Sumalatha: ಅಂಬರೀಶ್ 25 ವರ್ಷ ಸೇವೆ ಸಲ್ಲಿಸಿರುವ ಪಕ್ಷದಿಂದ ನನಗೆ ಆಹ್ವಾನ ಇರಲಿಲ್ಲ: ಸುಮಲತಾ ಅಂಬರೀಶ್ ಬೇಸರ
ಮಂಡ್ಯ,ಮೇ6: ರಾಜ್ಯ ರಾಜಕಾರಣ ಚುನಾವಣಾ ಭರಾಟೆಯಲ್ಲಿರುವ ರಾಜಕೀಯ ನಾಯಕರು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲೂ ಮಂಡ್ಯ ಲೋಕಸಭಾ ಚುನಾವಣಾ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಕುರಿತು ಸಂಸದ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ಬಿರುಸಿನ ಪ್ರಚಾರ ನಡೆಸಿದ ಬಳಿಕ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘ ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ನನಗೆ ಬೆನ್ನೆಲುಬಾಗಿ ನಿಂತು ಆಶೀರ್ವದಿಸಿದ್ದೀರಿ. ಆದರೆ, ಅಂಬರೀಶ್ ಅವರು 25 ವರ್ಷ ಸೇವೆ ಸಲ್ಲಿಸಿರುವ ಪಕ್ಷದಲ್ಲಿ ನನಗೆ ಆಹ್ವಾನ ಇರಲಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಕಾಂಗ್ರೆಸ್ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ. ಯಾವ ಕಾರಣಕ್ಕೆ ಸುಮಲತಾ ಅಂಬರೀಶ್ ಅವರನ್ನು ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಎಂದು ಕೇಳಲಿಲ್ಲವೆಂದು ನಿಮ್ಮ ನಾಯಕರನ್ನು ಪ್ರಶ್ನೆ ಮಾಡಿ ಅವರಿಂದಲೇ ಉತ್ತರ ಪಡೆಯಿರಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರ ನಡೆಗೆ ನಾನು ಹೊಣೆಯಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಮಂಡ್ಯಕ್ಕೆ ಬಂದಾಗಲೆಲ್ಲ ನನ್ನ ಬಗ್ಗೆ ಏನೆಲ್ಲಾ ಹೇಳಿಕೆ ಕೊಟ್ಟರು ಎಂಬುದನ್ನು ನೀವೇ ತಿಳಿದುಕೊಂಡು ಆಮೇಲೆ ನನ್ನನ್ನು ಪ್ರಶ್ನೆಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ ಕಿಡಿಕಾರಿದರು.
ಇನ್ನೂ ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಸಂಸದೆ ಸುಮಲತಾ, ಮೊದಲೆಲ್ಲಾ ಕುಟುಂಬ ರಾಜಕಾರಣ ನಡೆಯುತ್ತಿತ್ತು. ಈಗ ಕುಟುಂಬದೊಳಗೂ ರಾಜಕಾರಣ ಶುರುವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ ಎಂದು ಟೀಕಿಸಿದ ಅವರು, ಒಂದು ಪಕ್ಷಕ್ಕೆ ಕುಟುಂಬ ಬಿಟ್ಟರೆ ಬೇರೇನೂ ಬೇಕಿಲ್ಲ. ಅವರ ಕುಟುಂಬದವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಕಾರ್ಯಕರ್ತರೇ ಸಿಗುವುದಿಲ್ಲವಂತೆ. ಹಾಗಿದ್ದರೆ ಎಷ್ಟುಕಡೆ ಕಾರ್ಯಕರ್ತರಿಲ್ಲ ಎಂಬುದನ್ನು ಜನರೇ ಯೋಚಿಸಬೇಕು. ಹಾಸನ, ಮಂಡ್ಯ, ರಾಮನಗರ ಕ್ಷೇತ್ರಗಳಲ್ಲಿ ಒಂದು ಪಕ್ಷಕ್ಕೆ ಕಾರ್ಯಕರ್ತರು ಸಿಗುವುದಿಲ್ಲವಂತೆ. ಹಾಗಾಗಿ ಅಲ್ಲೆಲ್ಲಾ ಅವರ ಕುಟುಂಬದವೇ ನಿಲ್ಲಬೇಕಂತೆ ಎಂದು ಜೆಡಿಎಸ್ ವಿರುದ್ದ ಪರೋಕ್ಷವಾಗಿ ಲೇವಡಿ ಮಾಡಿದರು.

ಇನ್ನೂ ನನಗೆ ಪರೋಕ್ಷವಾಗಿ ಸಾಕಷ್ಟು ಜನರು ನನಗೆ ಬೆಂಬಲವನ್ನ ಸೂಚಿಸಿದ್ದಾರೆ. ಕಾಂಗ್ರೆಸ್ ನವರು ನನಗೆ ಯಾರು ಆಹ್ವಾನವನ್ನ ನೀಡಿರಲಿಲ್ಲ, ಆದರೆ, ಬಿಜೆಪಿ ಪಕ್ಷದವರು ನನ್ನನ್ನು ಗೌರವ ಆತ್ಮೀಯತೆಯಿಂದ ಆಹ್ವಾನಿಸಿದರಲ್ಲದೆ, ಬೆಂಗಳೂರು ಮತ್ತು ಮೈಸೂರಿನಲ್ಲಿ ರಸ್ತೆಗೆ ಅಂಬರೀಶ್ ಅವರ ಹೆಸರಿಟ್ಟು 12ಕೋಟಿ ರೂ ವೆಚ್ಚದಲ್ಲಿ ಒಂದು ಸ್ಮಾರಕ ನಿರ್ಮಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಲವು ವರ್ಷಗಳ ಕಾಲ ಅಂಬರೀಶ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು, ಅಂಬರೀಶ್ ಬಿಜೆಪಿ ಪಕ್ಷದಲ್ಲಿರಲಿಲ್ಲ. 27ವರ್ಷ ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿದ್ದರು, ಜೆಡಿಎಸ್ ಪಕ್ಷದವರೆಲ್ಲರೂ ಅಂಬರೀಶ್ ಆತ್ಮೀಯ ಸ್ನೇಹಿತರೆಂದು ಹೇಳಿಕೊಂಡು ಇಂದಿಗೂ ಓಡಾಡುತ್ತಿದ್ದಾರೆ. ಆದರೆ, ಅವರು ನಿಧನರಾದ 14 ತಿಂಗಳಲ್ಲಿ ಇಂತಹ ಕೆಲಸ ಏಕೆ ಮಾಡಲಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದರು.












Click it and Unblock the Notifications