ಬಿಜೆಪಿಯವರು ಹಾಗೂ ಜೆಡಿಎಸ್ ಎಷ್ಟು ಆಣೆಕಟ್ಟು ನಿರ್ಮಾಣ ಮಾಡಿದ್ದೀರಿ ಹೇಳಿ: ಎಂ.ಲಕ್ಷ್ಮಣ್
ಬೆಂಗಳೂರು, ನವೆಂಬರ್ 24: ಕರ್ನಾಟಕದಲ್ಲಿ 26 ಆಣೆಕಟ್ಟುಗಳಿದ್ದು, 21 ಆಣೆಕಟ್ಟು ನಿರ್ಮಾಣ ಮಾಡಿದ್ದು ಕಾಂಗ್ರೆಸ್, 1 ಆಣೆಕಟ್ಟನ್ನು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಉಳಿದ ನಾಲ್ಕು ಆಣೆಕಟ್ಟು ನಿರ್ಮಾಣವಾಗಿದ್ದು ಬ್ರಿಟೀಷರ ಕಾಲದಲ್ಲಿ. ಬಿಜೆಪಿಯವರು ಹಾಗೂ ಜೆಡಿಎಸ್ ಎಷ್ಟು ಆಣೆಕಟ್ಟು ನಿರ್ಮಾಣ ಮಾಡಿದ್ದೀರಿ ಹೇಳಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದ್ದಾರೆ.
ಈ ಕುರಿತು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಇದು ಈ ರಾಜ್ಯದ ದುರಂತ. ಇದು ಕ್ಷಮಿಸಲಾಗದ ಅಕ್ಷಮ್ಯ ಅಪರಾಧ. ಬೆಂಗಳೂರಿಗರು ಈ ಬಗ್ಗೆ ಗಮನಹರಿಸದೇ ಮಲಗಿದ್ದಾರೆ. ಈ ಜಲಾಶಯ ಬಂದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು. ಮೇಕೆದಾಟು ನಿರ್ಮಾಣದಿಂದ ಹೆಚ್ಚಿನ ಅನುಕೂಲ ಆಗುವುದು ತಮಿಳುನಾಡಿಗೆ. ನಮ್ಮ ಹಣದಿಂದ ಆಣೆಕಟ್ಟು ಕಟ್ಟುತ್ತಿದ್ದು, ಇದರಿಂದ ಶೇ.96ರಷ್ಟು ಅನುಕೂಲ ತಮಿಳುನಾಡಿಗಾದರೆ, ಶೇ.4 ರಷ್ಟು ಮಾತ್ರ ಕರ್ನಾಟಕಕ್ಕೆ ಆಗುತ್ತದೆ. ಈ ಯೋಜನೆಯಿಂದ ರಾಜ್ಯದ 10 ಜಿಲ್ಲೆಗಳ 2.5 ಕೋಟಿ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ನಾಲ್ಕು ಆಣೆಕಟ್ಟುಗಳ ಒತ್ತಡ ತಗ್ಗುತ್ತದೆ. ಜನ ಈ ವಿಚಾರವಾಗಿ ಜಾಗೃತರಾಗಬೇಕು'' ಎಂದರು.
ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದ ಹೋರಾಟ ಮಾಡಿದೆ. ಈ ಹೋರಾಟದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸುವಾಗ ಈ ಯೋಜನೆಗೆ 1 ಸಾವಿರ ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಇದು ಕೇವಲ ಘೋಷಣೆಯಾಗಿಯೇ ಉಳಿದಿದೆ.

