ಹಂಸಲೇಖ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ
ಬೆಂಗಳೂರು, ನ.26: ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಪೇಜಾವರ ಶ್ರೀಗಳ ಕುರಿತು ನೀಡಿದ ಹೇಳಿಕೆ ವಾದ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ದೂರು ದಾಖಲಾದ ಕಾರಣ ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಸಹ ದಾಖಲಿಸಿದ್ದಾರೆ. ಅವರ ಪರವಾಗಿ ಮತ್ತು ವಿರುದ್ಧವಾಗಿ ವಾದ ಪ್ರತಿವಾದಗಳು ನಡೆಯುತ್ತಿರುವುದರ ಮಧ್ಯೆಯೇ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹಂಸಲೇಖ ಪರ ಮಾತನಾಡಿದ್ದಾರೆ.
'ಹಂಸಲೇಖ ಅವರ ಹೇಳಿಕೆಯ ಮೇಲೆ ದೊಡ್ಡ ಪ್ರಹಸನವನ್ನೇ ಸೃಷ್ಟಿಸಿರುವ ಮನುವಾದಿಗಳು, ಜನರ ಆಹಾರ ಪದ್ದತಿಯ ಸ್ವಾತಂತ್ರ್ಯದ ವಿರೋಧಿಗಳು ಎಂದೆನ್ನಬಹುದು' ಎಂದು ಪ್ರಿಯಾಂಕ್ ಖರ್ಗೆ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಅದರ ಪೂರ್ಣ ವಿವರ ಹೀಗಿದೆ.
ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾದ ಹಂಸಲೇಖ
ದಲಿತರ ಮನೆಗೆ ಯಾರೋ ಭೇಟಿ ನೀಡುವುದು ದೊಡ್ಡ ವಿಚಾರವೇ ಅಲ್ಲ. ದಲಿತರನ್ನು ಮೇಲ್ವರ್ಗದ ಮನೆಗಳಿಗೆ ಕರೆಸಿಕೊಂಡು ಅವರ ಮನೆಯ ಅಡುಗೆ ಪಾತ್ರೆ ಬಳಸಿ ಊಟ ಬಡಿಸುವುದು, ದೇವಾಲಯದ ಗರ್ಭಗುಡಿಗೆ ಪ್ರವೇಶ ನೀಡುವುದು ಇಂದಿಗೆ ದೊಡ್ಡ ವಿಚಾರವೇ ಹೌದು ಎಂದಿದ್ದಾರೆ ಪ್ರಿಯಾಂಕ್ ಖರ್ಗೆ.
ಅದಕ್ಕೆ ಉದಾಹರಣೆ ದಲಿತ ಸಮುದಾಯದ ಐದು ವರ್ಷದ ಚಿಕ್ಕ ಮಗು ದೇವಾಲಯದ ಒಳ ಹೋಗಿದ್ದಕ್ಕೆ ಆ ಮಗುವಿನ ಪೋಷಕರಿಗೆ ಆ ದೇವಾಲಯದ ಆಡಳಿತ ವರ್ಗ ಶುದ್ದೀಕರಣದ ವೆಚ್ಚವನ್ನ ದಂಡವನ್ನಾಗಿ ವಸೂಲಿ ಮಾಡುವ ಕೆಲಸ ಮಾಡಿದ್ದು, ದಲಿತರು ಮನೆಗೆ ಬಂದರೆ ಶುದ್ದೀಕರಣಕ್ಕೆ ಗೋಮೂತ್ರ ಬಳಸುವುದು.
ಈ ಮನುವಾದಿ ಸಂಸ್ಕೃತಿಯ ಬಿಜೆಪಿಯ ನಾಯಕರಿಗೆ ಹಾಗೂ ಸಂಘ ಪರಿವಾರದವರಿಗೆ ದಲಿತರ ಮೇಲೆ ನಿಜವಾದ ಕಾಳಜಿಯಿದ್ದಲ್ಲಿ ಮೊದಲು ಇವುಗಳನ್ನು ನಿಲ್ಲಿಸಲಿ. ಸಮಾನತೆ ಸ್ಥಾಪಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾರಿಗೆ ತಂದಿರುವ ಸಂವಿಧಾನವನ್ನೇ ಬದಲಾಯಿಸುತ್ತೇವೆ ಅನ್ನುವ ಮಾತುಗಳನ್ನು ನಿಲ್ಲಿಸಲಿ ನೋಡೋಣ.
ಬಿಜೆಪಿ ನಾಯಕರು ದಲಿತರ ಮನೆಗೆ ತೆರಳಿ ಹೋಟೆಲ್ನಿಂದ ಊಟ ತರಿಸಿ ತಿಂದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಸಮಾಜದ ಜನರಲ್ಲಿಯೂ ನಾನೂ ವಿನಂತಿಸಿಕೊಳ್ಳುತ್ತೇನೆ, ಜನರ ಕಣ್ಣಿಗೆ ಮಣ್ಣೆರುಚುವ ಯಾವುದೇ ರಾಜಕೀಯ ನಾಯಕರ ಡೋಂಗಿ ಪ್ರಯತ್ನಗಳಿಗೆ ನಿಮ್ಮ ಮನೆಯನ್ನು ನಾಟಕ ಪ್ರದರ್ಶನ ಮಾಡುವ ಕೇಂದ್ರ ಮಾಡದಿರಿ.
ಬಿಜೆಪಿಗರಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿಯಿದ್ದರೆ, ಕರ್ನಾಟಕದಲ್ಲಿ ಅವರ ಏಳಿಗೆಗಾಗಿ ಸರ್ಕಾರ ದುಡಿಯುವಂತೆ ನೋಡಿಕೊಳ್ಳಲಿ. ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಲು ಕ್ರಮ ಕೈಗೊಳ್ಳಲಿ, ದಲಿತರ ಮಕ್ಕಳಿಗೆ ಸಮಾನ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿ. ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅವರು ಮೊದಲು ಅರಿತುಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Recommended Video