ಟಿಕೆಟ್ ಸಿಗೋಲ್ಲ ಎನ್ನುವ ಡಿಕೆಶಿ ಹೇಳಿಕೆ: ಪಕ್ಷದಲ್ಲೇ ಹಲವು ಕೌಂಟರ್
ಜಾರಿ ನಿರ್ದೇಶನಾಲಯದ ಬುಲಾವ್ ಮೇರೆಗೆ ನವದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇತ್ತ ಪಕ್ಷದಲ್ಲೇ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ. ಭಾರತ್ ಜೋಡೋ ವಿಚಾರ ಪಕ್ಷದಲ್ಲೇ ಸ್ಪಷ್ಟ ಬಿರುಕನ್ನು ತಂದೊಡ್ಡುತ್ತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಮಗೆ ಆಹ್ವಾನ ಬಂದಿಲ್ಲ, ನಾನ್ಯಾಕೆ ಹೋಗಲಿ ಎನ್ನುವ ಹೇಳಿಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ತಲ್ಲಣ ಮೂಡಿಸಿತ್ತು. ಈಗ, ಅದನ್ನು ಸರಿದಾರಿಗೆ ತರುವಷ್ಟರಲ್ಲಿ ಮತ್ತಷ್ಟು ಹಿರಿಯ ಮುಖಂಡರು ಅಸಮಾಧಾನವನ್ನು ಹೊರಹಾಕಿದ್ದಾರೆ.
"ಭಾರತ್ ಜೋಡೋ ಯಾತ್ರೆಯ ಸಿದ್ಧತೆಯ ನಡುವೆ @DKShivakumar ಹಾಗೂ @siddaramaiah ಅವರ ಆಂತರಿಕ ಕಲಹ ಮುಗಿಲು ಮುಟ್ಟಿದೆ. ಭಾರತ್ ಜೋಡೋ ಯಾತ್ರೆಯ ಬಳಿಕ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣ ಜೋಡಿಸಲು @INCKarnataka ಮತ್ತೊಂದು ಯಾತ್ರೆ ಆಯೋಜಿಸಲಿದೆಯೇ?" ಎಂದು ಬಿಜೆಪಿಯ ಐಟಿ ಸೆಲ್ ವ್ಯಂಗ್ಯವಾಡಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆಯ ಬಗ್ಗೆ ಸಭೆಯಲ್ಲಿ ಡಿಕೆಶಿ ಅಸಮಾಧಾನ ಹೊರಹಾಕಿದ್ದರು. ಅದಕ್ಕೇ, ಮಾಧ್ಯಮಗಳ ಮುಂದೆ ದೇಶಪಾಂಡೆ ಕೌಂಟರ್ ಕೊಟ್ಟಿದ್ದರು. ಈಗ ಆ ಪಟ್ಟಿಗೆ ಮತ್ತಿಬ್ಬರು ನಾಯಕರು ಸೇರ್ಪಡೆಯಾಗಿದ್ದಾರೆ.

ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ
ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆಗೆ ನನ್ನ ಕ್ಷೇತ್ರದಲ್ಲಿ ಜನರನ್ನು ಸೇರಿಸಲು ಸಾಧ್ಯವಿಲ್ಲ ಎಂದು ಆರ್.ವಿ.ದೇಶಪಾಂಡೆ ಹೇಳಿದ್ದರು. "ನನ್ನ ಸ್ಪೀಡಿಗೆ ಕೆಲಸ ಮಾಡುವವರು ಇಲ್ಲ, ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸದಿದ್ದರೆ ಟಿಕೆಟ್ ಸಿಗುವುದಿಲ್ಲ"ಎನ್ನುವ ಹೇಳಿಕೆಯನ್ನು ಡಿಕೆಶಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದೇಶಪಾಂಡೆ, "ಹೌದು ಅವರು ಓವರ್ ಸ್ಪೀಡ್ ನಲ್ಲಿದ್ದಾರೆ. ನಾನು ಕೂಡಾ ವಿದ್ಯಾರ್ಥಿ ನಾಯಕನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದವನು"ಎಂದು ಅವರಿಗೆ ತಿರುಗೇಟು ನೀಡಿದ್ದರು.