ಈಗ ಈ ವಿಚಾರದಲ್ಲಿ ಬಹಳ ದೊಡ್ಡ ಬೆಳವಣಿಗೆಯಾಗಿದ್ದು, ತಮಿಳುನಾಡಿಗೆ ಪ್ರತಿ ತಿಂಗಳು ಬಿಡುಗಡೆಯಾಗುವ ನೀರು ಪರಿಶೀಲನೆಗೆ ರಚನೆಯಾಗಿರುವ ಕೇಂದ್ರ ಜಲ ಪರಿವೀಕ್ಷಣೆ ಸಮಿತಿ (ಸಿಡಬ್ಲ್ಯೂಎಂಸಿ) ಇದು ಕೇಂದ್ರ ಜಲ ಆಯೋಗದ ಅಧೀನದಲ್ಲಿ ರಚನೆಯಾಗಿದೆ. ಈ ಸಮಿತಿ ಜಲಶಕ್ತಿ ಸಚಿವಾಲಯದ ನಿಯಂತ್ರಣದಲ್ಲಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ 16-02-2018ರಲ್ಲಿ ಸುಪ್ರೀಂಕೋರ್ಟ್ ಆದೇಶ ಬಂದಿದೆ.
ನಾಲ್ಕು ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವರ್ಷಕ್ಕೆ 740 ಟಿಎಂಸಿ ನೀರು ಸಂಗ್ರಹವಾಗುತ್ತದೆ ಇದರ ಆಧಾರದ ಮೇಲೆ ನೀರು ಹಂಚಿಕೆಯಾಗಿದೆ. 740 ಟಿಎಂಸಿ ಪೈಕಿ 404 ಟಿಎಂಸಿ ತಮಿಳುನಾಡಿಗೆ, 284 ಟಿಎಂಸಿ ಕರ್ನಾಟಕಕ್ಕೆ, 30 ಟಿಎಂಸಿ ಕೇರಳ, 7 ಟಿಎಂಸಿ ಪುದುಚೆರಿ ಹಾಗೂ 10 ಟಿಎಂಸಿ ನೀರು ಪರಿಸರಕ್ಕೆ ಹಂಚಿಕೆಯಾಗಿದೆ.
ನೀರು ಹಂಚಿಕೆ ಗೊಂದಲ ಸೃಷ್ಟಿ
ಈ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸಾಕಷ್ಟು ಗೊಂದಲ ಸೃಷ್ಟಿಸುತ್ತಿದ್ದು ಇದಕ್ಕೆ ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರು ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು 1 ವಾರಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುತ್ತಾರೆ.

ನಮ್ಮ ರಾಜ್ಯದ ನೀರನ್ನು ನಾವು ಬಳಸಿಕೊಳ್ಳು ಯಾವುದೇ ಅಡಚಣೆಯಿಲ್ಲ ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಆದೇಶ ಕೊಟ್ಟಿದೆ. ಆದೇಶದ ಕ್ಲಾಸ್ 18ನಲ್ಲಿ ಈ ನ್ಯಾಯಾಧಿಕರಣದ ಆದೇಶದ ಪ್ರಕಾರ ಒಂದು ರಾಜ್ಯ ತನ್ನ ರಾಜ್ಯದ ಗಡಿಯೊಳಗೆ ತನ್ನ ಪಾಲಿನ ನೀರನ್ನು ತಮಗೆ ಅನುಕೂಲವಾಗುವಂತೆ ಬಳಸಬಹುದು. ಆದರೆ ಆದೇಶ ಉಲ್ಲಂಘನೆಯಾಗದಂತೆ ಬಳಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಿದೆ. ತಮಿಳುನಾಡಿಗೆ ಬಿಡಬೇಕಾದ 177 ಟಿಎಂಸಿ ಆಯಾ ಕಾಲಕ್ಕೆ ತಕ್ಕಂತೆ ಬಿಡುವುದಷ್ಟೇ ನಮ್ಮ ಜವಾಬ್ದಾರಿ. ಆದರೆ ತಮಿಳುನಾಡಿನವರು ನಮ್ಮ ನೀರಿನ ಬಳಕೆಗೆ ದೊಣ್ಣೆ ನಾಯಕನ ಅಪ್ಪಣೆ ಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯವರೇ ಕಾರಣಕಾರ್ತರು.
