ನೂರು ಶ್ರೀನಿವಾಸ ಪ್ರಸಾದ್ ಹುಟ್ಕೋತಾರೆ, ಕಾಂಗ್ರೆಸ್ ಶಕ್ತಿ ಪ್ರದರ್ಶನ
ಈ ಭಾಗದ ಪ್ರಭಾವಿ ಮುಖಂಡ ಮತ್ತು ಸಿದ್ದರಾಮಯ್ಯ ಸರಕಾರದ ಮಾಜಿ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್, ನಂಜನಗೂಡಿನಲ್ಲಿ ಭಾನುವಾರ (ಅ 23) ಭಾರೀ ಶಕ್ತಿ ಪ್ರದರ್ಶನ ನಡೆಸಿದೆ.
ನಂಜನಗೂಡು, ಅ 23: ಈ ಭಾಗದ ಪ್ರಭಾವಿ ಮುಖಂಡ ಮತ್ತು ಸಿದ್ದರಾಮಯ್ಯ ಸರಕಾರದ ಮಾಜಿ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್, ನಂಜನಗೂಡಿನಲ್ಲಿ ಭಾರೀ ಶಕ್ತಿ ಪ್ರದರ್ಶನ ನಡೆಸಿದೆ.
ಭಾನುವಾರ (ಅ 23) ನಗರದ ಹುಲ್ಲಹಳ್ಳಿ ಎಪಿಎಂಸಿ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಒಬ್ಬ ಶ್ರೀನಿವಾಸ ಪ್ರಸಾದ್ ಹೋದರೇನಂತೆ, ನೂರು ಶ್ರೀನಿವಾಸ ಪ್ರಸಾದ್ ಹುಟ್ಟಿಕೊಳ್ಳುತ್ತಾರೆಂದು ಹೇಳಿದ್ದಾರೆ.
ತಮ್ಮ ರಾಜಕೀಯ ನಡೆಯನ್ನು ಅಂತಿಮಗೊಳಿಸುವ ಮುನ್ನವೇ, ಶ್ರೀನಿವಾಸ ಪ್ರಸಾದ್ ಬೆಂಬಲಿಗರನ್ನು ಉಚ್ಚಾಟಿಸಿ ಖಡಕ್ ನಿರ್ಧಾರ ತೆಗೆದುಕೊಳ್ಳುವ ಮೂಲಕ, ಇಂದಿನ ಸಮಾವೇಶವನ್ನು ಮುಂಬರುವ ನಂಜನಗೂಡು ಉಪಚುನಾವಣೆಗೆ ವೇದಿಕೆಯಾಗಿ ಪಕ್ಷ ಬಳಸಿಕೊಂಡಿದೆ. (ಸಿದ್ದು ಸೋಲಿಸುವುದೇ ನನ್ನ ಗುರಿ, ಶ್ರೀನಿವಾಸ ಪ್ರಸಾದ್)
ಶ್ರೀನಿವಾಸ ಪ್ರಸಾದ್ ಅವರನ್ನು ಟಾರ್ಗೆಟ್ ಮಾಡಲು ಆಯೋಜಿಸಿದಂತಿದ್ದ ಸಮಾವೇಶದಲ್ಲಿ, ಪಕ್ಷದ ಎಲ್ಲಾ ಮುಖಂಡರು ಪ್ರಸಾದ್ ವಿರುದ್ದ ಹರಿಹಾಯ್ದಿದಿದ್ದಾರೆ.
ಶ್ರೀನಿವಾಸ್ ಪ್ರಸಾದ್ ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದುದು, ನಾನು ಪಕ್ಷದಲ್ಲಿ ಎಲ್ಲರನ್ನೂ ಸಮನಾಗಿ ಕಂಡಿದ್ದೇನೆ ಎಂದು ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾವೇಶದಲ್ಲಿ ಶ್ರೀನಿವಾಸ್ ಪ್ರಸಾದ್ ಗೆ ಭರ್ಜರಿ ಟಾಂಗ್, ಮುಂದೆ ಓದಿ..

ಸಮಾವೇಶದಲ್ಲಿ ಸಿಎಂ
ಸಚಿವರಾಗಿ ಶ್ರೀನಿವಾಸಪ್ರಸಾದ್ ವಿಫಲರಾಗಿದ್ದು ಅವರನ್ನು ಸಂಪುಟದಿಂದ ಕೈಬಿಡಿ ಎಂದು ಒತ್ತಾಯ ಮಾಡುತ್ತಿದ್ದ ಪ್ರತಿಪಕ್ಷಗಳು, ಇಂದು ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ದಂಬಾಲು ಬೀಳುತ್ತಿವೆ. ಇದು ಪ್ರತಿಪಕ್ಷಗಳ ಬದ್ದತೆಯನ್ನು ತೋರಿಸುತ್ತದೆ - ಸಿದ್ದರಾಮಯ್ಯ.

