ಫೆಬ್ರವರಿ ಅಂತ್ಯದೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಸಾಧ್ಯತೆ: ಬಿ.ಕೆ ಹರಿಪ್ರಸಾದ್ ಹೇಳಿದ್ದೇನು.?
ಅಂತಿಮವಾಗಿ ಪಕ್ಷ ನಿಷ್ಠೆ ಮತ್ತು ಗೆಲ್ಲುವ ಕುದುರೆಗಳಿಗೆ ಸರಿ ಸಮಾನವಾದ ಆದ್ಯತೆ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಇಲ್ಲಿ ಸಿದ್ದಗೊಂಡ ಸಂಭವನೀಯ ಪಟ್ಟಿಗೆ ಹೈಕಮಾಂಡ್ ಬಹುತೇಕ ಅಂಗೀಕಾರ ನೀಡಲಿದೆ ಎಂದು ಹೇಳಲಾಗಿದೆ.
ಉಡುಪಿ,ಫೆಬ್ರವರಿ3: ಫೆಬ್ರವರಿ ಅಂತ್ಯದೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈಗಾಗಲೇ 37 ಅಭ್ಯರ್ಥಿಗಳ ಪಟ್ಟಿ ಕೆಪಿಸಿಸಿಗೆ ಬಂದಿದೆ. ಫೆಬ್ರವರಿ 2 ರಂದು ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ, ಶಿಫಾರಸ್ಸುಗಳನ್ನ ಕೊಟ್ಟಿದ್ದಾರೆ. ಮುಂದಿನ ಹಂತದಲ್ಲಿ ಸ್ಕ್ರೀನಿಂಗ್ ಕಮಿಟಿ ಮುಂದೆ ಹೋಗಲಿದೆ ಎಂದು ಹೇಳಿದರು.
ಕಮಿಟಿಯಲ್ಲಿ ಮೂವರು ಎಐಶಿಸಿ ನಾಯಕರು ಇರುತ್ತಾರೆ. ಸ್ಕ್ರೀನಿಂಗ್ ಕಮಿಟಿ ಬಳಿಕ ಸೆಂಟ್ರಲ್ ಎಲೆಕ್ಷನ್ ಕಮಿಟಿಗೆ ಅಭ್ಯರ್ಥಿಗಳ ಪಟ್ಟಿ ಹೋಗುತ್ತೆ. ನಂತರ ಅಭ್ಯರ್ಥಿಗಳ ಪಟ್ಟಿಯನ್ನ ಎಐಸಿಸಿ ನಾಯಕರು ಘೋಷಣೆ ಮಾಡಲಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ ಇದೆ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆದಿದ್ದು, ಸುಮಾರು 150 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಚುನಾವಣಾ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು ಚರ್ಚೆ ನಡೆಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಡೆದ ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪರವಾಗಿರುವುದರಿಂದ ಉಬ್ಬಿ ಹೋಗಿರುವ ಕೈ ನಾಯಕರು ಈಗಾಗಲೇ ಗೆಲುವಿನ ಮನಸ್ಥಿತಿಯಲ್ಲಿದ್ದು, 130ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಹೈಕಮಾಂಡ್ಗೆ ಶಿಫಾರಸ್ಸು ಮಾಡಲಿದ್ದಾರೆ.
ಚುನಾವಣಾ ಸಮಿತಿಯ ಸಭೆಯಲ್ಲಿ ಪ್ರತಿಯೊಂದು ಕ್ಷೇತ್ರದ ಕುರಿತು ಚರ್ಚೆ ನಡೆದಿದೆ. ಆಯಾ ಜಿಲ್ಲಾವಾರು ಸಮಿತಿಗಳು, ನಾಯಕರು ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿನ ಹೆಸರುಗಳನ್ನು ಅವಲೋಕಿಸಲಾಗಿದೆ. ತೀವ್ರ ವಿರೋಧಗಳು ಮತ್ತು ಆಕ್ಷೇಪಗಳು ಕೇಳಿ ಬಂದ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಎರಡನೇ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕುರಿತು ನಿರ್ಧರಿಸಲಾಗಿದೆ.
ಮೊದಲ ಪಟ್ಟಿಯಲ್ಲಿ 150 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಹೈಕಮಾಂಡ್ಗೆ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣಾ ಸಮಿತಿ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ರಾಜಕೀಯವನ್ನು ನಿರ್ಧರಿಸಲಿದೆ. ಅಂತಿಮವಾಗಿ ಪಕ್ಷ ನಿಷ್ಠೆ ಮತ್ತು ಗೆಲ್ಲುವ ಕುದುರೆಗಳಿಗೆ ಸರಿ ಸಮಾನವಾದ ಆದ್ಯತೆ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಇಲ್ಲಿ ಸಿದ್ದಗೊಂಡ ಸಂಭವನೀಯ ಪಟ್ಟಿಗೆ ಹೈಕಮಾಂಡ್ ಬಹುತೇಕ ಅಂಗೀಕಾರ ನೀಡಲಿದೆ ಎಂದು ಹೇಳಲಾಗಿದೆ.