Cyclone: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ, IMD ಮುನ್ಸೂಚನೆ ಏನಿದೆ?
ಬೆಂಗಳೂರು, ನವೆಂಬರ್ 11: ಹವಾಮಾನದಲ್ಲಿ ನಿರಂತರವಾಗಿ ಉಂಟಾಗುವ ಬದಲಾವಣೆಗಳು ಆಯಾ ಪ್ರದೇಶಗಳ ಭಾರಿ ಮಳೆ, ಚಳಿ, ಪ್ರವಾಹ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಹಲವು ದಿನಗಳಿಂದ ಅರಬ್ಬಿ ಹಾಗೂ ಬಂಗಾಳಕೊಲ್ಲಿ ಸಮುದ್ರದ ಮೇಲ್ಮೈನಲ್ಲಿ ವೈಪರಿತ್ಯಗಳು ಉಂಟಾಗಿ ಕಣ್ಮರೆಯಾಗುತ್ತವೆ. ಕೆಲವೊಂದು ತೀವ್ರ ಸ್ವರೂಪ ಪಡೆದು ವಾಯುಭಾರ ಕುಸಿತ ನಂತರ ಚಂಡಮಾರುತವಾಗಿ, ವ್ಯಾಪಕ ಮಳೆ ಸುರಿಸುತ್ತಿದೆ.
ಇಂತದ್ದೇ ವಾತಾವರಣವೊಂದು ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿದೆ. ಹೌದು..ನೈಋತ್ಯ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದೆ. ಇದು ಸಮುದ್ರ ಮಟ್ಟದಿಂದ 3.6 ಕಿಲೋ ಮೀಟರ್ ವರೆಗೆ ವಿಸ್ತರಿಸಿದೆ. ಇದರ ತೀವ್ರತೆ ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ 10ನೇ ನವೆಂಬರ್ರಂದು ಬೆಳಗ್ಗೆ 8.30 ಗಂಟೆ (IST) ಅದೇ ಪ್ರದೇಶದಲ್ಲಿ ಮುಂದುವರಿದಿದೆ. ಇದರ ಪ್ರಭಾವದಿಂದಾಗಿ ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಂಭವವಿದೆ. ಇದು ಮುಂದಿನ ಎರಡು ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ.
ಈ ವೈಪರಿತ್ಯ ಮುಂದಿನ 36 ಗಂಟೆಗಳಲ್ಲಿ ತೀವ್ರಗೊಂಡರೆ, ಅದು ಸ್ಪಷ್ಟ ವಾಯುಭಾರ ಕುಸಿತವಾಗಿ ಗೋಚರಿಸಲಿದೆ. ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿಯ ಪಶ್ಚಿಮ ಭಾಗಕ್ಕೆ ವೈಪರಿತ್ಯವು ನಿಧಾನವಾಗಿ ಚಲಿಸುವ ಸಾಧ್ಯತೆ ಇದೆ.
5.8 ಕಿಮೀ ಮತ್ತು 3.1 ಕಿಮೀ ಎತ್ತರದಲ್ಲಿ ಸ್ಟ್ರಫ್
ಇನ್ನೂ ಚಂಡಮಾರುತದ ಪರಿಚಲನೆಯು ನೈಋತ್ಯ ಬಂಗಾಳಕೊಲ್ಲಿಯ ಪೂರ್ವ ಮಧ್ಯ ಬಂಗಾಳ ಕೊಲ್ಲಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದಲ್ಲಿದೆ. ಇಲ್ಲಿ ಕಡಿಮೆ ಒತ್ತಡ ಗಾಳಿಯ ಪ್ರದೇಶ ರೂಪುಗೊಳ್ಳುತ್ತಿದೆ. ಎಲ್ಲ ದಿಕ್ಕಿನಿಂದಲೂ ಈ ಭಾಗದತ್ತ ಗಾಳಿಯು ವೇಗವಾಗಿ ಬೀಸುತ್ತಿದೆ.
ಇನ್ನೂ ದಕ್ಷಿಣ ಅರೇಬಿಯನ್ ಸಮುದ್ರದ ಮಧ್ಯ ಭಾಗಗಳಲ್ಲಿ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ಎತ್ತರದಲ್ಲಿ ಗುರುತಿಸಲಾಗಿದೆ. ಮುಂಗಾರು ಮಳೆಗೂ ಮುನ್ನ ಅಂದರೆ ಏಪ್ರಿಲ್ ಅಂತ್ಯ ಇಲ್ಲವೇ ಮೇ ತಿಂಗಳಿನಿಂದ ಡಿಸೆಂಬರ್-ಜನವರಿಗೆ ವರೆಗೆ ಸಮುದ್ರದಲ್ಲಿ ಆಗಾಗ ಸ್ಟ್ರಫ್, ಸುಳಿಗಾಳಿ, ಕಡಿಮೆ ಒತ್ತಡದ ಪ್ರದೇಶ, ಚಂಡಮಾರುತ ಪರಿಚಲನೆ ಸೃಷ್ಟಿಯಾಗುತ್ತಲೇ ಇರುತ್ತವೆ. ಯಾವಾಗ ಅವು ತೀವ್ರ ಸ್ವರೂಪ ಪಡೆದು, ಮಳೆ ಸುರಿಯಲು ಪ್ರಾರಂಭಿಸುತ್ತವೆಯೋ ಅದರ ಬಗ್ಗೆ ಐಎಂಡಿ ಮುನ್ಸೂಚನೆ ನೀಡುತ್ತದೆ.
ಸದ್ಯದ ಚಂಡಮಾರುತ ಪರಿಚಲನೆ ಪ್ರಭಾವ ಬೀರುವ ಮಟ್ಟಿಗೆ ದೊಡ್ಡದಾಗಿಲ್ಲ ಎನ್ನಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಕರ್ನಾಟಕಕ್ಕೆ ಏನಿದೆ ಮಳೆ ಮುನ್ಸೂಚನೆ
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮಾತ್ರವೇ ಮಳೆ ಆಗಬಹುದು. ಉಳಿದಂತೆ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ವ್ಯಾಪಕ ಮಳೆ ಮುನ್ಸೂಚನೆ ಸದ್ಯಕ್ಕೆ ಇಲ್ಲ ಎನ್ನಲಾಗಿದೆ.
ಶ್ರೀಲಂಕಾ, ತಮಿಳುನಾಡು ಕರಾವಳಿ, ಓಡಿಶಾ ಕರಾವಳಿ ಭಾಗದಲ್ಲಿ ಆಗಾಗ ಜೋರು ಮಳೆ ಬರುವ ಮುನ್ಸೂಚನೆ ಇದೆ. ಈ ವೈಪರಿತ್ಯದ ಗಾಳಿಯು ಭೂಮಿಗೆ ಸಮೀಪಿಸಿದರೆ ಇಲ್ಲೆಲ್ಲೆ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ.












Click it and Unblock the Notifications