ವಿ ಸೋಮಣ್ಣ ಬಳಿಕ ಬಿಜೆಪಿಯ ಸಂಸದನಿಗೆ ಕಾಂಗ್ರೆಸ್ ಗಾಳ; ಹೊಸ ಬಾಂಬ್ ಸಿಡಿಸಿದ ಜಿ.ಎಸ್ ಬಸವರಾಜು
ತುಮಕೂರು, ನವೆಂಬರ್ 25: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಕಂಡ ಕಾಂಗ್ರೆಸ್, 2024 ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿದ್ದು, ಜೆಡಿಎಸ್ ಹಾಗೂ ಬಿಜೆಪಿ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದು, ಇದೀಗ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ.
ಹೌದು, ಈ ಕುರಿತು ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಜಿ ಸಚಿವ ವಿ.ಸೋಮಣ್ಣರನ್ನಲ್ಲದೆ ನನ್ನನ್ನೂ ಕೂಡ ಕಾಂಗ್ರೆಸ್ನವರು ಕರೆದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿದ್ಧಗಂಗಾ ಮಠಕ್ಕೆ ವಿ. ಸೋಮಣ್ಣ ಅವರು ಭೇಟಿ ನೀಡಿದ ವೇಳೆ ಸಂಸದ ಬಸವರಾಜು ಕೂಡ ಶ್ರೀಮಠಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿ, ನಿಮಗೆ ವಯಸ್ಸಾಗಿದೆ. ಆದರೂ ಪರವಾಗಿಲ್ಲ. ನೀವು ಬನ್ನಿ ಅಂತಾ ಕಾಂಗ್ರೆಸ್ನವರು ಕರೆದಿದ್ದಾರೆ. ಆದರೆ, ನಾನು ಬರಲ್ಲ ಅಂತ ಹೇಳಿದ್ದೇನೆ ಎಂದು ಬಸವರಾಜು ಸ್ಪಷ್ಟಪಡಿಸಿದ್ದಾರೆ.
ನಾನು ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂತಾ ಸೋಮಣ್ಣ ಹೇಳಿದ್ದಾರೆ. ಸೋಮಣ್ಣ ಅವರು ಕಾಂಗ್ರೆಸ್ಗೆ ಹೋಗ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ತುಮಕೂರಿನಿಂದಲೇ ಸ್ಪರ್ಧೆ ಮಾಡ್ತೇನೆ ಅಂತಾ ಹೇಳಿದ್ದಾರೆ. ಕಾಂಗ್ರೆಸ್ನವರು ಸೋಮಣ್ಣ ಅವರನ್ನು ಮಾತ್ರ ಕರೆದಿಲ್ಲ. ನನ್ನನ್ನೂ ಕೂಡ ಕರೆದಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಅವರಿಗೆ ಉತ್ತಮವಾದ ವಾತಾವರಣ ಇದೆ. ಹಾಗೆಯೇ ಮುದ್ದಹನುಮೇಗೌಡರಿಗೂ ಕೂಡ ಒಳ್ಳೆಯ ವಾತಾವರಣ ಇದೆ ಎಂದ ಬಸವರಾಜು ಅವರು, ಸೋಮಣ್ಣ ಪರ ಬ್ಯಾಟಿಂಗ್ ಬೀಸಿದ್ದಲ್ಲದೆ, ಪಾರ್ಟಿ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರ ಕೆಲಸ ಮಾಡುತ್ತೇನೆ. ಸೋಮಣ್ಣ ಅವರಿಗೆ ಟಿಕೆಟ್ ಕೊಟ್ಟರೂ ಅವರಿಗೆನೇ ಕೆಲಸ ಮಾಡ್ತೇನೆ. ಸೋಮಣ್ಣ ಅವರು ಎರಡು ಭಾರೀ ಉಸ್ತುವಾರಿ ಸಚಿವರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ತುಮಕೂರು ಉಸ್ತುವಾರಿ ಅವರೇ ತಗೊಂಡಿದ್ದು, ದೇವೇಗೌಡರ ವಿರುದ್ಧ ನಾನು ಗೆಲ್ಲಲು ವಿ. ಸೋಮಣ್ಣ ಕಾರಣ ಅಂತಾ ಸ್ಪಷ್ಟನೆ ನೀಡಿದ್ದಾರೆ.
ವಿ. ಸೋಮಣ್ಣ ಮತ್ತು ಟೀಂ ಹೆಹಲಿಗೆ ಹೋದಾಗ ನಾನು ಕೂಡ ಅಲ್ಲೇ ಇರ್ತೇನೆ. ಸಂಸತ್ ಅಧಿವೇಶನ ನಡೆಯುತ್ತಿರುತ್ತದೆ. ಹಾಗಂತ ನಾನು ಅವರ ಪರ ಬ್ಯಾಟ್ ಬೀಸುತ್ತೇನೆ ಅಂತಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೋ ಅವರ ಪರ ನಾನು ಕೆಲಸ ಮಾಡುತ್ತೇನೆ ಎಂದು ಸಂಸದ ಜಿ.ಎಸ್ ಬಸವರಾಜು ಹೇಳಿದರು.












Click it and Unblock the Notifications