Congress Manifesto 2023: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಧವಾ ಪಿಂಚಣಿ 2500 ರೂ.ಗೆ ಹೆಚ್ಚಳ
ಬೆಂಗಳೂರು ಮೇ 2: ರಾಜ್ಯ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಪಕ್ಷಗಳಿಗೆ ಮತದಾರರನ್ನು ಸೆಳೆಯಲು ಕೆಲವೇ ಕೆಲವು ದಿನಗಳು ಬಾಕಿ ಇವೆ. ಹೀಗಾಗಿ ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಳೆದ ದಿನ ಅಂದರೆ ಸೋಮವಾರ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇಂದು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದೆ. ಈ ಬಾರಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ವಿಧವಾ ಪಿಂಚಣಿಯನ್ನು 2500 ರೂಪಾಯಿಗೆ ಹೆಚ್ಚಳ ಸೇರಿದಂತೆ ಮಹಿಳೆ ಮತ್ತು ಮಕ್ಕಳು ಅಭಿವೃದ್ಧಿಗಾಗಿ ಕೆಲ ಯೋಜನೆಗಳನ್ನು ಜಾರಿಗೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಹಾಗಾದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಎಷ್ಟು ಒತ್ತು ನೀಡಲಾಗಿದೆ ಎಂದು ನೋಡೋಣ.

ಹೆಣ್ಣಲ್ಲವೆ ಹೆತ್ತವಳು?
* ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ರೂ.2 ಸಾವಿರ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡಿದೆ.
* ಮಹಿಳಾ ಉದ್ಯಮಶೀಲತೆಗಾಗಿ ಪ್ರತಿ ವರ್ಷ 5 ಸಾವಿರ ಮಹಿಳೆಯರಿಗೆ ಬೆಂಬಲ
*ವಿಧವಾ ಪಿಂಚಣಿ ರೂ 2500ಕ್ಕೆ ಹೆಚ್ಚಳ ಂಆಡುವುದಾಗಿ ಕಾಂಗ್ರೆಸ್ ಭರವಸೆ ನಿಡಿದೆ.
*5 ವರ್ಷಗಳಲ್ಲಿ 5 ಸಾವಿರ ಸ್ತ್ರೀ ಶಕ್ತಿ ಕಿರು ಉದ್ಯಮಗಳಗೆ ಪೋಷಣೆ. 2ನೇ ಶತಮಾನದ ಅಗತ್ಯಗಳಾದ ಆಹಾರ ಸಂಸ್ಕರಣೆ, ಕೇಟರಿಂಗ್, ಮೊಬೈಲ್ ಕ್ಯಾಂಟೀನ್, ಘನ ತ್ಯಾಜ್ಯ ನಿರ್ವಹಣೆ, ಪಾರ್ಕಿಂಗ್ ನಿರ್ವಹಣೆಯಂತಹ ಕ್ಷೇತ್ರಗಳಿಗೆ ಉತ್ತೇಜನ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

*ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಸೇರಿದಂತೆ ಕಾನೂನಿನ ಎದುರು ಸಮಾನತೆ, ಎಲ್ಲರಿಗೂ ಸಂವಿಧಾನ ನೀಡಿದ ಹಕ್ಕು. ಆದರೆ ಅಧಿಕಾರಕವಾದ ಭಾವ ಸರಕಾರ ಅಧಿಕಾರವನ್ನು ಪಡೆಯುವ ಒಂದೇ ಉದ್ಧೇಶದಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತ ರಾಜಕೀಯ ಧುರೀಕರಣವನ್ನು ತನ್ನ ಮುಖ್ಯ ಗುರಿಯಾಗಿ ಇಟ್ಟಕೊಂಡಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡ ನಮ್ಮ ಸಮಾಜದ ಎಲ್ಲರೂ ಸಮಾನ ಅಭಿವೃದ್ಧಿ ಮತ್ತು ಕಲ್ಯಾಣಗಳ ಹಕ್ಕನ್ನು ಪಡೆದಿದ್ದಾರೆ ಎನ್ನುವ ಸಂವಿಧಾನ ಬದ್ಧತೆ ಕಾಂಗ್ರೆಸ್ ಪಕ್ಷದ ನಿಶ್ಚಿತ ನಂಬಿಕೆ. ಈ ನಿಟ್ಟಿನಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಮತ್ತು ಧಾರ್ಮಿಕ ಪವಿತ್ರ ಕೇಂದ್ರಗಳ ಪುನರುಜ್ಜೀವನಕ್ಕಾಗಿ ಸಂಬಂಧಿತ ಅಭಿವೃದ್ಧಿ ನಿಗಮಗಳಿಗೆ ವಾರ್ಷಿಕ ರೂ. 10 ಸಾವಿರ, ಕೋಟಿಗಳ ಅನುದಾನದ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಪೂರ್ಣಗೊಂಡಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದೆ. ಈಗೇನಿದ್ದರೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications