ಇನ್ನು 45 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ; ಎಷ್ಟು ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ ಗೊತ್ತಾ: ಡಿಕೆಶಿ ಹೇಳಿದ್ದೇನು.?
ಈ ಡಬಲ್ ಇಂಜಿನ್ ಆರಂಭವಾಯಿತೇ ಹೊರತು, ಮುಂದಕ್ಕೆ ಹೋಗಲೇ ಇಲ್ಲ. ಬರೀ ಹೊಗೆ ಬಂತು ಎಂದು ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಮೈಸೂರು,ಫೆಬ್ರವರಿ16: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂದ್ರೆ ಇನ್ನು 45 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ 141 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಗುರುವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸರ್ಕಾರಕ್ಕೆ ಆಡಳಿತ ಮಾಡುವ ಅನುಭವವಿಲ್ಲ. ಅವರಿಗೆ ಕೇವಲ ಲಂಚ, ಭ್ರಷ್ಟಾಚಾರದ ಮೇಲೆಯೇ ಆಸಕ್ತಿ ಇದೆ. ಪ್ರತಾಪ್ ಸಿಂಹ ದಡ್ಡರೇ, ಆತ ಸಚಿವರ ಮುಂದೆಯೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬೆಡ್ ಸ್ಕ್ಯಾಂಮ್ ಬಯಲಿಗೆಳೆದಿದ್ದಾರೆ. ಬಿಜೆಪಿ ನಾಯಕರೇ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಈ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಾಗಿರುವ ಕುರಿತು ಮಾತನಾಡಿ, ಈ ಸರ್ಕಾರ ಕಳೆದ ವರ್ಷ ಬಜೆಟ್ ನಲ್ಲಿ 2.50 ಲಕ್ಷ ಕೋಟಿ ಬಜೆಟ್ ನಲ್ಲಿ ಈವರೆಗೂ ಕೇವಲ 1.40 ಲಕ್ಷ ಕೋಟಿ ಮಾತ್ರ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಹೇಳಿದಂತೆ ಕಾಮಗಾರಿ ಮೊತ್ತವನ್ನು ದುಪ್ಪಟ್ಟು ಮಾಡಿದ್ದಾರೆ. ಈ ಸರ್ಕಾರ ಬೆಂಗಳೂರು ರಸ್ತೆ ಗುಂಡಿ ಮುಚ್ಚಲು 7100 ಕೋಟಿ ಖರ್ಚು ಮಾಡಿದ್ದಾರೆ. ಯಾವ ರಸ್ತೆ ಗುಂಡಿ ಮುಚ್ಚಲಾಗಿದೆ? ಕಳೆದ ಬಾರಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿನ ಸರ್ಕಾರಿ ಕಟ್ಟಡ ಅಡವಿಟ್ಟಿದ್ದರು. ನಾವು ಬಂದು ಅದನ್ನು ಬಿಡಿಸಿದ್ದೆವು. ಈಗ ಮತ್ತೆ ಸರ್ಕಾರವನ್ನೇ ಅಡವಿಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳು ರಿಪೋರ್ಟ್ ಕಾರ್ಡ್ ನೀಡದಿದ್ದರೆ ನಾಳೆ ಬಜೆಟ್ ಮಂಡನೆ ವೇಳೆ ನಿಮ್ಮ ನಿಲುವೇನು ಎಂದು ಮಾಧ್ಯಮಗಳ ಪ್ರಶ್ನಗೆ ಉತ್ತರಿಸಿದ ಅವರು, ನಾಳೆವರೆಗೂ ಕಾದು ನೋಡಿ. ನಾವು ರಾಜಕೀಯ ಪಕ್ಷವಾಗಿ ಅವರು ಏನು ಹೇಳುತ್ತಾರೆ ಜನರಿಗೆ ಗೊತ್ತಾಗಬೇಕು. ಆನಂತರ ನಾವು ಮಾತನಾಡುತ್ತೇವೆ ಎಂದರು.
