ಮೂಗುದಾರದ ಪರಮಾವಧಿ: ಇಲ್ಲೇ ಉತ್ಪಾದನೆ ಆಗುವ ಆಕ್ಸಿಜನ್ ಬಳಕೆಗೂ ಕೇಂದ್ರದ ಅನುಮತಿ ಬೇಕು
ಬೆಂಗಳೂರು, ಮೇ 4: ಚಾಮರಾಜನಗರದಲ್ಲಿ ಸೋಮವಾರ, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಮಂಗಳವಾರ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ್ದಾರೆ. ನಮ್ಮ ಕೈಯಲ್ಲಿ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಯವರು ವಿರೋಧ ಪಕ್ಷದ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕ ಬಳಕೆಗೂ ಕೇಂದ್ರ ಸರಕಾರದ ಅನುಮತಿ ನೀಡಬೇಕು ಎನ್ನುವ ವಿಚಾರವನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದ್ದಾರೆ.
ಇಲ್ಲೇ ಆಮಜನಕಕ್ಕೆ ಹಾಹಾಕಾರ ಇರಬೇಕಾದರೆ, ಇಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಕೇಂದ್ರ ಸರಕಾರ ಬೇರೆ ರಾಜ್ಯಕ್ಕೆ ಕಳುಹಿಸುತ್ತಿದೆ ಎನ್ನುವುದು ಚೀಫ್ ಸೆಕ್ರೆಟರಿ ಅವರ ಹೇಳಿಕೆಯಿಂದ ಅರ್ಥವಾಗುತ್ತದೆ.

"ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಅಷ್ಟೂ ಆಮ್ಲಜನಕವನ್ನು ಸ್ಥಳೀಯವಾಗಿ ಬಳಸಲು ಕೇಂದ್ರ ಸರಕಾರ ಅನುಮತಿ ನೀಡಿದರೆ ತಕ್ಷಣದ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ"ಎಂದು ರವಿಕುಮಾರ್ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಸರಕಾರವಿದ್ದರೆ ಸಮನ್ವಯದ ಕೊರೆತೆ ಇರುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದ ರಾಜ್ಯ ಬಿಜೆಪಿ ಮುಖಂಡರಿಗೆ, ಇಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರದ ವಿರುದ್ದ ಸೆಟೆದು ನಿಲ್ಲುವ ಧೈರ್ಯವಿದೆಯೇ ಎನ್ನುವ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ.
ಇಲ್ಲಿಂದ ಬೇರೆ ರಾಜ್ಯಗಳಿಗೆ ಹೋಗುತ್ತಿರುವ ಆಮ್ಲಜನಕ ಅಲ್ಲಿನ ರೋಗಿಗಳಿಗೆ ಉಪಯೋಗವಾಗುತ್ತಿದೆ. ಅವರೂ ನಮ್ಮವರೇ ನಿಜ, ಆದರೆ, ನಮ್ಮ ಸಮಸ್ಯೆಗಳನ್ನು ಮೊದಲು ನೋಡಿಕೊಳ್ಳಬೇಕಲ್ಲವೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.












Click it and Unblock the Notifications