"ಬಿಜೆಪಿಯವರು ರೌಡಿಶೀಟರ್ ಗಳು ತಮ್ಮ ಪಕ್ಷದ ಫೀಲರ್'ಗಳೆಂದು ಒಪ್ಪಿಕೊಳ್ಳಲಿ"
ಹುಬ್ಬಳ್ಳಿ, ಜನವರಿ 04: ಶ್ರೀಕಾಂತ್ ಪೂಜಾರಿ ಮೇಲೆ ಈಗಾಗಲೇ 16 ಕೇಸ್ ಇವೆ. ಅಂತವರ ಪರವಾಗಿ ಬಿಜೆಪಿ ನಿಂತು ಹೋರಾಟ ಮಾಡುವುದು ಎಷ್ಟರಮಟ್ಟಿಗೆ ಸರಿ, ಇದರಿಂದ ಬಿಜೆಪಿ ತತ್ವ ಸಿದ್ದಾಂತ ಏನೆಂಬುದು ಗೊತ್ತಾಗುತ್ತದೆ. ಬಿಜೆಪಿಯವರು ರೌಢಿಶೀಟರ್'ಗಳು ತಮ್ಮ ಪಕ್ಷದ ಫೀಲರ್'ಗಳೆಂದು ಒಪ್ಪಿಕೊಳ್ಳಲಿ, ನಾವು ಅವರ ಹೋರಾಟವನ್ನು ಒಪ್ಪಿಕೊಳ್ಳುತ್ತೇವೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಎಂದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರ ಬಂಧನ ವಿಷಯವನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಇದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಹೈಕೋರ್ಟ್ ಆದೇಶದ ಮೇರೆಗೆ ಪೋಲಿಸರು ಎಲ್'ಪಿಸಿ ಕೇಸ್'ಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವ ಕಾರಣಕ್ಕೂ ಹುಬ್ಬಳ್ಳಿ ಶರಹ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡುವ ಮಾತಿಲ್ಲ ಎಂದರು.
ಇನ್ಸ್ಪೆಕ್ಟರ್ ಎಂ.ಎಂ.ತಹಶಿಲ್ದಾರ ಒಬ್ಬ ಖಡಕ್ ಅಧಿಕಾರಿಯಾಗಿದ್ದು, ರೌಢಿಜಂ ವಿರುದ್ಧ ತಮ್ಮ ದಕ್ಷತೆಯನ್ನು ತೋರಿಸಿದ್ದಾರೆ. ಅವರೊಬ್ಬ ಜಾತ್ಯಾತೀತ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಹುಕ್ಕೇರಿಯಲ್ಲಿ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪಿಸಿ ತಮ್ಮ ಧಾರ್ಮಿಕ ಮನೋಭಾವ ಏನೆಂಬುದು ತೋರಿಸಿದ್ದಾರೆ. ಇದನ್ನು ನೋಡಿ ಆದರೂ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಇದೀಗ ಇನ್ಸ್ಪೆಕ್ಟರ್ ವಿರುದ್ಧ ಬಿಜೆಪಿಯವರು ಸುಖಾ ಸುಮ್ಮನೆ ಮುಗಿ ಮುಳುತ್ತಿದ್ದಾರೆ. ಅವರನ್ನು ಯಾವುದೇ ಕಡ್ಡಾಯ ರಜೆಯ ಮೇಲೆ ಕಳಿಸಿಲ್ಲ, ಅವರು ತಮ್ಮ ವೈಯಕ್ತಿಕ ಕಾರಣಕ್ಕೆ ರಜೆ ತಗೊಂಡಿದ್ದಾರೆ. ಸರ್ಕಾರ ಯಾವುದೇ ರೀತಿಯ ರಜೆ ಕೊಟ್ಟಿಲ್ಲ, ನಿರ್ದೇಶನವು ನೀಡಿಲ್ಲ ಎಂದು ಇನ್ಸ್ಪೆಕ್ಟರ್'ಗೆ ಕಡ್ಡಯ ರಜೆ ನೀಡಲಾಗಿದೆ ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಿದರು.
ಇನ್ಸ್ಪೆಕ್ಟರ್ ಅಮಾನತು ಕುರಿತು ಬಿಜೆಪಿಯ ಗೊಡ್ಡು ಬೆದರಿಕೆಗೆ ಸರ್ಕಾರ ಹೆದರುವ ಪ್ರಶ್ನೆಯಿಲ್ಲ, ಹೀಗೆ ಮುಂದುವರೆದರೇ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಜೆಪಿಯ ಕುತಂತ್ರವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ತಿಳಿಸಿದರು.












Click it and Unblock the Notifications