ಕಾಂಗ್ರೆಸ್ ಮುಕ್ತ ಕರ್ನಾಟಕ: ಕಾಂಗ್ರೆಸ್ ನಾಯಕರಿಂದಲೇ ಆಗುತ್ತೆ ಬಿಡ್ರೀ..
ಬೆಂಗಳೂರು, ಜೂ 21: ಸಚಿವ ಸಂಪುಟದಿಂದ ಕೈಬಿಟ್ಟ ನೋವಿನಿಂದ ಇನ್ನೂ ಹೊರಬರದಿರುವ ಕಲಬುರಗಿ ಉತ್ತರ ಕ್ಷೇತ್ರದ ಶಾಸಕ, ಮಾಜಿ ಸಚಿವ ಖಮರುಲ್ ಇಸ್ಲಾಂ ಮತ್ತೊಮ್ಮೆ ಪಕ್ಷದ ಮತ್ತು ಪಕ್ಷದ ಮುಖಂಡರ ವಿರುದ್ದ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಬಿಜೆಪಿ ಅಥವಾ ಇತರ ಪಕ್ಷಗಳು ಹೆಚ್ಚಿನ ಶ್ರಮ ವಹಿಸಬೇಕಾಗಿಲ್ಲ. ಅದು ರಾಜ್ಯದ ಕಾಂಗ್ರೆಸ್ ಮುಖಂಡರಿಂದಲೇ ಆಗುತ್ತದೆ ಎಂದು ಖಮರುಲ್ ಇಸ್ಲಾಂ ವ್ಯಂಗ್ಯ ವಾಡಿದ್ದಾರೆ.
ನಗರದಲ್ಲಿ ಮಂಗಳವಾರ (ಜೂ 21) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖಮರುಲ್ ಇಸ್ಲಾಂ, ಖರ್ಗೆಯವರ ಸಲಹೆಯಂತೆ ನನಗೆ ಸಚಿವ ಸ್ಥಾನದಿಂದ ಸಿಎಂ ಕೊಕ್ ನೀಡಿದ್ದಾರೆ. ಖರ್ಗೆಯವರ ಪುತ್ರ ವ್ಯಾಮೋಹದಿಂದಾಗಿ ನನ್ನಂತಹ ನಿಷ್ಟಾವಂತನಿಗೆ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.
ನನ್ನನ್ನು ಸಂಪುಟದಿಂದ ಕೈಬಿಡುವ ಮೊದಲು ಕರೆದು ಮಾತಾಡಿಸುವ ಕನಿಷ್ಠ ಸೌಜನ್ಯತೆಯನ್ನು ಮುಖ್ಯಮಂತ್ರಿಗಳು ಹೊಂದಿಲ್ಲ. ನನ್ನ ಹಾಗೇ ಸಂಪುಟದ ಹಿರಿಯ ಸಚಿವರಿಗೆ ಕೊಕ್ ನೀಡಿದ್ದು, ಹಲವು ನಾಯಕರ ಕೆಂಗಣ್ಣಿಗೆ ಸಿಎಂ ಮತ್ತು ಖರ್ಗೆ ಗುರಿಯಾಗಿದ್ದಾರೆಂದು ಖಮರುಲ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಕಲಬುರಗಿ ಲೋಕಸಭಾ ವ್ಯಾಪ್ತಿಯ ಪ್ರತಿಯೊಂದು ಮುಸ್ಲಿಮರ ಮನೆಮನೆಗೆ ತೆರಳಿ, ಖರ್ಗೆ ಆಡಿದ ಆಟವನ್ನು ವಿವರಿಸುತ್ತೇನೆ. ಖರ್ಗೆ ಸಾಬ್ ಮಾಡಿದ ಮೋಸಕ್ಕೆ ಪ್ರಾಯಶ್ಚಿತ್ತ ಆಗಲೇ ಬೇಕು.
ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಚುನಾವಣೆ ಬಂದಾಗ ಮಾತ್ರ ಪಕ್ಷಕ್ಕೆ ನನ್ನ ನೆನಪಾಗುತ್ತದೆ. ಚುನಾವಣೆ ನಂತರ ಕಾಂಗ್ರೆಸ್ ಪಕ್ಷಕ್ಕೆ ನನ್ನ ಅವಶ್ಯಕತೆ ಕಾಣುವುದಿಲ್ಲ ಎಂದು ಖಮರುಲ್ ಇಸ್ಲಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.