ದಲಿತ ನಾಯಕರು ಮುಖ್ಯಮಂತ್ರಿ : ಯಾರು, ಏನು ಹೇಳಿದರು?
ಬೆಂಗಳೂರು, ಜ.12 : 'ಕರ್ನಾಟಕದಲ್ಲಿ ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು' ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಈ ಚರ್ಚೆಗೆ ಸೇರಿಕೊಂಡಿದ್ದು, ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು 'ದಲಿತ ನಾಯಕರೊಬ್ಬರು ಕಾಂಗ್ರೆಸ್ನಿಂದ ರಾಜ್ಯದ ಮುಖ್ಯಮಂತ್ರಿಯಾಗಿಯೇ ಆಗುತ್ತಾರೆ' ಎಂದು ಗುರುವಾರ ಹೇಳಿಕೆ ನೀಡಿದ್ದರು. ನಂತರ ಹಲವು ನಾಯಕರು ಈ ಚರ್ಚೆಗೆ ಧ್ವನಿಗೂಡಿಸಿದ್ದಾರೆ.
ದಲಿತರು ಮುಖ್ಯಮಂತ್ರಿಯಾಗುವ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ್ದ ವಿ.ಶ್ರೀನಿವಾಸ ಪ್ರಸಾದ್, ದಲಿತರು ರಾಜ್ಯದಲ್ಲಿ ಮುಖ್ಯಮಂತ್ರಿ ಯಾಗುವ ಸಾಧ್ಯತೆ ಇದ್ದರೆ ಅದು ಕಾಂಗ್ರೆಸ್ನಲ್ಲಿ ಮಾತ್ರ, ಕಾಂಗ್ರೆಸ್ನಿಂದಲೇ ದಲಿತ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ದಲಿತರು ಮುಖ್ಯಮಂತ್ರಿ ಯಾರು ಏನು ಹೇಳಿದರು ನೋಡೋಣ ಬನ್ನಿ.

'ಯಾರು ಹೇಳಿದ್ದಾರೋ ಅವ್ರನ್ನೇ ಕೇಳಿಕೊಳ್ಳಿ'
ರಾಜ್ಯಕ್ಕೆ ದಲಿತ ನಾಯಕನೊಬ್ಬ ಮುಖ್ಯಮಂತ್ರಿ ಆಗುವುದು ಖಚಿತ ಎಂಬ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷವಾದ ಪ್ರತಿಕ್ರಿಯೆಯನ್ನು ನೀಡಿದ್ದು, 'ಈ ಬಗ್ಗೆ ಯಾರು ಹೇಳಿದ್ದರೋ ಅವರನ್ನೇ ಕೇಳಿಕೋಳ್ಳಿ, ನನ್ನನ್ನು ಏನು ಕೇಳ್ತಿರಿ ಎಂದು' ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀಗೆ ಹೇಳುವಾಗ ಸಚಿವ ಶ್ರೀನಿವಾಸ ಪ್ರಸಾದ್ ಅವರ ಪಕ್ಕದಲ್ಲಿಯೇ ಇದ್ದರು.

ನನ್ನನ್ನೂ ನಿರ್ಲಕ್ಷಿಸಬೇಡಿ : ಪರಮೇಶ್ವರ
ದಲಿತರು ಸಿಎಂ ಆಗುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು, 'ಯಾರನ್ನೂ ನಿರ್ಲಕ್ಷಿಸಬಾರದು ಎನ್ನುವುದು ನನಗೂ ಹಾಗೂ ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆ. ಜೀವನದ ಯಾವುದಾದರೊಂದು ಘಟ್ಟದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುತ್ತೇವೆ' ಎಂದು ಮೈಸೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.

ಸಿದ್ದರಾಮಯ್ಯ ನೇತೃತ್ವದಲ್ಲೇ ವೇದಿಕೆ ಸಿದ್ಧ
ದಲಿತರು ಮುಂದಿನ ಸಿಎಂ ಆಗುವ ಕುರಿತು ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು. ಭವಿಷ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮೆಲ್ಲರ ಬಯಕೆ. ಮುಂದಿನ ಚುನಾವಣೆ ನಂತರ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಸಿದ್ದರಾಮಯ್ಯ ನೇತೃತ್ವದಲ್ಲೇ ವೇದಿಕೆ ಸಿದ್ಧಪಡಿಸಲಾಗುವುದು' ಎಂದು ಹೇಳಿದ್ದಾರೆ.

ದಲಿತರು ಸಿಎಂ ಆಗುವ ಅವಕಾಶ ಕಾಂಗ್ರೆಸ್ನಲ್ಲಿ ಮಾತ್ರ
'ಬಿಜೆಪಿ ಮತ್ತು ಜೆಡಿಎಸ್ನಂತಹ ಪಕ್ಷಗಳಲ್ಲಿ ದಲಿತರಷ್ಟೆ ಅಲ್ಲ, ಇತರೆ ಕೆಳವರ್ಗದವರೂ ಸಿಎಂ ಆಗಬಹುದು ಎಂಬುದನ್ನು ಯೋಚಿಸುವಂತೆಯೂ ಇಲ್ಲ. ಆದರೆ, ಕಾಂಗ್ರೆಸ್ನಲ್ಲಿ ಖಂಡಿತ ಅವಕಾಶವಿದ್ದು, ಮುಂಬರುವ ದಿನಗಳಲ್ಲಿ ದಲಿತ ಸಮುದಾಯದ ಮುಖ್ಯಮಂತ್ರಿಯನ್ನು ನೋಡಬಹುದು' ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಇದು ಸೂಕ್ತ ವೇದಿಕೆಯಲ್ಲ : ಮುನಿಯಪ್ಪ
ದಲಿತರು ಸಿಎಂ ಆಗುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಆದಿಜಾಂಬವ ಮಹಾಸಭಾ ಮತ್ತು ಮಾದಿಗ ಮೀಸಲು ಹೋರಾಟ ಸಮಿತಿಯ ಸಭೆಯ ವೇಳೆ ಮಾತನಾಡಿದ ಅವರು, 'ಈ ಸಂಬಂಧ ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ. ಪಕ್ಷಾತೀತ ಸಭೆ ಕರೆಯಲಾಗಿದೆ' ಎಂದು ಹೇಳಿದರು.












Click it and Unblock the Notifications