ಗೋಹತ್ಯೆ ನಿಷೇಧ ಕುರಿತು ಇನ್ನಷ್ಟು ಚರ್ಚೆ ಅಗತ್ಯ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ನ 6: ದೇಶದಲ್ಲಿ ಗೋವು ಪವಿತ್ರ ಎಂದು ಪರಿಗಣನೆಯಾಗಿದ್ದು, ಗೋಹತ್ಯೆಯಿಂದ ಪಾರಂಪರಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವ ಅಗತ್ಯವಿದ್ದು, ಈ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ''ಗೋವು ಒಂದು ಪವಿತ್ರವಾದ ಪ್ರಾಣಿ ಎಂದು ನಂಬುವ ದೇಶ ನಮ್ಮದು. ಗೋವನ್ನು ಕುಟುಂಬದ ಸದಸ್ಯರಂತೆ ನಾವು ಗೌರವಿಸುತ್ತೇವೆ. ಗೋಹತ್ಯೆ ಹಿಂದೂಗಳ ಸಂಪ್ರದಾಯಕ್ಕೆ ವಿರುದ್ಧವಾದ ಕ್ರಮವಾಗಿದೆ. ಆದ್ದರಿಂದ ಗೋಹತ್ಯೆಗೆ ಅವಕಾಶ ನೀಡುವುದು ಸರಿಯಲ್ಲ. ದೇಶದಲ್ಲಿ ಗೋಹತ್ಯೆ ನಿಷೇಧ ಕ್ರಮ ಜಾರಿಯಾಗುವ ಅಗತ್ಯವಿದ್ದು, ಈ ಬಗ್ಗೆ ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ''ಎಂದರು.
ಇದೇ ವೇಳೆ ದೀಪಾವಳಿ ಸಂದರ್ಭದಲ್ಲಿ ರಾಜ್ಯದಲ್ಲಿ ಎಲ್ಲಾ ಬಗೆಯ ಪಟಾಕಿ ಮಾರಾಟ, ಬಳಕೆ ನಿಷೇಧದ ಕುರಿತು ಮಾತನಾಡಿ, ''ಆರೋಗ್ಯ ಇಲಾಖೆಯಡಿ ತಾಂತ್ರಿಕ ಸಲಹಾ ಸಮಿತಿಯ ವರದಿಯ ಶಿಫಾರಸಿನಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಟಾಕಿ ಸಿಡಿತ ನಿಷೇಧ ಕ್ರಮ ಕೈಗೊಂಡಿದ್ದಾರೆ. ಈ ಕ್ರಮವನ್ನು ಪಾಲಿಸುವ ಮೂಲಕ ಸರಳವಾಗಿ ಹಬ್ಬ ಆಚರಿಸಿ'' ಎಂದು ಸಚಿವರು ಮನವಿ ಮಾಡಿದರು.

ಸಚಿವ ಡಾ.ಕೆ.ಸುಧಾಕರ್ ಅವರು ಇಂದು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ, ಇಂದ್ರಧನುಷ್ ಲಸಿಕೆ ಅಭಿಯಾನ ಮೊದಲಾದ ಯೋಜನೆಗಳ ಕುರಿತು ಚರ್ಚಿಸಲು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ನಂತರ ಆಂಬ್ಯುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.












Click it and Unblock the Notifications