ಕೋವಿಡ್ ನಿಯಂತ್ರಣ ಕ್ರಮಗಳು ವೈಜ್ಞಾನಿಕವೇ ಹೊರತು ರಾಜಕೀಯವಲ್ಲ: ಸುಧಾಕರ್
ಬೆಳಗಾವಿ, ಡಿಸೆಂಬರ್ 23: ಕೋವಿಡ್ ನಿಯಂತ್ರಣಕ್ಕೆ ಕ್ರಮ ವಹಿಸಿರುವುದು ವೈಜ್ಞಾನಿಕ ಹಿನ್ನೆಲೆಯಿಂದಲೇ ಹೊರತು, ರಾಜಕೀಯ ಕಾರಣಕ್ಕಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿಯವರು ಹಲವು ದಿನಗಳಿಂದ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ನ ರಾಹುಲ್ ಗಾಂಧಿಯುವರು ನೂರು ದಿನಕ್ಕೂ ಹೆಚ್ಚು ಕಾಲ ಯಾತ್ರೆ ಮಾಡಿದ್ದಾರೆ. ಆದರೆ ಇಷ್ಟು ದಿನಗಳಲ್ಲಿ ಕೋವಿಡ್ ಬಗ್ಗೆ ಸರ್ಕಾರ ಮಾತನಾಡಿಲ್ಲ. ಚೀನಾ, ಕೊರಿಯಾ ಮೊದಲಾದ ದೇಶಗಳಲ್ಲಿ ಪ್ರಕರಣ ಹೆಚ್ಚಿರುವುದರಿಂದ ಮಾತ್ರ ಈಗ ಜನರ ಆರೋಗ್ಯ ರಕ್ಷಣೆಗಾಗಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಬದ್ಧ ಆಡಳಿತದಿಂದಾಗಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ನ ಯಾತ್ರೆಗಳು ಸಾಮಾನ್ಯ ರಾಜಕೀಯ ಪ್ರಚಾರವಾಗಿದೆ. ಇದು ಜನರ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೆಡಿಎಸ್ನ ಕುಮಾರಸ್ವಾಮಿಯವರು ಹಳೆ ಮೈಸೂರು ಪ್ರದೇಶಗಳಲ್ಲಿ ಯಾತ್ರೆ ಮಾಡುತ್ತಿದ್ದಾರೆ. ಉಳಿದೆಡೆ ಜೆಡಿಎಸ್ ಇಲ್ಲ ಎಂದರು.

ಕೋವಿಡ್ ಲಸಿಕೆಯನ್ನು ದಾಖಲೆಯ ಮಟ್ಟದಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಶೇ.100 ರಷ್ಟು ಲಸಿಕಾಕರಣ ಆಗಿದೆ. ಆದರೆ ಮೂರನೇ ಡೋಸ್ನ ಲಸಿಕೆಯನ್ನು ಕೂಡ ಎಲ್ಲರೂ ಪಡೆಯಬೇಕು. ಮೂಗಿಗೆ ಹಾಕುವ ಲಸಿಕೆಯಿಂದ ಮಕ್ಕಳಿಗೆ ಬಹಳ ಪ್ರಯೋಜನವಾಗಲಿದ ಎಂದರು.
ಒಕ್ಕಲಿಗ ಸಮುದಾಯದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನೀಡಿರುವ ಮೀಸಲಾತಿ ಕಡಿಮೆ ಇದೆ. ಇದಕ್ಕಾಗಿ ಮೀಸಲಾತಿ ಹೆಚ್ಚಳಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸುಧಾಕರ್ ಹೇಳಿದರು.
ಒಕ್ಕಲಿಗ ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನೀಡಿರುವ ಮೀಸಲಾತಿ ಸಾಲುವುದಿಲ್ಲ. ಒಕ್ಕಲಿಗರಲ್ಲಿ ಬಹುತೇಕರು ರೈತರಾಗಿದ್ದು, ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಇದಕ್ಕಾಗಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ವಹಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಾವು ಹೆಚ್ಚು ಮೀಸಲಾತಿ ಕೇಳಿಲ್ಲ, ಜನಸಂಖ್ಯೆಗೆ ತಕ್ಕಂತೆ ಮಾತ್ರ ನೀಡಲು ಕೋರಲಾಗಿದೆ. ಇಲ್ಲಿ ಯಾವುದೇ ಒತ್ತಡ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಲ್ಲಾ ಸಮುದಾಯಗಳ ಅಗತ್ಯವೇನು ಎಂಬುದನ್ನು ಅರಿತಿದ್ದಾರೆ. ಅವರು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಲಿದ್ದಾರೆ ಎಂದರು.

ಎಸ್ಸಿ, ಎಸ್ಟಿ ಸಮುದಾಯ ಮೀಸಲಾತಿ ಹೆಚ್ಚಳ ಬಹಳ ವರ್ಷಗಳಿಂದ ಚರ್ಚೆಯಲ್ಲಿತ್ತು. ಆದರೆ ಮುಖ್ಯಮಂತ್ರಿಗಳು ಮಾತ್ರ ಅದನ್ನು ಸಾಕಾರಗೊಳಿಸಲು ಕ್ರಮ ವಹಿಸಿದ್ದಾರೆ ಎಂದರು.
ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಇನ್ನೂ ನಡೆಯುತ್ತಿದೆ. ನ್ಯಾಯಾಲಯವು ಸಕಾರಾತ್ಮಕ ತೀರ್ಪು ನೀಡಲಿದೆ ಎಂಬ ವಿಶ್ವಾಸವಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಹಾದಿಯಲ್ಲಿ ಸರ್ಕಾರ ನಡೆಯುತ್ತಿದೆ. ಎಲ್ಲಾ ಸಮುದಾಯಗಳ ನ್ಯಾಯ ಸಮ್ಮತ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಲಿದೆ ಎಂದರು.












Click it and Unblock the Notifications