KS Eshwarappa : ಕೆಎಸ್ ಈಶ್ವರಪ್ಪ ರಾಜೀನಾಮೆ ಕೊಟ್ಟಾಯ್ತು: ಕಾಂಗ್ರೆಸ್ ಮುಂದಿನ ನಡೆಯೇನು?
ಬೆಂಗಳೂರು, ಏ. 15: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಘಟನೆಗೆ ಕೊನೆಗೂ ತಲೆದಂಡವಾಗಿದೆ. ಗುತ್ತಿಗೆದಾರ ಕೈಬೆಟ್ಟು ಮಾಡಿ ತೋರಿಸಲಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಇಂದು ಕೊನೆಗೂ ರಾಜೀನಾಮೆ ನೀಡಿದ್ದಾರೆ. ಈಶ್ವರಪ್ಪ ವಿಪಕ್ಷಗಳ ಒತ್ತಾಯಕ್ಕೆ ಮಣಿದರೋ, ಅಥವಾ ಹೈಕಮಾಂಡ್ ಮುಂದಾಲೋಚನೆಯಿಂದ ಹೇರಿದ್ದ ಒತ್ತಡಕ್ಕೆ ಮಣಿದರೋ, ಅವರು ರಾಜೀನಾಮೆಯನ್ನಂತೂ ಸಿಎಂ ಬೊಮ್ಮಾಯಿ ಅವರ ಕೈಗೆ ಕೊಟ್ಟಿದ್ದಾರೆ.
ಕೆ ಎಸ್ ಈಶ್ವರಪ್ಪ ರಾಜೀನಾಮೆ ಬಳಿಕ ಕಾಂಗ್ರೆಸ್ ಮುಂದೇನು ಹೆಜ್ಜೆ ಇಡುತ್ತದೆ? ಪ್ರತಿಭಟನೆ, ಹೋರಾಟಗಳನ್ನು ನಿಲ್ಲಿಸುತ್ತದಾ ಎಂಬ ಕುತೂಹಲ ಸಹಜವಾಗಿಯೇ ಏಳುತ್ತದೆ. ಆದರೆ, ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಬದಲಾಗಿ ಹೋರಾಟದ ತಂತ್ರದಲ್ಲಿ ಬದಲಾವಣೆ ಆಗಲಿದೆ.
ನಿನ್ನೆ ಈಶ್ವರಪ್ಪ ತಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಾಯಕರು ತಮ್ಮ ಮುಂದಿನ ದಾರಿ ಬಗ್ಗೆ ಸುಳಿವು ನೀಡಿದ್ದರು. ಈಶ್ವರಪ್ಪ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ಆದರೆ, ಇಂಥ ಗಂಭೀರ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಈಶ್ವರಪ್ಪ ಅವರನ್ನ ಕೂಡಲೇ ಬಂಧಿಸಬೇಕು, ಎಫ್ಐಆರ್ ದಾಖಲಿಸಬೇಕು ಎಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದರು.

ಅಷ್ಟೇ ಅಲ್ಲ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸರಕಾರದಲ್ಲಿರುವ 40% ಲಂಚದ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೂ 40% ಕಮಿಷನ್ ಆರೋಪ ಮಾಡಿದ್ದಾರೆ. ಇದು ಬಹಳ ಗಂಭೀರ ಆರೋಪ ಆಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.
