ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ: ಮುಂದಿರುವ ದಾರಿಯೇನು?
ಬೆಂಗಳೂರು, ಆಗಸ್ಟ್ 7: ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಯಾಗಿ ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ನಿರ್ಗಮಿಸಿದ್ದಾರೆ. ಶಿವಕುಮಾರ್ ಅದೇ ಹಳೇ ಚಾರ್ಮ್ ನಲ್ಲಿ ಮತ್ತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಈಗ ಕಾಡುತ್ತಿರುವ ಏಕೈಕ ಪ್ರಶ್ನೆ ಮುಂದೇನು?
ಸದ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ ನಂತರ ಡಿಕೆ ಶಿವಕುಮಾರ್ ತಮ್ಮ ಕಾನೂನು ಸಲಹೆಗಾರರ ಮೊರೆ ಹೋಗಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 131ರ ಅಡಿಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಲಾಗಿದೆ. ಅಘೋಷಿತ ಆಸ್ತಿಗೆ ಸಂಬಂಧಿಸಿದಂತೆ ಈ ನೊಟೀಸ್ ನೀಡಲಾಗಿದೆ. ಇದು ಸಾಮನ್ಯ ಕ್ರಮ ಅಷ್ಟೆ.

ಮುಂದೆ ಆದಾಯ ತೆರಿಗೆ ಅಧಿಕಾರಿಗಳು ಡಿಕೆ ಶಿವಕುಮಾರ್ ರನ್ನು ವಿಚಾರಣೆ ನಡೆಸಲಿದ್ದಾರೆ. ಆದಾಯ, ವಶಕ್ಕೆ ಪಡೆದುಕೊಂಡ ದಾಖಲೆಗಳ ಸಂಬಂಧ ಅವರನ್ನು ಪ್ರಶ್ನಿಸಲಿದ್ದಾರೆ. ಶಿವಕುಮಾರ್ ಸಮಂಜಸ ಉತ್ತರ ನೀಡುತ್ತಾರೋ ಬಿಡುತ್ತಾರೋ ಆದರೆ ತಕ್ಷಣದ ಯಾವ ಕ್ರಮವನ್ನೂ ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ.
ಶಿವಕುಮಾರ್ ವಿಚಾರಣೆ ಮುಗಿಯುತ್ತಿದ್ದಂತೆ ವರದಿಯನ್ನು ಅಧಿಕಾರಿಗಳು ಸಿದ್ದಪಡಿಸಲಿದ್ದಾರೆ. ಈ ವರದಿಯಲ್ಲಿ ಹೇಳಿಕೆ, ದಾಳಿಯ ವಿವರಗಳು, ದಾಖಲೆಗಳ ವಿವರಗಳಿರಲಿವೆ. ಒಮ್ಮೆ ಈ ವರದಿ ದೆಹಲಿ ತಲುಪುತ್ತಿದ್ದಂತೆ ಐಟಿಯ ತನಿಖಾ ವಿಭಾಗದ ಮುಖ್ಯಸ್ಥರು ವರದಿಯತ್ತ ಕಣ್ಣಾಡಿಸಲಿದ್ದಾರೆ.
ಒಂದೊಮ್ಮೆ ವರದಿ ನೋಡಿದ ತನಿಖಾ ವಿಭಾಗದ ನಿರ್ದೇಶಕರಿಗೆ ಈ ವರದಿಯಲ್ಲಿ ಶಿವಕುಮಾರ್ ಮತ್ತು ಸಹಚರರು ಸುಳ್ಳು ಹೇಳಿದ್ದಾರೆ ಎಂದು ಅನಿಸಿದಲ್ಲಿ ತನಿಖೆಗೆ ಆದೇಶ ನೀಡಲಿದ್ದಾರೆ. ಈ ತನಿಖೆಯೆ ಆದಾರದ ಮೇಲೆ ಡಿಕೆ ಶಿವಕುಮಾರ್ ರನ್ನು ಕೋರ್ಟಿಗೆ ಎಳೆಯಲಾಗುತ್ತದೆ. ನಂತರ ಕೋರ್ಟ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಜಾರಿ ನಿರ್ದೇಶನಾಲಯದ ಪಾತ್ರವೇನು?
ಇದೀಗ ಇರುವ ಪ್ರಶ್ನೆ ಜಾರಿ ನಿರ್ದೇಶನಾಲಯ (ಇಡಿ) ಅಖಾಡಕ್ಕೆ ಇಳಿಯುತ್ತದೆಯೋ ಎಂಬುದು. ಸದ್ಯ ಜಾರಿ ನಿರ್ದೇಶನಾಲಯಕ್ಕೆ ಖಾಸಗಿ ದೂರು ದಾಖಲಾಗಿದೆ. ಅಮಾನ್ಯಗೊಂಡ ನೋಟುಗಳನ್ನು ಅಕ್ರಮವಾಗಿ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 'ಇಡಿ' ಈ ವಿಚಾರದಲ್ಲಿ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಿದೆ. ಸಾಕ್ಷ್ಯಗಳು ಸಿಕ್ಕಲ್ಲಿ ಅದರಂತೆ ತನಿಖೆ ನಡೆಸಲಿದೆ.
ಇದಲ್ಲದೆ ಒಂದೊಮ್ಮೆ ಐಟಿ ತನಿಖೆಯಲ್ಲಿ ಅಕ್ರಮವಾಗಿ ಆಸ್ತಿ ಖರೀದಿಸಲು ಲೇವಾದೇವಿ ಕಾಯ್ದೆಯನ್ನು ಉಲ್ಲಂಘಿಸಿದ್ದರೆ ನಂತರ ಆದಾಯ ತೆರಿಗೆ ಅಧಿಕಾರಿಗಳು ಪ್ರಕರಣವನ್ನು 'ಇಡಿ'ಗೆ ಶಿಫಾರಸ್ಸು ಮಾಡಲಿದ್ದಾರೆ. 'ಐಟಿ'ಯಂತೆ 'ಇಡಿ'ಗೂ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರವಿದೆ.












Click it and Unblock the Notifications