ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ: ಮುದ್ದಹನುಮೇಗೌಡ ಮನವೊಲಿಕೆಗೆ ಕಸರತ್ತು
ಬೆಂಗಳೂರು, ಮಾರ್ಚ್ 25: ತುಮಕೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ನಲ್ಲಿ ಬಂಡಾಯ ಎದ್ದಿರುವ ಹಾಲಿ ಸಂಸದ ಮುದ್ದಹನುಮೇಗೌಡ ಅವರ ಮನವೊಲಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ತುಮಕೂರಿನಲ್ಲಿ ಜೆಡಿಎಸ್ಗೆ ಬೆಂಬಲ ನೀಡಿರುವ ಕಾಂಗ್ರೆಸ್, ಮುದ್ದಹನುಮೇಗೌಡ ಅವರ ಬಂಡಾಯದಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಇದರಿಂದ ಇರುವ ಆಯ್ಕೆಗಳತ್ತ ಕಾಂಗ್ರೆಸ್ ನೋಡುತ್ತಿದ್ದು, ಅದಕ್ಕೆ ಪರಿಹಾರವಾಗಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ ಕಾಣಿಸಿದೆ.
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಮುದ್ದಹನುಮೇಗೌಡ ಅವರ ಮನವೊಲಿಸಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಇದುವರೆಗೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಒಂದು ವೇಳೆ ಮುದ್ದಹನುಮೇಗೌಡ ಅವರು ಪಕ್ಷದ ನಾಯಕರ ಪ್ರಯತ್ನಕ್ಕೆ ಕ್ಯಾರೇ ಅನ್ನದೆ, ತುಮಕೂರಿನಿಂದಲೇ ಸ್ಪರ್ಧಿಸಲು ಪಟ್ಟು ಹಿಡಿದರೆ ಕಾಂಗ್ರೆಸ್ ಬೇರೆ ಆಯ್ಕೆಗಳಿಲ್ಲದೆ ಕೈಚೆಲ್ಲಿ ಕೂರಬೇಕಾಗುತ್ತದೆ. ಇದರಿಂದ ಕಾಂಗ್ರೆಸ್ ಬೆಂಬಲ ಪಡೆದಿರುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಿಗೆ ಹಿನ್ನಡೆಯುಂಟಾಗಲಿದೆ.
ಇತ್ತ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮೈತ್ರಿಪಡೆಯ ಅಭ್ಯರ್ಥಿ ಯಾರಾಗಬೇಕು ಎಂಬ ಚರ್ಚೆ ತೀವ್ರವಾಗಿದೆ. ಜೆಡಿಎಸ್ ತನ್ನ ಅಭ್ಯರ್ಥಿ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಕಾಂಗ್ರೆಸ್ನಲ್ಲಿ ಮುದ್ದಹನುಮೇಗೌಡ ಸೇರಿದಂತೆ ನಾಲ್ವರು ಮುಖಂಡರ ಹೆಸರು ಕೇಳಿಬರುತ್ತಿದೆ.

ಯಾವ ಕಾರಣಕ್ಕೂ ಹಿಂದೆ ಸರಿಯೊಲ್ಲ
ತುಮಕೂರು ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಮುದ್ದಹನುಮೇಗೌಡ ಅವರ ಮನವೊಲಿಸುವ ಪ್ರಯತ್ನಗಳು ವಿಫಲವಾಗಿವೆ. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ತಡರಾತ್ರಿವರೆಗೂ ಮಾಡಿದ ಪ್ರಯತ್ನ ಸಫಲವಾಗಿಲ್ಲ. 'ನಾನು ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ. ಏನು ಮಾಡ್ಕೋತೀರೋ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ಅವರು ಖಡಕ್ ಉತ್ತರ ನೀಡಿದ್ದಾರೆ.

ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಹುಡುಕಾಟ
ಅತ್ತ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಇಲ್ಲ ಎಂದು ಜೆಡಿಎಸ್ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿದೆ. ಮುದ್ದಹನುಮೇಗೌಡ ಅವರನ್ನು ತುಮಕೂರಿನಿಂದ ಇಲ್ಲಿಗೆ ಕರೆತಂದು ಕಣಕ್ಕಿಳಿಸುವುದಕ್ಕೆ ಕಾಂಗ್ರೆಸ್ ಮೊದಲ ಆದ್ಯತೆ ನೀಡಿದೆ. ಒಂದು ವೇಳೆ ಮುದ್ದಹನುಮೇಗೌಡ ಅದಕ್ಕೆ ಒಪ್ಪದೆ ಇದ್ದರೆ ಬಿಎಲ್ ಶಂಕರ್ ಸ್ಪರ್ಧೆ ಬಹುತೇಕ ಖಚಿತ.

ಮೂವರು ಅಭ್ಯರ್ಥಿಗಳಲ್ಲಿ ಯಾರು?
ಮುದ್ದಹನುಮೇಗೌಡ ಅವರಲ್ಲದೆ ಕಾಂಗ್ರೆಸ್ನಲ್ಲಿ ಮೂವರು ಅಭ್ಯರ್ಥಿಗಳ ಹೆಸರು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಅದರಲ್ಲಿ ಸಚಿವ ಕೃಷ್ಣಭೈರೇಗೌಡ ಅವರ ಹೆಸರೂ ಇದೆ. ಕೃಷ್ಣಭೈರೇಗೌಡ ಅವರು ಲೋಕಸಭೆಗೆ ಸ್ಪರ್ಧಿಸುವಂತೆ ಅನೇಕ ಮುಖಂಡರು ಒತ್ತಡ ಹೇರಿದ್ದಾರೆ. ಈ ಬಗ್ಗೆ ಅವರ ಮನೆಯಲ್ಲಿ ಸಭೆ ನಡೆದಿದೆ. ಅವರಲ್ಲದೆ, ಜೆ.ಸಿ. ಚಂದ್ರಶೇಖರ್ ಮತ್ತು ಬಿ.ಎಲ್. ಶಂಕರ್ ಅವರ ಹೆಸರು ಚಾಲ್ತಿಯಲ್ಲಿದೆ.

ಕಾಂಗ್ರೆಸ್-ಜೆಡಿಎಸ್ ಪಲಾಯನ
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪರದಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಲೇವಡಿ ಮಾಡಿದ್ದಾರೆ.
'ಕಾಂಗ್ರೆಸ್ ಮತ್ತು ಜೆಡಿಎಸ್ ಅವರ ಸ್ಥಿತಿ ನೋಡಿದಾಗ ಅಯ್ಯೋ ಎನಿಸುತ್ತದೆ. ಅವರಲ್ಲಿನ ದ್ವಂದ್ವ ನೀತಿ, ಗೊಂದಲ ಫಲಿತಾಂಶ ಏನು ಎಂಬುದನ್ನು ಹೇಳಿದೆ. ತಮಗೆ ಸಾಧ್ಯವಿಲ್ಲ ಎಂದು ಜೆಡಿಎಸ್ಗೆ ಕಾಂಗ್ರೆಸ್ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. ಈಗ ಜೆಡಿಎಸ್ ಕೂಡ ಪಲಾಯನ ಮಾಡಿದೆ. ಎರಡೂ ಪಕ್ಷಗಳು ಇಲ್ಲಿ ಪಲಾಯನ ಮಾಡಿವೆ. ಫೈಟ್ ಮಾಡುವಾಗ ಪ್ರಬಲ ಎದುರಾಳಿ ಇರಬೇಕು' ಎಂದು ಸದಾನಂದಗೌಡ ಕುಟುಕಿದರು.












Click it and Unblock the Notifications