ಬೆಂಬಲಕ್ಕೆ ಬರಲಿಲ್ಲವೇ ಕಾಂಗ್ರೆಸ್? ಡಿಕೆಶಿ ಉತ್ತರವೇನು?
Recommended Video
ಬೆಂಗಳೂರು, ಆಗಸ್ಟ್ 30: ಇಡಿ ಹಿಡಿತ ಡಿ.ಕೆ.ಶಿವಕುಮಾರ್ ಅವರ ಮೇಲೆ ನಿಧಾನಕ್ಕೆ ಬಲವಾಗುತ್ತಿದ್ದು, ಇಂದು ಬಂಧನಕ್ಕೆ ಒಳಗಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಆದರೆ ಇಂತಹಾ ಕ್ಲಿಷ್ಟಕರ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ರಾಜ್ಯ ಕಾಂಗ್ರೆಸ್ ಬರಲಿಲ್ಲವಾ ಎಂಬ ಪ್ರಶ್ನೆ ಮೂಡಿದೆ.
ಇಡಿ ಸಮನ್ಸ್, ಹೈಕೋರ್ಟ್ನಲ್ಲಿ ಅರ್ಜಿ ವಜಾ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ವತಃ ಡಿ.ಕೆ.ಶಿವಕುಮಾರ್ ಅವರನ್ನೇ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. 'ಚಿದಂಬರಂ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಿಲ್ಲವಾ?' ಎಂದು ಡಿಕೆಶಿ ಅವರನ್ನು ಕೇಳಲಾಯಿತು.
LIVE Updates: ಡಿಕೆಶಿಗೆ ಮಧ್ಯಂತರ ರಕ್ಷಣೆ ಇಲ್ಲ, ಬಂಧನ ಸಾಧ್ಯತೆ
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಪಕ್ಷದ ಪರವಾಗಿಯೇ ಕೆಲಸ ಮಾಡಿದ್ದೇನೆ, ಅದರಿಂದಲೇ ನನ್ನ ಮೇಲೆ ವಿರೋಧಿಗಳು ತಂತ್ರ ಹೂಡಿದ್ದಾರೆ. ಯಾರು ಬೆಂಬಲ ಮಾಡಲಿ, ಬಿಡಲಿ ನನಗೆ ಚಿಂತೆ ಇಲ್ಲ, ಅದನ್ನೆಲ್ಲಾ ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಆದರೆ ನಾನು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ ಅಷ್ಟೆ ಎಂದು ಅವರು ಹೇಳಿದರು.
ಪಿ.ಚಿದಂಬರಂಗೆ ಕಾಂಗ್ರೆಸ್ ಬೆಂಬಲ
ಕೆಲವು ದಿನಗಳ ಹಿಂದಷ್ಟೆ ಕಾಂಗ್ರೆಸ್ನ ಹಿರಿಯ ಸಂಸದ ಪಿ.ಚಿದಂಬರಂ ಅವರನ್ನು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಆಗ ಇಡೀಯ ಕಾಂಗ್ರೆಸ್ ಅವರ ಬೆಂಬಲಕ್ಕೆ ನಿಂತಿತು. ಕಾಂಗ್ರೆಸ್ ಕಚೇರಿಯಲ್ಲಿಯೇ ಅವರು ಸುದ್ದಿಗೋಷ್ಠಿ ನಡೆಸಿ ಅಲ್ಲಿಂದಲೇ ಮನೆಗೆ ತೆರಳಿ ಅಲ್ಲಿ ಸಿಬಿಐ ವಶಕ್ಕೆ ಒಳಪಟ್ಟರು. ಆದರೆ ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಕಾಂಗ್ರೆಸ್ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
|
ಡಿಕೆಶಿಗೆ ಸಿದ್ದರಾಮಯ್ಯ ಬೆಂಬಲದ ಟ್ವೀಟ್
ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕ ಸಿದ್ದರಾಮಯ್ಯ ಮಾತ್ರ, ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಕೇಂದ್ರ ಸರ್ಕಾರ ಸಿಬಿಐ,ಇಡಿ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಕೀಯ ಪ್ರೇರಿತ ತಂತ್ರವನ್ನು ಎದುರಿಸಿ ಗೆಲ್ಲುವೆ: ಡಿಕೆಶಿ
ಗುಜರಾತ್ ಶಾಸಕರ ರಕ್ಷಣೆ ವೇಳೆ ಮೊದಲ ದಾಳಿ
2017 ರಲ್ಲಿ ಗುಜರಾತ್ನ ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಈಗಲ್ ಟನ್ ರೆಸಾರ್ಟ್ನಲ್ಲಿ ರಕ್ಷಣೆ ನೀಡಿದ್ದರು. ಅವರೂ ಸಹ ಈಗಲ್ ಟನ್ ರೆಸಾರ್ಟ್ನಲ್ಲಿ ಇದ್ದ ದಿನವೇ ಡಿ.ಕೆ.ಶಿವಕುಮಾರ್ ಮೇಲೆ ಮೊದಲ ದಾಳಿ ಆಗಿತ್ತು.
ಡಿ.ಕೆ.ಶಿವಕುಮಾರ್ಗೆ ಇಡಿ ಸಮನ್ಸ್
ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ನೀಡಿದ್ದು, ಇಂದು ಅವರು ವಿಚಾರಣೆಗೆ ಹಾಜರಾಗಬೇಕಿದೆ. ಡಿಕೆ ಶಿವಕುಮಾರ್ ಉತ್ತರಗಳು ತೃಪ್ತಿ ನೀಡಲಿಲ್ಲವೆಂದರೆ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ. ಮಧ್ಯಂತರ ರಕ್ಷಣೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಈಗಾಗಲೇ ವಜಾ ಮಾಡಿದೆ.