ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ, ಲಾಕ್ಡೌನ್ ಗುಮ್ಮ: ತಜ್ಞರು ಹೇಳೋದೇನು?
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಆರಂಭವಾದ ಕೊರೊನಾ ವೈರಸಿನ ಕಾಟ ಇನ್ನೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಹಾಮಾರಿ ಜಗತ್ತನ್ನು ಎಲ್ಲಿಗೆ ತಂದಿಡುತ್ತೋ ಎನ್ನುವ ಭೀತಿ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಮೂರನೇ ಅಲೆಯ ಎಚ್ಚರಿಕೆ ಮತ್ತೆ ಎದುರಾಗಿದೆ.
Recommended Video
ಕೇರಳ ಮತ್ತು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಲಾಕ್ಡೌನ್ ಆಗಬಾರದೆಂದರೆ ದಕ್ಷತೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರು ಲಾಕ್ಡೌನ್ ವಿಚಾರದಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೇ ನೀಡಿದ ಹೇಳಿಕೆ, ರಾಜ್ಯದ ಜನರಿಗೆ ಮತ್ತೆ ವೀಕೆಂಡ್ ಕರ್ಫ್ಯೂ, ಲಾಕ್ಡೌನ್ ಗುಮ್ಮ ಕಾಡುವಂತೆ ಮಾಡಿದೆ. ಮತ್ತೆ ಲಾಕ್ಡೌನ್ ಆಗುತ್ತಾ ಎನ್ನುವ ಚಿಂತೆಯಲ್ಲಿದ್ದಾರೆ ರಾಜ್ಯದ ಜನತೆ.
ಸಿಎಂ ಬಸವರಾಜ ಬೊಮ್ಮಾಯಿಯವರು ಕೋವಿಡ್ ಟಾಸ್ಕ್ ಫೋರ್ಸ್ ನೀಡುವ ಸಲಹೆಯನ್ನು ಜಾರಿಗೆ ತರುತ್ತಿದ್ದಾರೆ. ಆ ಕಾರಣಕ್ಕಾಗಿಯೇ, ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ಬಂದಿರುವುದು ಮತ್ತು ಗಡಿಯಲ್ಲಿ ತಪಾಸಣೆ ಕಟ್ಟುನಿಟ್ಟಾಗಿ ಸಾಗುತ್ತಿರುವುದು. ಈ ವೀಕೆಂಡ್ ಕರ್ಫ್ಯೂ ಮತ್ತು ಲಾಕ್ಡೌನ್ ಅನ್ನು ರಾಜ್ಯಾದ್ಯಂತ ಹೇರಬೇಕಾ ಎನ್ನುವ ವಿಚಾರದಲ್ಲಿ ತಜ್ಞರು ಏನು ಹೇಳುತ್ತಾರೆ? ಮುಂದೆ ಓದಿ...

ಕೋವಿಡ್ ಟಾಸ್ಕ್ ಫೋರ್ಸ್ ಕೆಲವೊಂದು ಸಲಹೆಗಳನ್ನು ರಾಜ್ಯ ಸರಕಾರಕ್ಕೆ ನೀಡಿದೆ
ಕೋವಿಡ್ ಟಾಸ್ಕ್ ಫೋರ್ಸ್ ಕೆಲವೊಂದು ಸಲಹೆಗಳನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಇದರ ಪ್ರಕಾರ, ಜನಜಂಗುಳಿ ಸೇರುವುದಕ್ಕೆ ನಿಷೇಧವನ್ನು ಹೇರಬೇಕು, ಜಾತ್ರೆಗಳನ್ನು ರದ್ದುಗೊಳಿಸಬೇಕು. ಸಾಲುಸಾಲು ಹಬ್ಬಗಳು ಬರುತ್ತಿರುವುದರಿಂದ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ, ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಬೇಕು. ಲಸಿಕೆ ಹಾಕುವ ಕೆಲಸ ಇನ್ನಷ್ಟು ವೇಗ ಪಡೆಯಬೇಕು ಎನ್ನುವ ಸಲಹೆಗಳನ್ನು ನೀಡಿದ್ದಾರೆ.