ಖಾರವಾಗಿ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್
ಟಿಕೆಟ್ ಸಿಗುವುದಿಲ್ಲ ಎನ್ನುವ ಡಿಕೆಶಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, "ಇಲ್ಲಿ ಎಲ್ಲರೂ ಕೆಲಸವನ್ನು ಮಾಡುತ್ತಿದ್ದಾರೆ. ಒಬ್ಬರು ಜಾಸ್ತಿ, ಇನ್ನೊಬ್ಬರು ಕಮ್ಮಿ ಎನ್ನುವುದಿಲ್ಲ. ಕೆಲವೊಂದು ಕಾರಣಗಳಿಂದ ಹೆಚ್ಚು ಸಕ್ರಿಯವಾಗಿರಲು ಸಾಧ್ಯವಾಗುವುದಿಲ್ಲ. ಟಿಕೆಟ್ ನೀಡುವುದು, ಬಿಡುವುದು ಒಬ್ಬರ ನಿರ್ಧಾರವಲ್ಲ, ಅದಕ್ಕೆ ಚುನಾವಣಾ ಸಮಿತಿ ಇರುತ್ತದೆ"ಎಂದು ದಿನೇಶ್ ಗುಂಡೂರಾವ್, ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.

ಅದಕ್ಕೆಂದೇ ಚುನಾವಣಾ ಸಮಿತಿ ಇರುತ್ತದೆ, ರಾಮಲಿಂಗ ರೆಡ್ಡಿ
"ಪಕ್ಷದ ಪರ ಕೆಲಸವನ್ನು ಮಾಡಿ ಎನ್ನುವ ಕಿವಿಮಾತನ್ನು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅಧ್ಯಕ್ಷರಾಗಿ ಮತ್ತು ಸಿಎಲ್ಪಿ ನಾಯಕರಾಗಿ ಚೆನ್ನಾಗಿ ಕೆಲಸ ಮಾಡಿ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಆಮೇಲೆ ಟಿಕೆಟ್ ನೀಡುವ ವಿಚಾರದಲ್ಲಿ ಅದಕ್ಕೆಂದೇ ಚುನಾವಣಾ ಸಮಿತಿ ಇರುತ್ತದೆ, ಸಮಿತಿ ಕ್ಷೇತ್ರದ ವರದಿಯನ್ನು ಆಧರಿಸಿ, ಟಿಕೆಟ್ ನೀಡಬೇಕೋ, ಬೇಡವೋ ಎಂದು ನಿರ್ಧರಿಸುತ್ತದೆ"ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ನನಗೆ ನಂಬರ್ ಬೇಕು, ಕ್ಷೇತ್ರಗಳಲ್ಲಿ ಶಾಸಕರು ಹೋಗಲೇಬೇಕು, ಡಿಕೆಶಿ
"ಕೆಲಸ ಮಾಡದೇ ಇರುವವರಿಗೆ ಟಿಕೆಟ್ ನೀಡಲು ಸಾಧ್ಯವೇ, ನನಗೆ ವಾಪಸ್ ಗೆಲ್ಲಬೇಕು. ನನಗೆ ನಂಬರ್ ಬೇಕು, ಕ್ಷೇತ್ರಗಳಲ್ಲಿ ಶಾಸಕರು ಹೋಗಲೇಬೇಕು, ಬರೀ ಮದುವೆಗೆ ಹೋಗುವುದಲ್ಲ. ಮನೆಮನೆಗೂ ಹೋಗಬೇಕು, ಅದು ನನ್ನ ಬಯಕೆ. ಶಾಸಕರಾದವರು ಮೊದಲು ತಮ್ಮ ಹೊಲವನ್ನು ಚೆನ್ನಾಗಿ ನೋಡಿಕೊಳ್ಳಬೇಕು"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ತಮ್ಮ ಮಾತನ್ನು ಪುನರುಚಿಸಿದ್ದಾರೆ.












Click it and Unblock the Notifications