ಎಷ್ಟೇ ದೊಡ್ಡವನಾದ್ರೂ ತಗ್ಗಿಬಗ್ಗಿ ನಡೀಬೇಕು: ಜಮೀರ್ ಹೇಳಿದ್ದು ಯಾರಿಗೆ?
ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಬಿಜೆಪಿ ಶಾಸಕನಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಗಳಿಗೆ ಎದುರಾಗಿ ಕಾರು ಚಲಾಯಿಸಿದರು ಎನ್ನಲಾದ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ಅವರನ್ನು ಜಮೀರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊನ್ನೆ ರಾತ್ರಿ ರಾಯಚೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗಂಗಾವತಿ ಮಾರ್ಗವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಗಾವಲು ವಾಹನಗಳು ವಾಪಸ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಗರಂ ಆಗಿರುವ ಸಚಿವ ಜಮೀರ್ ಅಹ್ಮದ್, ದೇವರ ಕೃಪೆಯಿಂದ ಜನಾರ್ದನ್ ರೆಡ್ಡಿಗೆ ಬಳ್ಳಾರಿಗೆ ಕಾಲಿಡುವ ಅವಕಾಶ ಸಿಕ್ಕಿದೆ. ಅವರು ಇನ್ನಾದರೂ ದುರಹಂಕಾರ ಬಿಟ್ಟು ಬದುಕಿದರೆ ಒಳ್ಳೆಯದು ಎಂದಿದ್ದಾರೆ.

ಮನುಷ್ಯ ಎಷ್ಟೇ ದೊಡ್ದವನಾದ್ರೂ ತಗ್ಗೀಬಗ್ಗೀ ನಡೀಬೇಕು ಅನ್ನೋದು ಜನಾರ್ದನ್ ರೆಡ್ಡಿಗೆ ಇನ್ನೂ ಗೊತ್ತಿಲ್ಲ. ಮೊದಲು ಅಧಿಕಾರದಲ್ಲಿದ್ದಾಗ ರೆಡ್ಡಿ ಹೇಗೆಲ್ಲ ನಡೆದುಕೊಂಡಿದ್ರು ಅನ್ನೋದು ನಮ್ಮ ರಾಜ್ಯದ ಜನಕ್ಕೆ ತಿಳಿದಿದೆ. ಅವರು ಕೇವಲ 20 ಕಿ.ಮೀ ಹೋಗಬೇಕಾದ್ರೂ ಹೆಲಿಕಾಪ್ಟರ್ನಲ್ಲೇ ಹೋಗುತ್ತಿದ್ದವರು. ಆಕಾಶದಲ್ಲೇ ಹಾರಾಡುತ್ತಿದ್ದ ಅವರಿಗೆ ಭೂಮಿ ಕಾಣುತ್ತಿರಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಜನಾರ್ದನ್ ರೆಡ್ಡಿ ಅವರು ತನ್ನ ಅಹಂಕಾರವನ್ನು ಮತ್ತೆ ಮುಂದುವರಿಸುತ್ತಿದ್ದಾರೆ. ಅಹಂಕಾರ ಅವರ ರಕ್ತದಲ್ಲೇ ಇದೆ. ದೇವರು ಅವರಿಗೆ ಕೊಟ್ಟಿರುವ ಅವಕಾಶವನ್ನು ಬಳಸಿಕೊಂಡು, ಜನರ ಸೇವೆ ಮಾಡಿಕೊಂಡಿದ್ದರೆ ಒಳ್ಳೆಯದು ಎಂದು ಜಮೀರ್ ಸಲಹೆ ನೀಡಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?: ರಾಜಕೀಯ ವಿರೋಧಿಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮೊನ್ನೆ ರಾತ್ರಿ ಮುಖಾಮುಖಿಯಾಗಿದ್ದರು. ಈ ವೇಳೆ ಅಪರೂಪದ ಬೆಳವಣಿಗೆಯೊಂದು ನಡೆದಿತ್ತು. ಜನಾರ್ದನ್ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಯಾರೇ ಎನ್ನದೆ, ತಮ್ಮ ಕಾರನ್ನು ಡಿವೈಡರ್ ಮೇಲೆ ಹತ್ತಿಸಿ ಒನ್ವೇಲಿ ಹೋಗಿದ್ದರು ಎಂದು ವರದಿಯಾಗಿತ್ತು.
ರಾಯಚೂರು ಸೇರಿದಂತೆ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಸಿಎಂ ಬೆಂಗಾವಲು ವಾಹನಗಳು ಕೊಪ್ಪಳ ಮಾರ್ಗವಾಗಿ ಗಂಗಾವತಿಗೆ ಬಂದಾಗ ಈ ಘಟನೆ ನಡೆದಿತ್ತು.
ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಾಹನ ಬರುತ್ತಿದ್ದ ಕಾರಣ ಗಂಗಾವತಿ ಬಳಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ರಸ್ತೆಯಲ್ಲಿ ವಾಹನ ಸವಾರರನ್ನು ತಡೆಯಲಾಗಿತ್ತು. ಇದೇ ಮಾರ್ಗದಲ್ಲಿ ಶಾಸಕ ಜನಾರ್ದನ್ ರೆಡ್ಡಿ ಅವರಿದ್ದ ಕಾರು ಕೂಡ ಇತ್ತು. ಹಾಗಾಗಿ ಪೊಲೀಸರು ರೆಡ್ಡಿ ಅವರ ಕಾರನ್ನು ಕೂಡ ತಡೆದಿದ್ದರು.
ತುಂಬಾ ಹೊತ್ತಾದರೂ ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣ ಜನಾರ್ದನ್ ರೆಡ್ಡಿ ಅವರು ಕೋಪಗೊಂಡಿದ್ದರು. ಕೊನೆಗೆ ಸಿಎಂ ಆದ್ರೆ ನನಗೇನು ಎನ್ನುತ್ತಾ ನೇರವಾಗಿ ಡಿವೈಡರ್ ಮೇಲೆಯೇ ಕಾರ್ ಹತ್ತಿಸಿ, ಒನ್ವೇಯಲ್ಲಿ ಕಾರು ಚಲಾಯಿಸಿದ್ದರು. ಈ ವಿಡಿಯೋ ಮಾಧ್ಯಮಗಳಲ್ಲಿ ಹರಿದಾಡಿತ್ತು.
ರಾಂಗ್ ರೂಟ್ನಲ್ಲಿ ಜನಾರ್ದನ್ ರೆಡ್ಡಿ ಅವರ ಕಾರು ಬರುತ್ತಿದ್ದನ್ನು ಕಂಡ ಸಿಎಂ ಬೆಂಗಾವಲು ಸಿಬ್ಬಂದಿ, ತಮ್ಮ ವಾಹನಗಳನ್ನೇ ನಿಲ್ಲಿಸಿದ್ದರು. ರೆಡ್ಡಿ ಅವರ ಕಾರು ಪಾಸ್ ಆದ ಬಳಿಕ ಮತ್ತೆ ಅಲ್ಲಿಂದ ಪ್ರಯಾಣ ಮುಂದುವರಿಸಿದರು ಎಂದು ಹೇಳಲಾಗಿದೆ.
ಒಂದೆಡೆ ಭದ್ರತೆಯ ನೆಪದಲ್ಲಿ ಜನರಿಗೆ ತೊಂದರೆ ಮಾಡೋದು ಸರಿಯಲ್ಲ. ಸಿಎಂ ಅವರು ಝೀರೋ ಟ್ರಾಫಿಕ್ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಜನಪ್ರತಿನಿಧಿಯಾದವರೇ ಈ ರೀತಿ ಡಿವೈಡರ್ ಮೇಲೆ ಕಾರು ಹತ್ತಿಸಿ, ತಪ್ಪು ಮಾರ್ಗದಲ್ಲಿ ಕಾರು ಚಲಾಯಿಸುವುದು ಎಷ್ಟರಮಟ್ಟಿಗೆ ಸರಿ? ಎಂದು ಹಲವರು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಜಮೀರ್ ಮಾತನಾಡಿದ್ದಾರೆ.












Click it and Unblock the Notifications