Karnataka Covid Guidelines: ಕೇಂದ್ರದ ಸೂಚನೆ ಮೇರೆಗೆ ಕೊರೊನಾ ಬಿಎಫ್7 ನಿಯಂತ್ರಣಕ್ಕೆ ಕ್ರಮ: ಸುತ್ತೋಲೆ
ಬೆಂಗಳೂರು, ಡಿಸೆಂಬರ್ 22: ಕೊರೊನಾ ಹೊಸ ತಳಿ ಬಿಎಫ್7 ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಭೆ ನಂತರ ಕೇಂದ್ರ ಸರ್ಕಾರ ನೀಡಿದ ಸೂಚನೆಯ ಮೇರೆಗೆ ಕರ್ನಾಟಕ ಆರೋಗ್ಯ ಇಲಾಖೆ ಸೂಕ್ತ ಕ್ರಮವಹಿಸಿ ಗುರುವಾರ ರಾತ್ರಿ ಸುತ್ತೋಲೆ ಹೊರಡಿಸಿದೆ.
ಚೀನಾ, ಜಪಾನ್, ಯುಎಸ್ ಸೇರಿದಂತೆ ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೆ ಇವೆ. ವಿಶ್ವದಾದ್ಯಂತ ಒಂದೇ ದಿನಕ್ಕೆ 5ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಭಾರತದಲ್ಲಿ ಹೊಸ ತಳಿ ಕಂಡು ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ಸಚಿವರು ತಜ್ಞರು ಸಭೆ ನಡೆಸಿ ಸೋಂಕು ಹರಡದಂತೆ ಶಿಷ್ಟಾಚಾರ ಪಾಲಿಸಲು ಕ್ರಮ ವಹಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಸುತ್ತೋಲೆ ಹೊರಸಿರುವ ರಾಜ್ಯ ಸರ್ಕಾರ ಮಾರ್ಗಸೂಚಿ ಪಾಲನೆ ಮಾಡುವಂತೆ ತಿಳಿಸಿದೆ.
ಅನುಸರಿಸಬೇಕಾದ ಕ್ರಮಗಳು ಏನು?
1. ಎಲ್ಲ ಆಸ್ಪತ್ರೆಗಳಲ್ಲಿ ಐಎಲ್ಐ ಮತ್ತು ಎಸ್ಎಆರ್ಐ (ಸಾರಿ) ಪ್ರಕರಣಗಳಿಗೆ ಕೋವಿಡ್ ಪರೀಕ್ಷೆ ನಡೆಸುವುದು ಕಡ್ಡಾಯ.
2. ಸೋಂಕಿನ ಲಕ್ಷಣ ಹೊಂದಿರುವವರು, ಸೋಂಕಿತರ ಸಂಪರ್ಕಿತರು ಕೊರೊನಾ ತಪಾಸಣೆಗೆ ಒಳಪಡಬೇಕು.
3. ಸೋಂಕಿನ ಲಕ್ಷಣವುಳ್ಳವರ ತಪಾಸಣೆಗೆ ಬಿಬಿಎಂಪಿ ಮತ್ತು ಜಿಲ್ಲಾಡಳಿತ ಸಿಬ್ಬಂದಿ ನಿಯೋಜಿಸುವುದು.
4. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಪೈಕಿ ಶೇ.2ರಷ್ಟನ್ನು ತಪಾಸಣೆಗೆ ಒಳಪಡಿಸುವುದು ಮುಂದುವರಿಯಲಿದೆ.

5. ಕೋವಿಡ್ ಪಾಸಿಟಿವ್ ಬಂದ ಎಲ್ಲ ಪ್ರಕರಣಗಳ ಮಾದರಿಯನ್ನು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾನ್ಗೆ ಕಳುಹಿಸುವುದು.
6. ಬೂಸ್ಟರ್ ಡೋಸ್ ಕೊರೊನಾ ಲಸಿಕೆ ಶೇ. 20ರಷ್ಟು ಗುರಿ ಸಾಧ್ಯವಾಗಿದ್ದು, ಅದನ್ನು ಶೇ. 50ರಷ್ಟು ಸಾಧಿಸುವುದು. ಅದಕ್ಕಾಗಿ ಲಸಿಕಾಕರಣ ಕ್ಯಾಂಪ್ ತೆರೆಯುವುದು.
7. ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಯಗಳಲ್ಲಿ ಕೋವಿಡ್ ಪ್ರಕರಣಗಳ ಚಿಕಿತ್ಸೆಗಾಗಿ ಐಸೋಲೆಷನ್ ಬೆಡ್ಗಳನ್ನು ಮೀಸಲಿಡಬೇಕು.
8. ಕೋವಿಡ್ ಹೆಚ್ಚಳವಾದ ಸಂದರ್ಭದಲ್ಲಿ ಎಲ್ಲ ಹಂತದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿರಬೇಕು.
9. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 15ದಿನಗಳಿಗೆ ಒಮ್ಮೆ ಡ್ರೈ ರನ್ ಮಾಡುವುದು.
10. ಆರೋಗ್ಯ ಸಂಸ್ಥೆ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
11. ಆರೋಗ್ಯ ಸಿಬ್ಬಂದಿಯು ಕೋವಿಡ್ 3ನೇ ಡೋಸ್ ಲಸಿಕೆ ಪಡೆಯುವಂತೆ ಸೂಚಿಸಬೇಕು.
ಇಷ್ಟೇ ಅಲ್ಲದೇ ರಾಜ್ಯ ಆರೋಗ್ಯ ಕೆಲವು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸಾರ್ವಜನಿಕರಿಗೆ ತಿಳಿಸಿದೆ. ಅದರಲ್ಲಿ ಬಾರ್, ಪಬ್, ಮಾಲ್, ಸಾರ್ವಜಿಕ ಸಮಾರಂಭಗಳಲ್ಲಿ ಹಾಗೂ ಒಳಾಂಗಣ ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆರೋಗ್ಯಕ್ಕಾಗಿ ಧ್ಯಾನ, ವ್ಯಾಯಾಮ ರೂಢಿಸಿಕೊಳ್ಳಬೇಕು. ಸಭೆ ಸಮಾರಂಭಗಳಲ್ಲಿ ಆಯೋಜಕರು ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಗುಂಪು ಗೂಡುವುದು ನಿಲ್ಲಿಸುವ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.












Click it and Unblock the Notifications