ಈ ಮೇಲಿನ ಬೇಡಿಕೆಗಳನ್ನ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ದಟ್ಟವಾಗಿದೆ. ನಿನ್ನೆ ಡಿಕೆ ಶಿವಕುಮಾರ್ ಅವರು ಮುಂದಿನ ಹೋರಾಟದ ರೂಪುರೇಖೆಯನ್ನ ಶೀಘ್ರದಲ್ಲೇ ರೂಪಿಸುವುದಾಗಿ ತಿಳಿಸಿದ್ದರು. ಅದರಂತೆ ಅವರು ಯೋಜನೆ ಹಮ್ಮಿಕೊಂಡಿದ್ದಾರೆ. ಸರಕಾರದ ವಿರುದ್ಧ ಕೇಳಿಬಂದ 40% ಲಂಚದ ಆರೋಪದ ವಿಚಾರವನ್ನೇ ಕಾಂಗ್ರೆಸ್ ಪ್ರಮುಖವಾಗಿ ಎತ್ತಿಕೊಂಡಿದೆ. ಮುಂದಿನ ವರ್ಷದ ಚುನಾವಣೆಯಷ್ಟರಲ್ಲಿ ಈ ವಿಚಾರದ ಬಗ್ಗೆ ದೊಡ್ಡ ಜನಾಭಿಪ್ರಾಯ ರೂಪಿಸುವ ಮಹಾ ಯೋಜನೆ ಕಾಂಗ್ರೆಸ್ನದ್ದು.

ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ. ಇದು ಏಪ್ರಿಲ್ 17, ಅಂದರೆ ಸೋಮವಾರದಿಂದಲೇ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ವಿಚಾರವನ್ನು ಇಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಪ್ರತಿಭಟನೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾದ್ಯವಾಗುವಂತೆ ಎಂಟು ತಂಡಗಳನ್ನ ರಚಿಸಲಾಗಿದೆ. ಈ ತಂಡಗಳು ವಿವಿಧೆಡೆಯ ಪ್ರತಿಭಟನೆಗಳ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಅಡಕತ್ತರಿ ಸ್ಥಿತಿ:
ಕೆಎಸ್ ಈಶ್ವರಪ್ಪ ಕುರುಬ ಸಮುದಾಯದ ದೊಡ್ಡ ನಾಯಕ. ಆತ್ಮಹತ್ಯೆಯಾದ ಸಂತೋಷ್ ಪಾಟೀಲ್ ಪ್ರಬಲ ಲಿಂಗಾಯತ ಸಮುದಾಯದ ವ್ಯಕ್ತಿ. ಈಗ ಈಶ್ವರಪ್ಪ ಅವರಿಗೆ ಶಿಕ್ಷೆಯಾದರೆ ಅವರನ್ನು ಬಲಿಬಶು ಮಾಡಲಾಯಿತು ಎಂಬಂತಹ ಅಭಿಪ್ರಾಯ ಮೂಡಿಬಂದು ಕುರುಬ ಸಮುದಾಯದವರಿಂದ ಹೋರಾಟ ನಡೆಯಬಹುದು. ಇದು ಬಿಜೆಪಿಗೆ ಹಿನ್ನಡೆಯನ್ನಂತೂ ತರುತ್ತದೆ.
ಇನ್ನು, ಈಶ್ವರಪ್ಪ ಆರೋಪಮುಕ್ತರಾಗಿ ಬಂದರೆ ಸಂತೋಷ್ ಪಾಟೀಲ್ ಅವರಿಗೆ ಅನ್ಯಾಯವಾಗಿದೆ ಎಂಬ ಅನಿಸಿಕೆ ತೇಲಿಬಂದು ಲಿಂಗಾಯತ ಸಮುದಾಯವನ್ನು ರೊಚ್ಚಿಗೇಳಿಸಬಹುದು. ಲಿಂಗಾಯತರದ್ದೇ ಪ್ರಬಲ ವೋಟ್ ಬ್ಯಾಂಕ್ ಇರುವ ಬಿಜೆಪಿಗೆ ಇದು ಇನ್ನೂ ಹೆಚ್ಚಿನ ಘಾಸಿ ಉಂಟು ಮಾಡಬಹುದು. ಮೊದಲೇ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗಿದೆ ಎಂದು ಲಿಂಗಾಯತರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಿದ್ದುಹೋದರೆ ಲಿಂಗಾಯತರು ಬಿಜೆಪಿಯಿಂದ ವಿಮುಖರಾಗುವ ಸಾಧ್ಯತೆಯಂತೂ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications