ಇವರೇ ಕೆಪಿಸಿಸಿ ಮುಂದಿನ ಅಧ್ಯಕ್ಷರು, ಅಧಿಕೃತ ಘೋಷಣೆಯೊಂದು ಬಾಕಿ!
ಬೆಂಗಳೂರು, ಜ.06: ಬಹಳಷ್ಟು ಕುತೂಹಲ ಕೆರಳಿಸಿದ್ದ ಮುಂದಿನ ಕೆಪಿಸಿಸಿ ಅಧ್ಯಕ್ಷರು ಯಾರೂ ಎಂಬುದಕ್ಕೆ ಸಂಕ್ರಾಂತಿ ಬಳಿಕ ಬಹುತೇಕ ತೆರೆ ಬೀಳಲಿದೆ. ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿಯಲಿದ್ದಾರೆ.
ಉಪ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತುಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ದರು.
ಈ ಮೂವರಲ್ಲಿ ಕೆಪಿಸಿಸಿ ಚುಕ್ಕಾಣಿ ಹಿಡಿಯುವವರು ಯಾರು?
ಇದೀಗ ಸಿದ್ದರಾಮಯ್ಯ ಅವರೇ ವಿಪಕ್ಷ ನಾಯಕರಾಗಿ ಮುಂದುವರೆಯಬೇಕೆಂದು ಹೈಕಮಾಂಡ್ ಸೂಚಿಸಿದೆ ಎಂಬ ಖಚಿತ ಮಾಹಿತಿ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದೆ.
ವೈದ್ಯರ ಸಲಹೆಯಂತೆ ವಿಶ್ರಾಂತಿಯಲ್ಲಿರುವ ಸೋನಿಯಾ ಗಾಂಧಿ
ದೆಹಲಿಯಲ್ಲಿ ವಿಪರೀತವಾಗಿ ಚಳಿ ಇರುವುದು ರಾಜ್ಯ ಕಾಂಗ್ರೆಸ್ ಸಾರಥಿಯ ಆಯ್ಕೆ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ವೈದ್ಯರ ಸಲಹೆ ಮೇರೆಗೆ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಅಂಧಿ ಅವರು ಅತಿ ಜರೂರಿ ತೀರ್ಮಾನಗಳ ಹೊರತು ಬೇರೆ ನಿರ್ಧಾರಗಳನ್ನು ಅವರು ಚರ್ಚೆ ಮಾಡುತ್ತಿಲ್ಲ.
ಹಾಗಾಗಿ ಕರ್ನಾಟಕದ ಕಾಂಗ್ರೆಸ್ ಸಾರಥಿ ಬಗ್ಗೆ ಸಧ್ಯಕ್ಕೆ ತೀರ್ಮಾನ ಆಗಿಲ್ಲ. ಆದರೆ ಎಲ್ಲರನ್ನೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂಬ ಸೂಚನೆ ಕಾಂಗ್ರೆಸ್ ಹೈಕಮಾಂಡ್ ನಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ರವಾನೆ ಆಗಿದೆ ಎಂಬ ಮಾಹಿತಿಯಿದೆ.
ಹಾಗಾಗಿ ಮಾಜಿ ಸಚಿವ ಡಿ.ಕೆ. ಶಿವಕುನಾರ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೂಚಿಸಿದಂತೆ ಡಿಕೆಶಿ ಅವರು ತಯಾರಿ ಆರಂಭಿಸಿದ್ದಾರೆ.
ರಾಜೀನಾಮೆ ಅಂಗೀಕಾರ ಮಾಡಿ, ಇಲ್ಲವೆ ತಿರಸ್ಕಾರ ಮಾಡಿ ಎಂದು ಮನವಿ
ಮೂರು ದಿನಗಳ ಹಿಂದೆ ನಡೆದಿದ್ದ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲೂ ರಾಜೀನಾಮೆ ಕುರಿತು ಶೀಘ್ರ ತೀರ್ಮಾನ ಮಾಡಿ ಎಂಬ ಮನವಿ ಮಾಡಿಕೊಳ್ಳಲಾಗಿದೆ. ಮನವಿಯನ್ನು ಅಹ್ಮದ್ ಪಟೇಲ್ ಹಾಗೂ ವೇಣುಗೋಪಾಲ್ ಮೂಲಕ ಹೈಕಮಾಂಡ್ ಗೆ ರವಾನೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮೂರು ಹೆಸರು ಶಿಫಾರಸು; ಯಾರವರು?