2021ರ ಜುಲೈನಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತಮಿಳುನಾಡು ಸಿಎಂ ಆಗಿದ್ದ ಪಳನಿಸ್ವಾಮಿ ಅವರಿಗೆ ಪತ್ರ ಬರೆಯುತ್ತಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ 2017ರಲ್ಲಿ ಈ ಯೋಜನೆಗೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗುತ್ತದೆ. ಅಕ್ಟೋಬರ್ 2017ರಲ್ಲಿ ಫೀಸಿಬಲ್ ವರದಿ ತಯಾರು ಮಾಡಿ ಕೇಂದ್ರಕ್ಕೆ ಸಲ್ಲಿಸಿ ಸಮತೋಲಿತ ಜಲಾನಯನ ಯೋಜನೆಗೆ ಅನುಮತಿ ಕೋರಲಾಗುತ್ತದೆ.
02-11-2018ರಂದು ನೂತನ ಡಿಪಿಆರ್ ಸಲ್ಲಿಸುತ್ತೇವೆ. ದುರಂತ ಎಂದರೆ ರಾಜ್ಯ ಸರ್ಕಾರ ರಾಜ್ಯದ ಹಿತಕ್ಕೆ ವಿರುದ್ಧವಾಗಿದೆ ಎಂಬುದಕ್ಕೆ 21-11-2022ರಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ಒಂದು ಅಫಿಡವಿಟ್ ಸಲ್ಲಿಸಿದೆ. ಮೇಕೆದಾಟು ಯೋಜನೆ ವಿಚಾರವಾಗಿ ಕಾವೇರಿ ನಿರ್ವಹಣಾ ಪ್ರಾಧಿಕಾರ 17 ಬಾರಿ ಚರ್ಚೆಗೆ ಮುಂದಾಗುತ್ತದೆ. ಆದರೆ ಪ್ರತಿ ಬಾರಿ ಅದು ಮುಂದೂಡಲಾಗುತ್ತದೆ. ಸಿಡಬ್ಲ್ಯೂಎಂಸಿ 70 ಬಾರಿ ಸಭೆ ಮಾಡಿದೆ.

ಹೀಗಾಗಿ ಆಗಸ್ಟ್ 2022ರಂದು ಸುಪ್ರೀಂ ಕೋರ್ಟ್, ಈ ವಿಚಾರವಾಗಿ ಚರ್ಚೆ ಮಾಡಲು ಯಾವುದೇ ಅಭ್ಯಂತರವಿಲ್ಲ, ಆದರೆ ಅಂತಿಮ ತೀರ್ಮಾನ ಹೊರಡಿಸಬೇಡಿ. ನಮಗೆ ಮಾಹಿತಿ ನೀಡಿ ಎಂದು ಹೇಳುತ್ತದೆ. ಈ ಬಗ್ಗೆ 15 ದಿನಗಳ ಒಳಗಾಗಿ ಮಾಹಿತಿ ನೀಡಿ ಎಂದು ಸಮಿತಿಗೆ ನಿರ್ದೇಶನ ನೀಡಿತ್ತು. ಆದರೂ ಸಮಿತಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮ ರಾಜ್ಯದ ಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈಗ ತಮಿಳುನಾಡು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ನೀವು ನೀಡಿದ ನಿರ್ದೇಶನಕ್ಕೆ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆ ಮೂಲಕ ನಮ್ಮ ಆಕ್ಷೇಪಣೆಗೆ ಅವರು ಒಪ್ಪಿದ್ದಾರೆ ಎಂದು ಪರಿಗಣಿಸಿ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಕಳೆದ ಮೂರು ತಿಂಗಳಿಂದ ನಿದ್ದೆ ಮಾಡುತ್ತಿದೆ. ಈಗ ತಮಿಳುನಾಡಿನ ಅಫಿಡವಿಟ್ ಅನ್ನು ಮಾನ್ಯ ಮಾಡಿ ತಮಿಳುನಾಡಿನ ಅನುಮತಿ ಪಡೆದು ಆಣೆಕಟ್ಟು ಕಟ್ಟಿ ಎಂದು ಹೇಳುತ್ತಾರೆ. ಇದಕ್ಕೆಲ್ಲ ಕಾರಣ ಯಡಿಯೂರಪ್ಪನವರು. ಅವರು ಅನವಶ್ಯಕವಾಗಿ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ಯೋಜನೆ ಜಾರಿಗೆ ಅನುಮತಿ ಕೋರಿದ್ದರು. ಇದು ತಮಿಳುನಾಡಿನವರಿಗೆ ಲಾಭವಾಗಲಿದೆ. ಈ ಪತ್ರವನ್ನೇ ಆಧಾರವಾಗಿ ಕರ್ನಾಟಕಕ್ಕೆ ಆಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯಕೈಗೊಂಡಿದ್ದಾರೆ. ಇನ್ನು ಮಹಾರಾಷ್ಟ್ರ ಗಡಿ ಭಾಗದ ವಿಚಾರ ನಾಳೆ ತೀರ್ಮಾನವಾಗುತ್ತಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾತ್ರೋರಾತ್ರಿ ಅಡ್ವೋಕೇಟ್ ಜನರಲ್ ಅವರನ್ನು ಕರೆಸಿ ಮಾತನಾಡುತ್ತಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಕಲ್ಪ ಯಾತ್ರೆ ಮಾಡಿ ನೀರಾವರಿ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಇನ್ನು ಜೆಡಿಎಸ್ ನವರು ನೀರಾವರಿ ಪಿತಾಮಹರಂತೆ ಹೇಳಿಕೊಳ್ಳುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಡಬಲ್ ಇಂಜಿನ್ ಸರ್ಕಾರವಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರ ಅವರ ಕೈಯಲ್ಲಿ ಇದೆ. ಆದರೂ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ. ಇದರಲ್ಲಿ ಜಲಶಕ್ತಿ ಸಚಿವ ಶೆಖಾವತ್ ಅವರ ಕೈವಾಡವೂ ಇದೆ. 2020ರಲ್ಲಿ ಮೋದಿ ಅವರು ತಮಿಳುನಾಡಿಗೆ ಹೋಗಿ 8500 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುತ್ತಾರೆ. ಕಾವೇರಿ ನೀರನ್ನು ತಿರುಗಿಸಿ ತೂತುಕುಡಿ ವರೆಗೂ ನಾಲ್ಕು ಜಿಲ್ಲೆಗೆ ನೀಡಲು ಕೇಂದ್ರವೇ ಹಣ ನೀಡಿ ಯೋಜನೆ ಕೊಟ್ಟಿದೆ. ಪ್ರತಿ ವರ್ಷ ನಾವು 177 ಟಿಎಂಸಿ ನೀರು ಮಾತ್ರ ಬಿಡಬೇಕು. ಕಳೆದ ಒಂದು ವರ್ಷದಿಂದ ರಾಜ್ಯದಿಂದ ತಮಿಳುನಾಡಿಗೆ ಹರಿದು ಹೋಗಿರುವ ನೀರು 450 ಟಿಎಂಸಿ. ಅದರಲ್ಲಿ 60 ಟಿಎಂಸಿ ನೀರು ಹಿಡಿದಿಡಲು ಅವಕಾಶ ನೀಡುತ್ತಿಲ್ಲ ಎಂದರೆ ಸರ್ಕಾರದ ವರ್ತನೆ ಹೇಗಿದೆ ನೋಡಿ.
ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವರು ಎಲ್ಲಿದ್ದಾರೆ? ಗೋವಿಂದ ಕಾರಜೋಳ ಅವರು ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ. ಸರ್ಕಾರರದಿಂದ ತಮಿಳುನಾಡಿನ ಅಫಿಡವಿಟ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಏಕೆ? ನಿಮಗೆ ಮೆಕೆದಾಟು ಯೋಜನೆ ನಿರ್ಮಾಣ ಮಾಡುವ ಆಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿದೆ. ನಿಮಗೆ ರಾಜ್ಯದ ಜನರ ಹಿತಕ್ಕಿಂತ ತಮಿಳುನಾಡಿನ ಹಿತವೇ ಹೆಚ್ಚಾಗಿದೆ ಎಂದು ಕಿಡಿಕಾರಿದರು.












Click it and Unblock the Notifications