ನಾಳೆ ಕಾಂಗ್ರೆಸ್ ಸಚಿವರ ಮಹತ್ವದ ಸಭೆ, ವೇಣುಗೋಪಾಲ್ ಭಾಗಿ
ಬೆಂಗಳೂರು, ಆಗಸ್ಟ್ 30: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಇಂದು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಚುನಾವಣಾ ತಯಾರಿ ಸಂಬಂಧ ನಾಳೆ ರೆಸಾರ್ಟ್ ವೊಂದರಲ್ಲಿ ಕಾಂಗ್ರೆಸ್ ಸಚಿವರ ಮಹತ್ವದ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.
ಚುನಾವಣೆಗೆ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಈ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಸ್.ಆರ್ ಪಾಟೀಲ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಎಲ್ಲಾ ಸಚಿವರು ಪಾಲ್ಗೊಳ್ಳಲಿದ್ದಾರೆ. ಸಚಿವರು ಕಟ್ಟು ನಿಟ್ಟಾಗಿ ಸಭೆಯಲ್ಲಿ ಪಾಲ್ಗೊಳ್ಳಲೇಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದ ಹೊರವಲಯದಲ್ಲಿರುವ ಕ್ಲಾಕ್ ಎಕ್ಸಾರ್ಟಿಕಾ ರೆಸಾರ್ಟ್ ನಲ್ಲಿ ಈ ಸಭೆ ಆಯೋಜನೆಯಾಗಿದೆ. ತಡ ರಾತ್ರಿವರೆಗೂ ಸಭೆ ನಡೆಯಲಿದ್ದು, ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೋಜನಕೂಟ ಹಮ್ಮಿಕೊಂಡಿದ್ದಾರೆ.
2018ರ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವುದು, ನೀಲನಕ್ಷೆ ಸಿದ್ಧಪಡಿಸುವುದು, ಸಂಪನ್ಮೂಲ ಹೊಂದಿಸುವುದು, ಸಚಿವರುಗಳಿಗೆ ನಿರ್ಧಿಷ್ಟ ಜವಾಬ್ದಾರಿ ಹಂಚಿಕೆ ಮಾಡುವುದು, ಉಸ್ತುವಾರಿ ಮತ್ತು ತವರು ಜಿಲ್ಲೆಗಳಲ್ಲಿ ಚುನಾವಣಾ ತಯಾರಿ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ.












Click it and Unblock the Notifications