ಫೆಬ್ರುವರಿಯಲ್ಲಿ ನಡೆಯುವ ಜಂಟಿ ಅಧಿವೇಶನಕ್ಕು ಮೊದಲು ವಿಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ಮನವಿ ಮಾಡಿಕೊಂಡಿದ್ದಾರೆ. ಮನವಿ ಹಿನ್ನೆಲೆಯಲ್ಲಿ ಹೈಕಮಾಂಡ್ ಎರಡು ನಿರ್ಧಾರಗಳನ್ನು ಮಾಡಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಧ್ಯಕ್ಕಿಲ್ಲ
ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮುಂದುವರೆಯಲಿ ಎಂದು ಹೈಕಮಾಂಡ್ ಪುನರುಚ್ಚರಿಸಿದೆ. ಸಿದ್ದರಾಮಯ್ಯ ಅವರು ಸದನದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಸಮರ್ಥವಾಗಿ ವಿಷಯ ಮಂಡನೆ ಮಾಡುತ್ತಾರೆ ಎಂಬುದು ಹೈಕಮಾಂಡ್ ಅಭಿಪ್ರಾಯ.
ಸಧ್ಯಕ್ಕೆ ಸಿಎಲ್ಪಿ ನಾಯಕರ ನೇಮಕ ಮಾಡದಿರಲು ಹೈಕಮಾಂಡ್ ತೀರ್ಮಾನ ಮಾಡಿದೆ.
ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಹಿರಿಯ ನಾಯಕರ ಸಲಹೆಯಂತೆ ಮಾಡಲು ಕೈ ಹೈಕಮಾಂಡ್ ತೀರ್ಮಾನಿಸಿದೆ.
ಬಜೆಟ್ ಅಧಿವೇಶನಕ್ಕೆ ಮೊದಲು ನೇಮಕ ಸಾಧ್ಯತೆ
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ನೇಮಕ ಫೆಬ್ರುವರಿಯ ಜಂಟಿ ಅಧಿವೇಶನಕ್ಕು ಮೊದಲು ಪ್ರಕಟವಾಗಲಿದೆ. ವಿಪಕ್ಷನಾಯಕರಾಗಿ ಸಿದ್ದರಾಮಯ್ಯ ಮುಂದುವರೆಯಲಿದ್ದು, ಬೇರೆ ರಾಜ್ಯಗಳಲ್ಲಿನ ಕಾಂಗ್ರೆಸ್ ಪದ್ದತಿಯನ್ನು ರಾಜ್ಯದಲ್ಲೂ ಅನುಸರಿಸಲು ಹೈಕಮಾಂಡ್ ನಿರ್ಧಾರ ಮಾಡಿದೆ.
ವಿರೋಧ ಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕರ ಹುದ್ದೆಗಳನ್ನು ಈವರೆಗೆ ಸಿದ್ದರಾಮಯ್ಯ ಒಬ್ಬರೇ ನಿಭಾಯಿಸುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಸ್ಥಾನಕ್ಕೆ ಪ್ರತ್ಯೇಕ ನೇಮಕಾತಿ ಮಾಡಲು ಕೈ ಹೈಕಮಾಂಡ್ ತೀರ್ಮಾನಿಸಿದೆ.
ಆ ಮೂಲಕ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ ತಣಿಸುವ ಪ್ರಯತ್ನವೂ ಹೈಕಮಾಂಡ್ ನಡೆಯಲ್ಲಿ ಅಡಿಗಿದೆ ಎನ್ನಲಾಗ್ತಿದೆ.
ಒಟ್ಟಾರೆ ಮುಂದಿನ 2022ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಗಳನ್ನು 'ಕೈ'ಗೊಳ್ಳುತ್ತಿದೆ.