ಕಾಂಗ್ರೆಸ್ ಜಿಲ್ಲಾವಾರು ಒಳಜಗಳದ ಸ್ಯಾಂಪಲ್ ನೋಡಿ!
ಬೆಂಗಳೂರು, ಸೆಪ್ಟೆಂಬರ್ 04; ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದರೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲವೇ?. ಪಕ್ಷದಲ್ಲಿ ಒಳಜಗಳವಿದೆಯೇ?. ಕಾಂಗ್ರೆಸ್ ನಾಯಕರ ಪ್ರಕಾರ ಇಲ್ಲ. ಆದರೆ ಬಿಜೆಪಿ ಪ್ರಕಾರ ಇದೆ, ಜಿಲ್ಲಾವಾರು ಒಳಜಗಳವಿದೆ.
ಸೋಮವಾರ ಕರ್ನಾಟಕ ಬಿಜೆಪಿ ಟ್ವೀಟ್ ಒಂದನ್ನು ಮಾಡಿದೆ. 'ತನ್ನ ಮನೆಯೊಳಗಿನ ಕಿಚ್ಚನ್ನೇ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ಗೆ, ಸದಾ ಬೇರೆಯವರದ್ದೇ ಚಿಂತೆ ಜಾಸ್ತಿ!' ಎಂದು ಆಡಳಿತ ಪಕ್ಷವನ್ನು ಟೀಕೆ ಮಾಡಿದೆ.

ಬಿಜೆಪಿ ತನ್ನ ಟ್ವೀಟ್ನಲ್ಲಿ ಕಾಂಗ್ರೆಸ್ ಒಳಜಗಳ ಹೇಗಿದೆ? ಎಂದು ಸ್ಯಾಂಪಲ್ ನೀಡಿದೆ. 'ಅವರ ಒಳಜಗಳಗಳ ಜಿಲ್ಲಾವಾರು ಸ್ಯಾಂಪಲ್ ಹೀಗಿದೆ ನೋಡಿ!' ಎಂದು ಪಟ್ಟಿಯೊಂದನ್ನು ನೀಡಿದೆ.
* ಕಲಬುರಗಿ: ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದು, ಕಲ್ಬುರ್ಗಿ ಜಿಲ್ಲೆಯ ಉಳಿದ ಕೈ ಶಾಸಕರಿಗೆ ಹಿಡಿಸಿಲ್ಲ. ಬಿ. ಆರ್. ಪಾಟೀಲ್ ಸರ್ಕಾರದ ವಿರುದ್ಧವೇ ಪತ್ರ ಬರೆದರೆ, ಅಜಯ್ ಸಿಂಗ್ ಪಕ್ಷದ ಚಟುವಟಿಕೆಗಳಿಂದ ದೂರ ದೂರ.
* ರಾಯಚೂರು : ಶಾಸಕರೇ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ ನೀಡಿದ್ದಕ್ಕೆ, ರಾಯಚೂರು ಕೈ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ, ಅನುದಾನದ ಆಸೆ ತೋರಿಸಿ, ಸಿಎಂ ಸಿದ್ದರಾಮಯ್ಯ ತೇಪೆ ಹಚ್ಚಿದ್ದಾರೆ.
* ಧಾರವಾಡ : ಸಂತೋಷ್ ಲಾಡ್ರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಡಿ. ಕೆ. ಶಿವಕುಮಾರ್ ಬಣದ ವಿನಯ್ ಕುಲಕರ್ಣಿ ಹಾಗೂ ಪರಮೇಶ್ವರ್ ಬಣದ ಪ್ರಸಾದ್ ಅಬ್ಬಯ್ಯ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.
* ಶಿವಮೊಗ್ಗ : ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪರಿಗೇಕೆ ಮಂತ್ರಿಗಿರಿ ಎಂದು ಸಿದ್ದರಾಮಯ್ಯ ಬಣದ ಭದ್ರಾವತಿಯ ಸಂಗಮೇಶ್ ಗುರ್ ಎನ್ನುತ್ತಿದ್ದಾರೆ.
* ದಾವಣಗೆರೆ : ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಭ್ರಷ್ಟಾಚಾರಕ್ಕೆ ಬೇಸತ್ತು, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ರಾಜೀನಾಮೆ ಬಿಸಾಡಿ ಹೊರಹೋಗುವ ಮಾತನಾಡಿದ್ದಾರೆ.
