ರಾಜ್ಯದಲ್ಲಿ 4,764 ಕೊರೊನಾ ಪ್ರಕರಣ, 55 ಸಾವು; 4 ಜಿಲ್ಲೆಗಳ ಅಪ್ಡೇಟ್
ಬೆಂಗಳೂರು, ಜುಲೈ 22: ಇಂದು ರಾಜ್ಯದಲ್ಲಿ 4,764 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದಾಗಿ ಇಂದು 55 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 75,833ಕ್ಕೆ ಏರಿಕೆಯಾಗಿದೆ. 47,069 ಸಕ್ರಿಯ ಸೋಂಕಿತ ಪ್ರಕರಣಗಳಿವೆ. ಒಟ್ಟು 27,339 ಮಂದಿ ಗುಣಮುಖರಾಗಿದ್ದಾರೆ.
Recommended Video
ಜೊತೆಗೆ ಇಂದು 1780 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಡುವೆ ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳು ಮುಂದುವರೆದಿವೆ. ಕೆಲವು ಕಡೆ ಸಕ್ರಿಯ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ರಾಮನಗರ, ಉಡುಪಿ ಜಿಲ್ಲೆಗಳ ಕೊರೊನಾ ಸೋಂಕಿನ ಪ್ರಕರಣಗಳ ವರದಿಯನ್ನು ಇಲ್ಲಿ ನೀಡಲಾಗಿದೆ...
ಕೃಷ್ಣನಗರಿಯಲ್ಲಿ ಒಂದೇ ದಿನ ತ್ರಿಶತಕದತ್ತ ಕೊರೊನಾ ಸೋಂಕು
ಕೃಷ್ಣನಗರಿಯಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕು ತ್ರಿಶತಕದ ಹತ್ತಿರ ಬಂದಿದೆ. ಇಂದು ಒಟ್ಟು 281 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2686ಕ್ಕೆ ಏರಿದೆ. ಇದೇ ವೇಳೆ ಇಂದು 34 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈತನಕ ಒಟ್ಟು1765 ಜನರು ಗುಣಮುಖರಾಗಿ ಬಿಡುಗಡೆ ಆದಂತಾಗಿದ್ದು ತುಸು ಸಮಾಧಾನದ ವಿಷಯ. ಜಿಲ್ಲೆಯಲ್ಲಿ ಸದ್ಯ 910 ಸಕ್ರಿಯ ಕೇಸ್ ಗಳಿವೆ. ಐವರು ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ ಈವರೆಗೆ ಒಟ್ಟು 12 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಕಾಫಿನಾಡಲ್ಲಿ ಇಂದು 82 ಮಂದಿಗೆ ಕೊರೊನಾ ಸೋಂಕು ದೃಢ
ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿ
ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು 40 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ತ್ರಿಶತಕ ದಾಟ್ಟಿದ್ದು, 310ಕ್ಕೆ ಏರಿಕೆಯಾಗಿದೆ. ಇಂದು ಚಿತ್ರದುರ್ಗ ತಾಲ್ಲೂಕು-2, ಹಿರಿಯೂರು-8, ಚಳ್ಳಕೆರೆ-19, ಹೊಳಲ್ಕೆರೆ-6, ಹೊಸದುರ್ಗ-3, ಮೊಳಕಾಲ್ಮೂರು-1 ಪ್ರಕರಣಗಳು ಕಂಡುಬಂದಿವೆ. ಜೊತೆಗೆ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ವಿಪಿ ಬಡಾವಣೆ ನಿವಾಸಿ 45 ವರ್ಷದ ಪುರುಷ ಹಾಗೂ ಹೊಳಲ್ಕೆರೆ ರಸ್ತೆಯ 68 ವರ್ಷದ ವೃದ್ಧೆ ಕೊರೊನಾದಿಂಸ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗದ ಜಿಲ್ಲಾಧಿಕಾರಿ ಆಪ್ತಸಹಾಯಕರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಜಿಲ್ಲಾಧಿಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ರಾಮನಗರದಲ್ಲಿ ಕೊರೊನಾದಿಂದ ಇಬ್ಬರು ಸಾವು
ರಾಮನಗರ ಜಿಲ್ಲೆಯಲ್ಲಿ ಇಂದು 20 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಕೊರೊನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 581ಕ್ಕೆ ಏರಿಕೆಯಾಗಿದೆ. ಚನ್ನಪಟ್ಟಣದಲ್ಲಿ 3, ಮಾಗಡಿಯಲ್ಲಿ 8, ಕನಕಪುರ 4, ರಾಮನಗರದಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಇವರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 7 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 310 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 258 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕನಕಪುರ ತಾಲ್ಲೂಕಿನ 71 ವರ್ಷದ ಪುರುಷ ಹಾಗೂ ರಾಮನಗರದ 55 ವರ್ಷದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 13 ಆಗಿದೆ.
ಕಾಫಿನಾಡಿನಲ್ಲಿ 82 ಮಂದಿಗೆ ಕೊರೊನಾ ವೈರಸ್
ಕಾಫಿನಾಡಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮುಂದುವರಿದಿವೆ. ಜಿಲ್ಲೆಯಲ್ಲಿ ಇಂದು 82 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕು ಪ್ರಕರಣದಿಂದ ಇಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500ರ ಗಡಿ ತಲುಪಿದೆ. ಇಂದಿನ ಪ್ರಕರಣಗಳಲ್ಲಿ ಕಡೂರು 21, ಚಿಕ್ಕಮಗಳೂರು 29, ಶೃಂಗೇರಿ 2, ಕೊಪ್ಪ 5, ಎನ್.ಆರ್ ಪುರ 8, ಮೂಡಿಗೆರೆ 13, ಅಜ್ಜಂಪುರ 1, ತರೀಕೆರೆಯಲ್ಲಿ 3 ಸೋಂಕು ಪ್ರಕರಣ ದಾಖಲಾಗಿವೆ. 256 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 484 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಇಂದು 51 ಜನ ಬಿಡುಗಡೆಯಾಗಿದ್ದಾರೆ.