ಟಿಪ್ಪು ಸುಲ್ತಾನ್ ಅವರ ತಲೆ ತೆಗೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ಕುರಿತು ಮಾತನಾಡಿ, ಅವರೇನು ಕುರಿಯೇ? ಇತಿಹಾಸದಲ್ಲಿ ಟಿಪ್ಪು ಅವರ ತಲೆ ತೆಗೆದಿರುವ ಬಗ್ಗೆ ದಾಖಲೆ ಎಲ್ಲಿವೆ? ನಾನು ಅಶ್ವತ್ಥ್ ನಾರಾಯಣ ಅವರಿಗೆ ಉತ್ತರವನ್ನು ನೀಡುವುದಿಲ್ಲ, ಅವರ ಹೇಳಿಕೆ ಖಂಡಿಸುವುದಿಲ್ಲ. ಅವರ ಹೇಳಿಕೆಗೆ ಬೊಮ್ಮಾಯಿ, ಯಡಿಯೂರಪ್ಪನವರು, ನಡ್ಡಾ ಅವರು ಉತ್ತರ ನೀಡಬೇಕು. ನಾನು ಆ ವ್ಯಕ್ತಿಯ ಬಗ್ಗೆ ಮಾತನಾಡಿ ನನ್ನ ಬಾಯಿ ಕೊಳಕು ಮಾಡಿಕೊಳ್ಳು ಇಚ್ಛಿಸುವುದಿಲ್ಲ. ಇನ್ನು ಟಿಪ್ಪು ಅವರ ವಿಚಾರದಲ್ಲಿ ರಾಷ್ಟ್ರಪತಿಗಳು ಬಂದು ಏನು ಮಾತನಾಡಿದ್ದಾರೆ ಎಂಬ ದಾಖಲೆಗಳಿವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನಾ ವೆಚ್ಚ ದುಪ್ಪಟ್ಟಾಗುತ್ತಿರುವ ಬಗ್ಗೆ ಮಾತನಾಡಿ, ಈ ಸರ್ಕಾರ 1 ಸಾವಿರ ಕೋಟಿ ಯೋಜನಾ ಅಂದಾಜು ವೆಚ್ಚವನ್ನು 2 ಸಾವಿರ ಕೋಟಿಗೆ ಹೆಚ್ಚಿಸುತ್ತಿದ್ದಾರೆ ಎಂದರು.

ನಟ ಸುದೀಪ್ ಅವರ ಕುರಿತು ಮಾತನಾಡಿ, ಸುದೀಪ್ ನನ್ನ ಉತ್ತಮ ಸ್ನೇಹಿತ. ನಾವು ಲೋಕಾರೂಢಿಯಾಗಿ ರಾಜಕಾರಣದ ಬೆಳವಣಿಗೆ ಬಗ್ಗೆ ಮಾತನಾಡಿದ್ದೇವೆ. ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಮಾಜಿಕ ಸೇವೆ ಮಾಡಿದ್ದಾರೆ. ನಾವು ಕೆಲವು ವಿಚಾರ ಚರ್ಚೆ ಮಾಡಿದ್ದೇವೆ. ನಾನು ಅವರಿಗೆ ಬಲವಂತ ಮಾಡುವುದಿಲ್ಲ. ನಾನು ನನ್ನ 35 ವರ್ಷಗಳ ಅನುಭವದಲ್ಲಿ ಕೆಲವು ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದು ತಿಳಿಸಿದರು.
ನಾಳೆ ಬೆಳಗ್ಗೆ ಸರ್ಕಾರ ಬಜೆಟ್ ಮಂಡನೆ ಮಾಡುತ್ತಿದ್ದು, ಇದು ಈ ಸರ್ಕಾರದ ಕೊನೆ ಬಜೆಟ್ ಹಾಗೂ ಪ್ರಣಾಳಿಕಾ ಬಜೆಟ್ ಆಗಿದೆ. ಈ ಸರ್ಕಾರ ಕಳೆದ ವರ್ಷ ಮಾಡಿದ ಬಜೆಟ್ ಕೇವಲ ಘೋಷಣೆ, ಭರವಸೆ, ಭಾಷಣಕ್ಕೆ ಸೀಮಿತವಾಗಿತ್ತು. ಡಬಲ್ ಇಂಜಿನ್ ಸರ್ಕಾರ ವೇಗವಾಗಿ ರಾಜ್ಯದ ಅಭಿವೃದ್ಧಿ ಮಾಡಲಿದೆ ಎಂದು ಭಾವಿಸಿದ್ದೆವು. ಆದರೆ ಈ ಇಂಜಿನ್ ಆರಂಭವಾಯಿತೇ ಹೊರತು, ಮುಂದಕ್ಕೆ ಹೋಗಲೇ ಇಲ್ಲ. ಬರೀ ಹೊಗೆ ಬಂತು ಎಂದು ಹೇಳಿದರು.












Click it and Unblock the Notifications