ಪ್ರವಾಸೀ ತಾಣಗಳು ಸೋಂಕು ಹರಡುವ ಕೇಂದ್ರಗಳಾಗಬಾರದು
ಶ್ರಾವಣ ಮಾಸ ಆರಂಭವಾಗಿದೆ, ಇದರೊಂದಿಗೆ ಹಬ್ಬಗಳೂ ಆರಂಭವಾಗಲಿವೆ. ವಾರಾಂತ್ಯದಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರುವುದು ಉತ್ತಮ, ಪ್ರವಾಸೀ ತಾಣಗಳಲ್ಲಿ ಡಬಲ್ ಡೋಸ್ ಆದವರಿಗೆ ಮತ್ತು ಇಂತಿಷ್ಟೇ ಪ್ರವಾಸಿಗರಿಗೆ ಅನುವು ಮಾಡಿಕೊಡಬೇಕು. ಪ್ರವಾಸೀ ತಾಣಗಳು ಸೋಂಕು ಹರಡುವ ಕೇಂದ್ರಗಳಾಗಬಾರದು, ಇನ್ನಷ್ಟು ಸ್ವಲ್ಪದಿನ ಜನರು ಸಹಕರಿಸಬೇಕು. ಮಾಸ್ಕ್ ಇಲ್ಲದೇ ಜನರು ಪ್ರವಾಸೀ ತಾಣಗಳಲ್ಲಿ ಸುತ್ತುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಸಲಹೆಗಳನ್ನು ಟಾಸ್ಕ್ ಫೋರ್ಸ್ ನೀಡಿದೆ.

ಇಡೀ ರಾಜ್ಯಕ್ಕೆ ಲಾಕ್ಡೌನ್ ಹೇರುವ ಅವಶ್ಯಕತೆ ಕಂಡು ಬರುತ್ತಿಲ್ಲ ಎನ್ನುವ ಸಲಹೆ
ಇನ್ನು, ವೀಕೆಂಡ್ ಕರ್ಫ್ಯೂವನ್ನು ಎಂಟು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಿದರೆ ಸಾಕು. ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಿಗೆ ವಾರಾಂತ್ಯ ಕರ್ಫ್ಯೂವಿನ ಅವಶ್ಯಕತೆಯಿಲ್ಲ. ಕೆಲವು ಜಿಲ್ಲೆಗಳನ್ನು ಹೊರತು ಸದ್ಯದ ಮಟ್ಟಿಗೆ ಒಟ್ಟಾರೆಯಾಗಿ ಕೋವಿಡ್ ನಿಯಂತ್ರಣದಲ್ಲಿದೆ. ಹಾಗಾಗಿ, ಇಡೀ ರಾಜ್ಯಕ್ಕೆ ಲಾಕ್ಡೌನ್ ಹೇರುವ ಅವಶ್ಯಕತೆ ಕಂಡು ಬರುತ್ತಿಲ್ಲ. ಆದರೂ, ಕೋವಿಡ್ ನಮ್ಮಿಂದ ದೂರವಾಗಿಲ್ಲ ಎನ್ನುವ ಎಚ್ಚರಿಕೆಯನ್ನು ಜನರಿಗೆ ನೀಡಬೇಕು ಎನ್ನುವ ಸಲಹೆಗಳನ್ನು ಸಮಿತಿ ನೀಡಿದೆ.

ಬೊಮ್ಮಾಯಿ ಸರಕಾರ ಆದ್ಯತೆಯ ಮೇಲೆ ಕೋವಿಡ್ ನಿರ್ವಹಣೆ ನಡೆಸುತ್ತಿದೆ
ಕೊರೊನಾ ಎರಡನೇ ಅಲೆಯ ಆರಂಭಿಕ ಹಂತದ ನಿರ್ವಹಣೆಯಲ್ಲಿ ಕಲಿತ ಪಾಠದಿಂದ ಸರಕಾರ ಎಚ್ಚೆತ್ತುಕೊಂಡಂತಿದೆ. ಬೊಮ್ಮಾಯಿ ಸರಕಾರ ಆದ್ಯತೆಯ ಮೇಲೆ ಕೋವಿಡ್ ನಿರ್ವಹಣೆ ನಡೆಸುತ್ತಿದೆ. ಟಾಸ್ಕ್ ಫೋರ್ಸ್ ಸಲಹೆಯ ಮೇರೆಗೆ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದು, ಬಹುತೇಕ ಎಲ್ಲಾ ಕಡೆ ಜಾರಿಗೆ ಬರುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಸದ್ಯದ ಮಟ್ಟಿಗೆ ವೀಕೆಂಡ್ ಕರ್ಫ್ಯೂ ಮತ್ತು ಲಾಕ್ಡೌನಿಗೆ ತಜ್ಞರು ಒತ್ತಾಯಿಸುತ್ತಿಲ್ಲ.












Click it and Unblock the Notifications