ವಿಲ್ಸನ್ ಗಾರ್ಡನ್ ನಾಗ ಆಲಿಯಾಸ್ ರೌಡಿ ನಾಗ ಪರಿಚಯ ನಗಗಿಲ್ಲ: ರಾಮಲಿಂಗರೆಡ್ಡಿ
ಬೆಂಗಳೂರು, ಡಿಸೆಂಬರ್ 3: ವಿಲ್ಸನ್ ಗಾರ್ಡನ್ ನಾಗ ಆಲಿಯಾಸ್ ರೌಡಿ ನಾಗ ಪರಿಚಯ ನಗಗಿಲ್ಲ. ನನ್ನ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾಗನ ವಿಚಾರದಲ್ಲಿ ನನ್ನ ಹೆಸರನ್ನು ಎಳೆದು ತರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಪಕ್ಷಕ್ಕೆ ಅನೇಕ ರೌಡಿ ಶೀಟರ್ ಸೇರ್ಪಡೆ ಆಗ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರ್ತಿತ್ತು. ಅದು ಅವರಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಅದನ್ನು ಮರೆಮಾಚುವ ನಿಟ್ಟಿನಲ್ಲಿ ಆಧಾರ ರಹಿತವಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ರೌಡಿ ನಾಗ ನನ್ನ ಪಕ್ಕದಲ್ಲಿ ಬಂದು ನಿಂತರೂ ನನಗೆ ಆತನ ಗುರುತು ಸಿಗಲು ಸಾಧ್ಯವಿಲ್ಲ. ಆ ವ್ಯಕ್ತಿ ನನ್ನ ಕ್ಷೇತ್ರದವನೂ ಅಲ್ಲ. ಈ ಆರೋಪದ ಬಗ್ಗೆ ನಾನು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಜೊತೆಯೂ ಮಾತಾಡಿದ್ದೇನೆ. ನಾನು ರೌಡಿ ನಾಗನ ಪರ ಎಂದು ಏನಾದ್ರೂ ದಾಖಲೆ ನೀಡಿದರೆ ಒಪ್ಪಿಕೊಳ್ಳುತ್ತೇನೆ ಎಂದರು.

ಬಿಜೆಪಿ ಅವರು ಈ ಫೋಟೋವನ್ನು ಎಡಿಟ್ ಮಾಡಿದ್ದಾರೆ. ಇದು ನೂರಕ್ಕೆ ನೂರು ಬಿಜೆಪಿ ಅವರು ಎಡಿಟ್ ಮಾಡಿರೋದು. ಇದರ ಬಗ್ಗೆ ಪೊಲೀಸ್ ಅಧಿಕಾರಿಗಳನ್ನೇ ಸ್ಪಷ್ಟನೆ ಕೇಳಿ. ನಾನು ಕಮಿಷನರ್ ಪ್ರತಾಪ್ ರೆಡ್ಡಿ, ಡಿಸಿಪಿ ಶರಣಪ್ಪ, ಧರ್ಮೇಂದ್ರ ಜೊತೆ ಮಾತನಾಡಿ ಅವರ ಗಮನಕ್ಕೆ ತಂದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ನಾಗ ಎಂಬ ವ್ಯಕ್ತಿಯನ್ನು ನಾನು ಕಳೆದ 10 ವರ್ಷದಿಂದ ನೋಡಿಲ್ಲ, ಅದಕ್ಕೂ ಮುಂಚೆಯೂ ಗೊತ್ತಿಲ್ಲ ನನಗೆ ಅವನನ್ನು ನೋಡಿದರೂ ಗುರುತು ಸಿಕ್ಕಿಲ್ಲ . ನಾನು ಯಾರಿಗೂ ಕರೆ ಮಾಡಿಲ್ಲ, ಯಾವ ಒತ್ತಡವನ್ನು ಹಾಕಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳಿಂದ ಏನು ನಿರೀಕ್ಷೆ ಮಾಡಲು ಆಗಲ್ಲ. ಅವರಿಗೆ ಕಾನೂನು ಗೊತ್ತಿಲ್ಲ, ಕಾನೂನು ಪರಿಪಾಲನೆಯೂ ಗೊತ್ತಿಲ್ಲ ಎಂದು ಕಿಡಿಕಾರಿದರು.












Click it and Unblock the Notifications