ಕಾಂಗ್ರೆಸ್ ಮುಖಂಡನಿಂದ ಬಿಜೆಪಿ ಮುಖಂಡನ ಮೇಲೆ ಗನ್ ಫೈರ್
ಹೊಸಕೋಟೆ, ಏಪ್ರಿಲ್ 04: ಜಿದ್ದಾ-ಜಿದ್ದಿನ ಚುನಾವಣಾ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಮುಖಂಡನೊಬ್ಬ ಬಿಜೆಪಿ ಮುಖಂಡನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.
ಹೊಸಕೋಟೆಯ ಹುಣಸೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಸ್ಥಳೀಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಅಲಿಯಾಸ್ ಜಾನಿ ಎಂಬಾತ ಅದೇ ಗ್ರಾಮದ ಬಿಜೆಪಿ ಪರ ಕಾರ್ಯಕರ್ತ ರಾಮಣ್ಣ ಅಲಿಯಾಸ್ ರಾಮು ಎಂಬುವರ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಗುರಿ ತಪ್ಪಿದ್ದು, ರಾಮಣ್ಣ ಅಪಾಯದಿಂದ ಪಾರಾಗಿದ್ದಾರೆ.
ರಾಮಣ್ಣ ಅವರು ಜನಾರ್ಧನ್ ಅವರ ಸಂಬಂಧಿಗಳ ಮನೆಗೆ ತೆರಳಿ ಬಿಜೆಪಿ ಪರ ಮತ ಯಾಚಿಸಿದ್ದು ಜನಾರ್ಧನ್ ಅವರಿಗೆ ಸಿಟ್ಟು ತರಿಸಿದೆ. ರಸ್ತೆಯಲ್ಲಿ ಹೋಗುತ್ತಿದ್ದ ರಾಮಣ್ಣ ಅವರೊಂದಿಗೆ ಇದೇ ಕಾರಣಕ್ಕೆ ಜಗಳ ತೆಗೆದ ಜನಾರ್ಧನ್ ಜೇಬಿನಲ್ಲಿದ್ದ ಪಿಸ್ತೂಲು ತೆಗೆದು ಎರಡು ಬಾರಿ ಗುಂಡು ಹಾರಿಸಿದ್ದಾರೆ, ಆದರೆ ಅದೃಷ್ಟವಶಾತ್ ಗುಂಡು ಗುರಿತಪ್ಪಿ ಮರಕ್ಕೆ ತಾಗಿದೆ.

ಜನ ಸೇರಿದ ಕೂಡಲೇ ಜನಾರ್ಧನ್ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾನೆ. ಘಟನೆ ಸಂಬಂಧ ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಹೊಸಕೋಟೆಯಲ್ಲಿ ಬಿಜೆಪಿಯ ಬಚ್ಚೇಗೌಡ ಮತ್ತು ಹಾಲಿ ಶಾಸಕ ಕಾಂಗ್ರೆಸ್ನ ಎಂ.ಟಿ.ಬಿ.ನಾಗರಾಜು ಅವರ ನಡುವೆ ಅತಿ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ಮುಂಚಿನಿಂದಲೂ ರಾಜಕೀಯವಾಗಿ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ ಹೊಸಕೋಟೆ ಈ ಬಾರಿ ಇನ್ನೂ ಸೂಕ್ಷ್ಮ ಪ್ರದೇಶವಾಗಿದ್ದು, ಈತ್ತೀಚೆಗೆ ರಾಜಕೀಯ ಗಲಾಟೆಗಳು ಹೆಚ್ಚಾಗುತ್ತಲೇ ಇವೆ.












Click it and Unblock the Notifications