ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು; ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಸೆ.16: ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ವಿತರಿಸಿದ ಸಿಎಂ ಬೊಮ್ಮಾಯಿ
'ಕೇವಲ ಮೂಲಸೌಕರ್ಯಗಳನ್ನು ಮಾತ್ರವಲ್ಲ ಸಂಸ್ಕೃತಿಯಲ್ಲಿ ಬದಲಾವಣೆ ತರಬೇಕು. ಬಡವರಿಗೆ ಅಗತ್ಯವಿರುವ ಸೌಲಭ್ಯಗಳು ದೊರಕಿದಾಗ ಸಂಸ್ಕೃತಿಯೂ ಬದಲಾಗುತ್ತದೆ. ಕಂಪನಿ ಹಾಗೂ ಸಂಸ್ಥೆಗಳು ದತ್ತು ಪಡೆಯುವ ಕಾಲೇಜುಗಳಲ್ಲಿ ಕೇವಲ ಹಣ ಮಾತ್ರವಲ್ಲದೆ ಸಮಯವನ್ನೂ ನೀಡಬೇಕು. ಕಾಲೇಜುಗಳು ನಮ್ಮದೇ ಎಂಬ ಭಾವನೆ ಇರಬೇಕು. ಆಗ ವ್ಯತ್ಯಾಸ ಕಾಣಲು ಸಾಧ್ಯ. ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತಂದರೆ, ನಿಮ್ಮ ಬದುಕಿನಲ್ಲಿಯೂ ಬದಲಾವಣೆ ತರಲು ಸಾಧ್ಯ' ಎಂದರು.
ಸರ್ಕಾರಿ ಐಟಿಐಗಳು 4,800 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೆ
'ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯ ರಾಜ್ಯವಾಗಬೇಕು. ಸರ್ಕಾರಿ ಐಟಿಐಗಳನ್ನು ಟಾಟಾ ಸಂಸ್ಥೆಯ ಸಹಯೋಗದಲ್ಲಿ 4,800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. 30, 40 ಕೋಟಿ ರೂ.ಗಳನ್ನು ಐಟಿಐಗಳನ್ನು ಆಧುನೀಕರಣಗೊಳಿಸಲು ವೆಚ್ಚ ಮಾಡಲಾಗಿದೆ. ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆ ಗೇರಿಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
"ಮುಂದಿನ 2 ರಿಂದ 3 ವರ್ಷಗಳಲ್ಲಿ ಯುವಿಸಿಇ ಐಐಟಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ. ಬೆಂಗಳೂರಿನ ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಅನ್ನು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನೊಂದಿಗೆ ಸಹಯೋಗ ಹೊಂದಲು ಸಂಪರ್ಕಿಸಲಾಗುತ್ತಿದೆ. ಈ ವೇಳೆ ನಿಮ್ಮ ಅನುಭವ, ಸಂಪರ್ಕಗಳನ್ನು ಹಂಚಿಕೊಳ್ಳಬೇಕು. ಅತ್ಯುತ್ತಮ ಜ್ಞಾನ ಕರ್ನಾಟಕದಲ್ಲಿ ಲಭ್ಯವಾಗಬೇಕು ಎನ್ನುವುದು ನಮ್ಮ ಆಶಯ" ಎಂದರು.
ದಾನ ನೀಡುವುದು ಬದುಕಿನ ಪ್ರಮುಖ ಭಾಗ; ಸಿಎಂ
"ಸಮಾಜ ನಡೆಯುತ್ತಿರುವುದು ದಾನ ನೀಡುವುದರಿಂದ. ಇಡೀ ವಿಶ್ವ ಹಾಗೂ ಸಮಾಜದಿಂದ ನಾವು ಪಡೆದಿರುತ್ತೇವೆ. ಅಂತಿಮವಾಗಿ ಗಳಿಸಿದ್ದನ್ನು ಇಲ್ಲಿಯೇ ಹಿಂದಿರುಗಿಸಬೇಕು. ದಾನ ನೀಡುವುದು ಬದುಕಿನ ಪ್ರಮುಖ ಭಾಗ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ ಅಥವಾ ಇನ್ಯಾವುದೇ ರೀತಿಯಲ್ಲಿ ನೀಡಿದರೂ ಅದನ್ನು ಹೂಡಿಕೆ ಎಂದು ಪರಿಗಣಿಸಲಾಗುತ್ತದೆಯೋ ಅಥವಾ ಖರ್ಚು ಎಂದು ಭಾವಿಸಬೇಕೇ ಎಂಬ ಪ್ರಶ್ನೆ ಸರ್ಕಾರದ ಮಟ್ಟದಲ್ಲಿಯೂ ಕೇಳಿ ಬರುತ್ತದೆ" ಎಂದು ತಿಳಿಸಿದರು.
"ಸಮಾಜಕ್ಕೆ ನೀಡುವುದು ಯಾವಾಗಲೂ ಹಣದ ರೂಪದಲ್ಲಿಯೇ ಇರಬೇಕೆಂದಿಲ್ಲ. ಬದುಕಿನ ಬ್ಯಾಲೆನ್ಸ್ ಶೀಟ್ ನಿರ್ವಹಿಸುವುದು ಮುಖ್ಯ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು" ಎಂದರು.
ಹಂತಹಂತವಾಗಿ ನೆರವಿನ ವಿಸ್ತರಣೆಗೆ ಉತ್ಸಾಹ
ರಾಜ್ಯದ ಆಯ್ದ 23 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ತಮ್ಮ ಸಿಎಸ್ಆರ್ ದೇಣಿಗೆ ಮೂಲಕ ಅಭಿವೃದ್ಧಿ ಪಡಿಸಲು ವಿವಿಧ ಉದ್ಯಮಿಗಳು ಘೋಷಿಸಿದ್ದಾರೆ.
"ಇದಲ್ಲದೆ, ಮುಂಬರುವ ದಿನಗಳಲ್ಲಿ ರಾಜ್ಯದ ಉಳಿದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೂ ನೆರವು ನೀಡಲಾಗುವುದು. ಜತೆಗೆ ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಇತರ ಸಾಧನ ಸಲಕರಣೆಗಳ ವ್ಯವಸ್ಥೆಗೆ ಸಹಕರಿಸಲಾಗುವುದು" ಎಂದು ಉದ್ಯಮಿಗಳು ಭರವಸೆ ನೀಡಿದರು.
ಅಶ್ವತ್ಥ್ ನಾರಾಯಣ ನೈಜ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ
'ಶಿಕ್ಷಣ ರಂಗದಲ್ಲಿ ಸರ್ಕಾರವು ಸಾಮಾಜಿಕ ನ್ಯಾಯವನ್ನು ಪಾಲಿಸಬೇಕಾಗುತ್ತದೆ. ಆಗ ಮಾತ್ರ ಸಮಾನತೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದ್ದರಿಂದ ಉದ್ಯಮಿಗಳು ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡು, ದುರ್ಬಲರ ಏಳಿಗೆಗೆ ಮುಂದಾಗಬೇಕು. ಜತೆಗೆ ಸರಕಾರಿ ಕಾಲೇಜುಗಳು ಕೂಡ ನಮಗೆ ಸೇರಿದ್ದು ಎನ್ನುವ ಅಭಿಮಾನವನ್ನು ಬೆಳೆಸಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
"ಉನ್ನತ ಶಿಕ್ಷಣ ಇಲಾಖೆ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಡಾ ಸಿ.ಎನ್. ಅಶ್ವತ್ಥ್ ನಾರಾಯಣ್ ಅವರಂಥ ಕ್ರಿಯಾಶೀಲ ಸಚಿವರೂ ಇದ್ದು, ನೈಜ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಅನುಷ್ಠಾನಕ್ಕೂ ಮುಂದಾಗಿದ್ದಾರೆ. ನೂತನ ಶಿಕ್ಷಣ ನೀತಿಯ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಶಿಕ್ಷಣ. ಕ್ಷೇತ್ರದಲ್ಲಿ ತರಲಾಗುವುದು" ಎಂದರು.
ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಯುವ ಅನ್ಸ್ಟಾಪಬಲ್, ಯುನೈಟೆಡ್ ವೇಸ್ ಮತ್ತು ಸತ್ತ್ವ ಕಂಪನಿಗಳು ಸಂಯುಕ್ತವಾಗಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಾವೇಶವನ್ನು ಏರ್ಪಡಿಸಿದ್ದವು. ಇದು ಇತ್ತೀಚಿನ ದಿನಗಳಲ್ಲಿ ನಡೆದ ಇಂತಹ ಮೊದಲ ಸಮಾವೇಶವಾಗಿದೆ. ಇದರಲ್ಲಿ ಸರ್ಕಾರಿ ಡಿಗ್ರಿ ಕಾಲೇಜುಗಳ ಬಗ್ಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು.