ಖಾತೆ ಆಯ್ತು, ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶುರುವಾಯ್ತು ಲಾಬಿ
Recommended Video
ಬೆಂಗಳೂರು, ಜೂನ್ 11: ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಗೊಂದಲ, ತಿಕ್ಕಾಟಗಳು ಇನ್ನೂ ಪೂರ್ಣವಾಗಿ ಪರಿಹಾರ ಕಂಡಿಲ್ಲ.
ಈ ಮಧ್ಯೆಯೇ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಲಾಬಿ ಆರಂಭವಾಗಿದೆ. ಪಕ್ಷದ ರಾಜ್ಯ ವಿಭಾಗದ ನೇತೃತ್ವವನ್ನು ವಹಿಸಿಕೊಳ್ಳುವ ವಿಚಾರದಲ್ಲಿಯೇ ಕಾಂಗ್ರೆಸ್ನಲ್ಲಿ ಎರಡು ಬಣಗಳಾಗಿವೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂಬಿ ಪಾಟೀಲ್, ಸತೀಶ್, ದಿನೇಶ್!
ಪಕ್ಷದಲ್ಲಿನ ಬೆಳವಣಿಗೆಗಳು, ಗೊಂದಲಗಳು ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಶಾಸಕರು ಸೋಮವಾರ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿಗೆ ಶಾಸಕರು ಒಮ್ಮತದ ನಿಲುವಿಗೆ ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಅಧ್ಯಕ್ಷ ಸ್ಥಾನ ನಿಡುವ ಸಂಬಂಧ ಕಾಂಗ್ರೆಸ್ನ ಪ್ರಮುಖ ನಾಯಕರು ಜೂನ್ 14ರಂದು ದೆಹಲಿಗೆ ತೆರಳಿ ವರಿಷ್ಠರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷಗಿರಿ ವಿಚಾರದಲ್ಲಿ ದೊಡ್ಡ ಪ್ರಮಾಣದ ಲಾಬಿ ನಡೆಯುತ್ತಿದೆ. ಸಚಿವ ಸ್ಥಾನದ ಸಿಗದ ಪ್ರಮುಖರು ಕಡೇ ಪಕ್ಷ ಕೆಪಿಸಿಸಿಯ ನೇತೃತ್ವವನ್ನಾದರೂ ಪಡೆದುಕೊಳ್ಳಲು ಹೋರಾಟ ನಡೆಸಿದ್ದಾರೆ.
ಇಲ್ಲಿ ದಿನೇಶ್ ಗುಂಡೂರಾವ್ ಮತ್ತು ಜಿ. ಪರಮೇಶ್ವರ್ ಬಣಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.
ಎಚ್ಡಿಕೆಗೆ ರಾಹುಲ್ ಗಾಂಧಿ ಕರೆ: ಕಾಂಗ್ರೆಸ್ ನಾಯಕರಿಗೆ ಆಘಾತ!
ಜಿ. ಪರಮೇಶ್ವರ್ ಅವರು ತಮ್ಮಿಂದ ತೆರವಾಗುವ ಸ್ಥಾನಕ್ಕೆ ದಲಿತ ನಾಯಕ ಮುನಿಯಪ್ಪ ಅಥವಾ ಈಡಿಗ ಸಮುದಾಯದ ಬಿ.ಕೆ. ಹರಿಪ್ರಸಾದ್ ಅವರನ್ನು ತರಬೇಕು ಎಂದು ಶತಃಪ್ರಯತ್ನ ನಡೆಸಿದ್ದಾರೆ.
ಈ ಇಬ್ಬರಲ್ಲಿ ಒಬ್ಬರಿಗೆ ಕೆಪಿಸಿಸಿ ನೇತೃತ್ವ ವಹಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಲಿತ, ಹಿಂದುಳಿದ ವರ್ಗದ ಮತಗಳನ್ನು ಸೆಳೆಯಲು ಅನುಕೂಲವಾಗಲಿದೆ ಎಂದು ಪರಮೇಶ್ವರ್ ವರಿಷ್ಠರಿಗೆ ವಿವರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತ ಸಚಿವ ಸ್ಥಾನ ಸಿಗದ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿನ ಪಕ್ಷದ ಹೊಣೆಯನ್ನು ಹೊತ್ತುಕೊಳ್ಳಲು ಸಿದ್ಧರಿದ್ದಾರೆ. ಆದರೆ, ಅವರಿಗೆ ಜಾತಿ ಬಲ ಹೆಚ್ಚು ಇಲ್ಲದ ಕಾರಣ ಅವರಿಗೆ ಈ ಜವಾಬ್ದಾರಿ ಸಿಗಲಾರದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕಾರಣದಿಂದ ಪರಮೇಶ್ವರ್ ಅವರ ಬಣಕ್ಕೆ ಕೌಂಟರ್ ನೀಡಲು ದಿನೇಶ್ ಗುಂಡೂರಾವ್ ಮತ್ತು ಅವರ ತಂಡ, ಸಿದ್ದರಾಮಯ್ಯ ಅವರ ಹೆಸರನ್ನು ಮುಂಚೂಣಿಗೆ ತರಲು ಮುಂದಾಗಿದೆ.
ಸದ್ಯ ಬಾದಾಮಿ ಕ್ಷೇತ್ರದ ಪ್ರವಾಸದಲ್ಲಿ ಮಗ್ನರಾಗಿರುವ ಸಿದ್ದರಾಮಯ್ಯ ಅವರ ಕುರಿತು ವರಿಷ್ಠರಲ್ಲಿ ಗೌರವವಿದೆ. ಹೀಗಾಗಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಿ. ದಿನೇಶ್ ಗುಂಡೂರಾವ್ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಿ ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ನೀಡಿದರೆ ಪರಮೇಶ್ವರ್ ಅವರ ತಂಡವನ್ನು ಪಕ್ಷದ ವಿವಿಧ ಹುದ್ದೆಗಳಿಂದ ದೂರವಿಡಬಹುದು ಎಂದು ದಿನೇಶ್ ಗುಂಡೂರಾವ್ ಬಣ ಲೆಕ್ಕಾಚಾರ ಮಾಡಿದೆ ಎನ್ನಲಾಗಿದೆ.
ಇತ್ತ, ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು ಕಾಂಗ್ರೆಸ್ನಲ್ಲಿ ತಳಮಳ ಹುಟ್ಟಿಸಿದ್ದ ಎಂ.ಬಿ. ಪಾಟೀಲ್ ಅವರಿಗೆ ಕೆಪಿಸಿಸಿ ಹೊಣೆಗಾರಿಕೆ ವಹಿಸಲು ಸಿದ್ದರಾಮಯ್ಯ ಲಾಬಿ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.
ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಮತ್ತೊಬ್ಬ ಪ್ರಭಾವಿ ಮುಖಂಡ ಸತೀಶ್ ಜಾರಕಿಹೊಳಿ ಅವರ ಪರವಾಗಿಯೂ ಲಾಬಿಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.