* ಕೊಪ್ಪಳ : ಶಿವರಾಜ್ ತಂಗಡಗಿರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಶಾಸಕ ಬಸವರಾಜ ರಾಯರೆಡ್ದಿ, ಸರ್ಕಾರದ ಭ್ರಷ್ಟಾಚಾರವನ್ನು ಹೋದಲ್ಲಿ ಬಂದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.
* ಬೆಳಗಾವಿ : ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿಯವರಿಗೂ ಹಾಗೂ ಡಿ. ಕೆ. ಶಿವಕುಮಾರ್ ಬಣದ ಲಕ್ಷ್ಮಿ ಹೆಬ್ಬಾಳ್ಕರ್ಗೂ ಹುಸಿ ಮುನಿಸು, ಕಾಂಗ್ರೆಸ್ಸಿಗೆ ಬೆಳಗಾವಿ ಸೂತ್ರ ಹರಿದ ಗಾಳಿಪಟವಾಗಿದೆ.
* ಬೆಂಗಳೂರು : ಡಿಸಿಎಂ ಡಿ. ಕೆ. ಶಿವಕುಮಾರ್ರವರ ಏಕಪಕ್ಷೀಯ ನಡೆಗಳಿಗೆ ಬೇಸತ್ತು, ಬೆಂಗಳೂರು ಕೈ ಶಾಸಕರು, ಡಿ. ಕೆ. ಶಿವಕುಮಾರ್ರವರ ಸಿಟಿ ರೌಂಡ್ಸ್ಗೆ ಚಕ್ಕರ್ ಹಾಕುತ್ತಿದ್ದಾರೆ.
* ಇದೆಲ್ಲದರ ನಡುವೆ ತಮಗೆ ಮಂತ್ರಿಗಿರಿ ತಪ್ಪಿಸಿದರು ಎಂಬ ಕಾರಣಕ್ಕೆ, ಡಿ. ಕೆ. ಶಿವಕುಮಾರ್ರವರ ಸಂಪೂರ್ಣ ಸಹಕಾರದೊಂದಿಗೆ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಟೈಂ ಬಾಂಬ್ ಇಟ್ಟಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಬ್ಲಾಸ್ಟ್ ಆಗುವುದು ಖಚಿತ ಹಾಗೂ ನಿಶ್ಚಿತ! ಎಂದು ಬಿಜೆಪಿ ಟ್ವೀಟ್ನಲ್ಲಿ ಹೇಳಿದೆ.
ಬಿಜೆಪಿ ಈ ಹಿಂದೆಯೂ ಅನೇಕ ಬಾರಿ ಕಾಂಗ್ರೆಸ್ ಪಕ್ಷದ ಒಳಜಗಳದ ಕುರಿತು ಮಾಹಿತಿ ನೀಡಿದೆ. 'ಏನಾಗುತ್ತಿದೆ ಕಾಂಗ್ರೆಸ್ ಸರ್ಕಾರದಲ್ಲಿ..? ಹಿರಿಯ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯರವರನ್ನು ಕುರ್ಚಿಯಿಂದ ಇಳಿಸಲು ಪ್ಲಾನ್ ಮಾಡುತಿದ್ದಾರೆ. ಸಚಿವರುಗಳ ಮಧ್ಯೆ ವರ್ಗಾವಣೆ ದಂಧೆಯ ಕಲೆಕ್ಷನ್ ವಿಚಾರದಲ್ಲಿ ಜಗಳ, ಮನಸ್ತಾಪ. ಒಬ್ಬ ಸಚಿವ ಅಮಾನತು ಮಾಡಿದ ಅಧಿಕಾರಿಯನ್ನು ಮತ್ತೊಬ್ಬ ಸಚಿವ ಪದೋನ್ನತಿ ನೀಡಿ ನೇಮಕಗೊಳಿಸುತ್ತಾರೆ. ಒಟ್ಟಿನಲ್ಲಿ "ಕೈ" ನಲ್ಲಿ ಎಲ್ಲವೂ ಸರಿಯಿಲ್ಲ, ರಾಜ್ಯದ ಜನತೆಯ ಸಂಕಷ್ಟ ಕೇಳುವವರಿಲ್ಲ' ಎಂದು ಬಿಜೆಪಿ ಆರೋಪ ಮಾಡಿತ್ತು.
{document1}












Click it and Unblock the Notifications