ಪ್ರಿಯಾಂಕ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಪುತ್ರ, ಪ್ರಿಯಾಂಕ ಖರ್ಗೆಯವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದಾಗಿ ಖಾರವಾಗಿ ಮಾತನಾಡಿದ್ದೀರಿ. ಖರ್ಗೆ ಪುತ್ರನಿಗೆ ಸಚಿವ ಸ್ಥಾನ ಕೊಟ್ಟರೆ ನಿಮಗ್ಯಾಕೆ ಹೊಟ್ಟೆ ಉರಿ ಸ್ವಾಮೀ ಅಂತ ಶ್ರೀನಿವಾಸ ಪ್ರಸಾದ್ ಅವರನ್ನು ಸಿಎಂ ಪ್ರಶ್ನಿಸಿದ್ದಾರೆ.

ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್ ಅವರ ಮೇಲೆ ನನಗೆ ದ್ವೇಷ ಇದ್ದಿದ್ದರೆ ಅವರು ಮೂರು ವರ್ಷ ಮಂತ್ರಿಯಾಗಿ ಮುಂದುವರಿಯುತ್ತಿರಲಿಲ್ಲ. ಹಿರಿಯ ಶಾಸಕರು ಸೇರಿದಂತೆ ಕೆಲವರಿಗೆ ಸಚಿವ ಸ್ಥಾನ ನೀಡಲು ಕೆಲವರನ್ನು ಸಂಪುಟದಿಂದ ಕೈಬಿಡುವುದು ಅನಿವಾರ್ಯವಾಗಿತ್ತು - ಸಿದ್ದರಾಮಯ್ಯ.

ಪರಮೇಶ್ವರ್
ಸಮುದ್ರದಲ್ಲಿ ಒಂದು ಬಕೆಟ್ ನೀರು ತೆಗೆದರೆ ಏನೂ ನಷ್ಟವಿಲ್ಲ. ಇಂತಹದೆಲ್ಲವನ್ನೂ ಕಾಂಗ್ರೆಸ್ ಬಹಳಷ್ಟು ನೋಡಿದೆ. ನೀವು ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್ಗೆ ಯಾವ ನಷ್ಟವೂ ಆಗಿಲ್ಲ. ಒಬ್ಬ ಶ್ರೀನಿವಾಸ ಪ್ರಸಾದ್ ಹೋದರೇನಂತೆ, ನೂರು ಶ್ರೀನಿವಾಸ ಪ್ರಸಾದ್ ಹುಟ್ಟಿಕೊಳ್ಳುತ್ತಾರೆ - ಪರಮೇಶ್ವರ್.

ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
ಸಿದ್ದರಾಮಯ್ಯನವರು ನಿಮಗೆ ಆರೋಗ್ಯ ಸರಿ ಇಲ್ಲದಿದ್ದರೂ ಹಿರಿತನದ ಆಧಾರದ ಮೇಲೆ ಕಂದಾಯ ಖಾತೆ ನೀಡಿದ್ದರು. ಕೇವಲ ಅಧಿಕಾರಕ್ಕಾಗಿ ನಿಮಗೆ ಅಧಿಕಾರ ನೀಡಿದ್ದ ಪಕ್ಷಕ್ಕೆ ಚೂರಿ ಹಾಕಿ ಹಾಕುವುದು ಸರೀನಾ? ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಂದ ಶ್ರೀನಿವಾಸ ಪ್ರಸಾದ್ ಅವರಿಗೆ ಪ್ರಶ್ನೆ.

ಸಚಿವ ಮಹದೇವಪ್ಪ
ಶಾಸಕರೂಬ್ಬರು ಸಚಿವ ಸ್ಥಾನ ಕೈತಪ್ಪಿ ಹೋಗಿದ್ದಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಕೀಯ ಎನ್ನುವುದು ಯಾರ ಪಿತ್ರಾರ್ಜಿತ ಆಸ್ತಿಯಲ್ಲ, ನನ್ನ ವ್ಯಕ್ತಿತ್ವದ ಮೇಲೆ ನಾನು ನಿಂತಿದ್ದೇನೆ. ನಾನು ಯಾರಿಗೂ ಕಡಿಮೆ ಇಲ್ಲ ಅನ್ನೋದು ಗೊತ್ತಿರಲಿ, ಶ್ರೀನಿವಾಸ ಪ್ರಸಾದ್ ವಿರುದ್ಧ ಮಹದೇವಪ್ಪ ವಾಗ್ದಾಳಿ.












Click it and Unblock the Notifications