ಯಡಿಯೂರಪ್ಪ, ಜನಾರ್ದನ ರೆಡ್ಡಿಯವರು ಜೈಲಿಗೆ ಹೋಗಲು ಕಾಂಗ್ರೆಸ್ ಕಾರಣ: ಆರ್ ಅಶೋಕ್ ಹೇಳಿದ್ದೇನು?
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳು ಹೆಚ್ಚಾಗಿದ್ದು, ಯಡಿಯೂರಪ್ಪ ಜೈಲಿಗೆ ಹೋಗಲು ಕಾಂಗ್ರೆಸ್ ಕಾರಣ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರು,ಮಾರ್ಚ್1: ಯಡಿಯೂರಪ್ಪನ ಮೇಲೆ ಕಾಂಗ್ರೆಸ್ನವರು ಪ್ರೀತಿ ತೋರಿಸುತ್ತಿದ್ದಾರೆ. ಹಿಂದೆ ಅವರನ್ನು ಯಾಕೆ ಜೈಲಿಗೆ ಹಾಕಿದ್ರು? ಜನಾರ್ದನ್ ರೆಡ್ಡಿ, ಯಡಿಯೂರಪ್ಪ ಅವರನ್ನ ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ಎಂದು ಕಂದಾಯ ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಜೈಲಿಗೆ ಹೋಗೋದಕ್ಕೆ ಸೂತ್ರಧಾರರೇ ಕಾಂಗ್ರೆಸ್ ನವರು. ಅವರಿಂದಲೇ ಯಡಿಯೂರಪ್ಪ ಜೈಲಿಗೆ ಹೋಗಿದ್ದು ಎಂದು ಹೇಳಿದರು.

ಕಳೆದ 3 ತಿಂಗಳಿನಿಂದ ನಡೆದ ಸರ್ವೇಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ನಾವು ಬಹುಮತ ದಾಟಿ ಅತಿ ಹೆಚ್ಚು ಸ್ಥಾನಗಳೊಂದಿಗೆ ವಿಧಾನಸಭೆಯಲ್ಲಿ ಅಧಿಕಾರ ಪಡೆಯಲಿದ್ದೇವೆ. ಕಾಂಗ್ರೆಸ್ ನಾಯಕತ್ವದ ಕೊರತೆಯಿಂದ ಬಳಲುತ್ತಿದೆ. ಅದು ಬಂಜರು ಭೂಮಿಯ ಪಕ್ಷ. ಮರಳುಗಾಡಿನ ಪಕ್ಷ ಅದು. ಅವರು ಒಯಸಿಸ್ಗೆ ಹುಡುಕಾಡುತ್ತಿದೆ. ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಹಳೆ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ತಾಂಡಾದವರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯಲಿದೆ. 40 ನಾಯಕರು ವಿವಿಧೆಡೆ ನಮ್ಮ ರಥಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಇನ್ನು ಮುಂದಿನ ಬಿಜೆಪಿ ಸಭೆ, ಸಮಾರಂಭಗಳು ಅತಿ ಹೆಚ್ಚು ಶಾಸಕತ್ವದೊಂದಿಗೆ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ. ಬಿಜೆಪಿ ಅಶ್ವಮೇಧ ಆರಂಭವಾಗಿದೆ. ರಾಜ್ಯದಾದ್ಯಂತ ಬಿಜೆಪಿ ಹವಾ ಇದೆ. ನಮ್ಮಲ್ಲಿ ಲೀಡರ್ಶಿಪ್ ಇದೆ. ಅವರಲ್ಲಿ (ಕಾಂಗ್ರೆಸ್) ಗುಂಪುಗಾರಿಕೆ ಇದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಇನ್ನು ಯಾವತ್ತೂ ತಲೆ ಎತ್ತದಂತೆ ಅಂತಿಮ ಮೊಳೆ ಹೊಡೆಯುವ ಚುನಾವಣೆ ಇದಾಗಲಿದೆ. ಕೆಂಪೇಗೌಡರು ಕಟ್ಟಿಸಿದ ಆವಟಿಯ ಚನ್ನಕೇಶವ ದೇವಾಲಯದಲ್ಲಿ ಇದೇ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೂಜೆ ಬಳಿಕ 4ನೇ ರಥ ಉದ್ಘಾಟನೆ ಆಗಲಿದೆ. ಬಳಿಕ ದೇವನಹಳ್ಳಿ ಶಾಲಾ ಮೈದಾನದಲ್ಲಿ 4ನೇ ರಥ ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಸಭೆ ಇದ್ದು, 30-40 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ವಿವರ ನೀಡಿದರು.
ಡಬಲ್ ಎಂಜಿನ್ ಸರಕಾರ ಮರುಸ್ಥಾಪನೆಗೆ ಗೆಲ್ಲುವಂಥ ಹಲವಾರು ಸೂತ್ರಗಳನ್ನು ಪಕ್ಷ ಸಿದ್ಧಪಡಿಸಿದೆ. ಜನತೆಗೆ ಮುಟ್ಟಿರುವ ಕಾರ್ಯಕ್ರಮಗಳು ಜನರಿಗೆ ತಿಳಿಯಬೇಕೆಂದು ವಿಜಯ ಸಂಕಲ್ಪ ಯಾತ್ರೆ 4 ರಥಗಳ ಮೂಲಕ ನಡೆಯಲಿದೆ. ನನ್ನ ನೇತೃತ್ವದ ತಂಡವು 3ರಂದು ರ್ಯಾಲಿ ನಡೆಸಲಿದೆ. ಅಶ್ವತ್ಥನಾರಾಯಣ್, ಗೋಪಾಲಯ್ಯ, ಸೋಮಶೇಖರ್, ಡಾ.ಸುಧಾಕರ್, ಇನ್ನೂ ಹಲವಾರು ಎಂಎಲ್ಸಿಗಳು, ಲೋಕಸಭಾ ಸದ ಸ್ಯ ಪಿ.ಸಿ.ಮೋಹನ್, ಇವರೆಲ್ಲರೂ ನಮ್ಮ ತಂಡದಲ್ಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ನಮ್ಮ ತಂಡ 17 ಸಾರ್ವಜನಿಕ ಸಭೆಗಳನ್ನು ಮಾಡಲಿದೆ. 7 ಮೋರ್ಚಾಗಳ ಸಭೆಯೂ ನಡೆಯಲಿದೆ. ದಿನಾಂಕಗಳನ್ನು ನಿರ್ಧರಿಸಲಾಗಿದೆ. ಎಲ್ಲ ಕಡೆ ರೋಡ್ ಷೋ, ಸಾರ್ವಜನಿಕ ಸಭೆ ಇರುತ್ತದೆ. ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಭಾಗದಲ್ಲಿ ನಮ್ಮ ರಥದ ಮೂಲಕ ಸಂಚರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಕೊನೆಯಲ್ಲಿ ದಾವಣಗೆರೆಯಲ್ಲಿ 25ರಂದು ನರೇಂದ್ರ ಮೋದಿಜಿ ