ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!
Recommended Video
ಬೆಂಗಳೂರು, ಜುಲೈ 02 : ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರ ಬೆಂಬಲಿಗ ಶಾಸಕರು ರಾಜೀನಾಮೆ ನೀಡಲಿದ್ದಾರೆಯೇ? ಎಂಬ ಸುದ್ದಿ ಹಬ್ಬಿದೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗ ಶಾಸಕರಿಗೆ ರಾಜೀನಾಮೆ ಕೊಡುವಂತೆ ಮನವೊಲಿಸಬಹುದು. ಆದರೆ, ಎಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ನಾಯಕರ ಮೇಲಿನ ಅಭಿಮಾನದಿಂದಾಗಿ ರಾಜೀನಾಮೆ ನೀಡಿದರೆ ಮುಂದೇನು? ಎಂಬ ಪ್ರಶ್ನೆ ಶಾಸಕರನ್ನು ಕಾಡುತ್ತಿದೆ. ಹಲವು ದಿನಗಳಿಂದ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದ ಅವರು ಈಗ ಏಕಾಂಗಿಯೇ?.
ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರು ರಾಜೀನಾಮೆ ನೀಡುವುದಕ್ಕೂ ಮೊದಲು ನಾಲ್ಕು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಈ ಪ್ರಶ್ನೆಗಳು ಅವರ ಮುಂದಿನ ರಾಜಕೀಯ ನಡೆಯನ್ನು ಸಹ ತೀರ್ಮಾನ ಮಾಡಲಿವೆ. ಈ ಪ್ರಶ್ನೆಗಳಿಗೆ ಜಾರಕಿಹೊಳಿ ಅವರ ಉತ್ತರ ನೀಡಲಿದ್ದಾರೆಯೇ? ಕಾದು ನೋಡಬೇಕು...

ಸರ್ಕಾರ ಪತನ ಮುಂದೇನು?
ಶಾಸಕ ಸ್ಥಾನಕ್ಕೆ ಈಗ ರಾಜೀನಾಮೆ ನೀಡಿ ಸರ್ಕಾರ ಪತನಗೊಂಡರೆ ಮುಂದೇನು?. ಎಂದು ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾಗುತ್ತದೋ?, ಮಧ್ಯಂತರ ಚುನಾವಣೆ ಎದುರಾಗಲಿದೆಯೋ? ಎಂಬುದು ಶಾಸಕರ ಪ್ರಶ್ನೆಗೆ ಕಾರಣವಾಗಿದೆ.

ಬಿಜೆಪಿ ಸರ್ಕಾರ ರಚನೆ ಮಾಡಲಿದೆಯೇ?
ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಲ್ಪಮತಕ್ಕೆ ಕುಸಿದು ಪತನಗೊಂಡರೆ ಪ್ರತಿಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ ಮಾಡಲಿದೆಯೇ?. ರಾಜೀನಾಮೆ ನೀಡಿರುವ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಿದೆಯೇ? ಎಂದು ಶಾಸಕರು ಪ್ರಶ್ನಸಿದ್ದಾರೆ.

ಹೈಕಮಾಂಡ್ ಒಪ್ಪಿಗೆ ನೀಡಲಿದೆಯೇ?
ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಸೇರುವುದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಲಿದೆಯೇ?. ಒಪ್ಪಿಗೆ ಕೊಟ್ಟಿಲ್ಲ ಎಂದರೆ ಮುಂದಿನ ನಮ್ಮ ನಡೆ ಏನಾಗಬೇಕು? ಎಂದು ಶಾಸಕರು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಮಧ್ಯಂತರ ಚುನಾವಣೆ ಮಾತುಗಳು ಇವೆಯಲ್ಲಾ?
ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಮಧ್ಯಂತರ ಚುನಾವಣೆ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಚುನಾವಣೆ ಎದುರಾಗುವುದಾದರೆ ಈಗ ಶಾಸಕ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಬೇಕು? ಎಂದು ಶಾಸಕರು ಪ್ರಶ್ನಿಸಿದ್ದಾರೆ.












Click it and Unblock the Notifications