದ ರೇಣುಕಾಚಾರ್ಯ
ಅಷ್ಟಕ್ಕೂ ಮಂತ್ರಿಸ್ಥಾನವನ್ನೇ ಗಿಟ್ಟಿಸಿಕೊಳ್ಳಲಾಗದ ಶಾಸಕ ರೇಣುಕಾಚಾರ್ಯ ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವಿದೆಯಾ ಎಂಬುದನ್ನ ನೋಡಿದರೆ ಹೌದು ಎನ್ನುತ್ತಾರೆ ಬಿಜೆಪಿ ನಾಯಕರು.
ಹೀಗಾಗಿ ರೇಣುಚಾರ್ಯ ಬಹಿರಂಗವಾಗಿ ಕೊಟ್ಟಿರುವ ಹೇಳಿಕೆ ಕೇವಲ ಅವರ ಮಾತಲ್ಲ. ಬದಲಿಗೆ ಯಡಿಯೂರಪ್ಪ ಅಂತರಂಗದ ಅನಿಸಿಕೆ ಅಂತಾನೆ ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ.
ರೇಣುಕಾಚಾರ್ಯ ಸಧ್ಯ ಬರಿ ಬಿಜೆಪಿಯ ಶಾಸಕ ಮಾತ್ರ ಅಲ್ಲ. ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಕೂಡ. ಹಾಗಾಗಿಯೆ ಅವರು ಹೇಳಿಕೆ ಕೊಡುತ್ತಿದ್ದಂತೆಯೆ ಬಿಜೆಪಿಯಲ್ಲಿ ಸಂಚಲನವುಂಟಾಗಿದೆ.

ಹಿಂದೆಯೂ ರೇಣುಕಾಚಾರ್ಯ ಹೇಳಿದಂತೆ ಆಗಿವೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅತ್ಯಾಪ್ತ ಶಾಸಕ ಎಂ.ಪಿ. ರೇಣುಕಾಚಾರ್ಯ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಸವರಾಜ್ ಬೊಮ್ಮಾಯಿ, ಹರಿಹರದ ಮಾಜಿ ಶಾಸಕ ಬಿ.ಪಿ. ಹರೀಶ್, ಶೋಭಾ ಕರಂದ್ಲಾಜೆ ಜೊತೆ ಚರ್ಚೆ ಮಾಡಿಯೇ ಯಡಿಯೂರಪ್ಪ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದರು.
ಆಗಲೂ ಇವರೆಲ್ಲರ ಹೇಳಿಕೆ ಹಿಂದೆ ಯಡಿಯೂರಪ್ಪನವರ ನಡೆ ಅಡಗಿರುತ್ತಿತ್ತು. ಇವರು ಹೇಳಿಕೆ ಕೊಟ್ಟರೆ ಅದು ಯಡಿಯೂರಪ್ಪನವರ ಮುಂದಿನ ನಡೆಯ ಮನ್ಸೂಚನೆ ಎಂದೆ ಪರಿಗಣಿಸಲಾಗುತ್ತಿತ್ತು.

ಹೈಕಮಾಂಡ್ ಆದೇಶದಂತೆ ಡಿಸಿಎಂ ಹುದ್ದೆಗಳ ಸೃಷ್ಟಿ
ಸಿಎಂ ಯಡಿಯೂರಪ್ಪ ಅವರಿಗೂ ರಾಜ್ಯದಲ್ಲಿ ಡಿಸಿಎಂ ಹುದ್ದೆಗಳಿರುವುದಕ್ಕೆ ಸಹಮತವಿಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರದ ಹಿನ್ನೆಲೆಯಲ್ಲಿ ಬಿಎಸ್ ವೈ ಎಲ್ಲದಕ್ಕೂ ಹೈಕಮಾಂಡ್ ಎದುರು ನೋಡುವಂತಾಗಿತ್ತು.
ಇದೀಗ ಉಪ ಚುನಾವಣೆಯ ಗೆಲವು ಯಡಿಯೂರಪ್ಪ ಅವರಿಗೆ ಬಲ ತುಂಬಿದೆ. ಹಾಗಾಗಿಯೆ ಆಪ್ತನ ಮೂಲಕ ಚರ್ಚೆಗೆ ನಾಂದಿ ಹಾಡಿದಾರೆ ಎನ್ನಲಾಗಿದೆ.

ಹುದ್ದೆ ರದ್ದಾದ್ರೆ ಬಿಜೆಪಿ ಹಿರಿಯ ಶಾಸಕರಿಗೂ ಸಮಾಧಾನ
ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದು, ಚುನಾವಣೆಯಲ್ಲಿ ಗೆದ್ದರೂ ಮಂತ್ರಿಸ್ಥಾನ ಸಿಗದ ಬಿಜೆಪಿ ಹಿರಿಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಸಲಾವು ಯಡಿಯೂರಪ್ಪ ಅವರ ಮುಂದಿದೆ. ಹಾಗಾಗಿ ಸಾಂವಿಧಾನಿಕವಲ್ಲದ ಡಿಸಿಎಂ ಹುದ್ದೆಗಳನ್ನು ರದ್ದು ಮಾಡಿಸುವ ನಿಟ್ಟಿನಲ್ಲಿಯೆ ಇಂಥದ್ದೊಂದು ಹೇಳಿಕೆ ಬಂದಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ರಾಜಕೀಯ ಬಲ್ಲವರು.
ಡಿಸಿಎಂ ಹುದ್ದೆ ರದ್ದು ಮಾಡಿದರೆ ಬಿಜೆಪಿ ಹಿರಿಯ ಶಾಸಕರು ಸಮಾಧಾನವಾಗುವ ಸಾಧ್ಯತೆಗಳಿವೆ. ಹಾಗಾಗಿಯೆ ಇಂಥದ್ದೊಂದು ಹೇಳಿಕೆ ರೇಣುಕಾಚಾರ್ಯ ಅವರಿಂದೆ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications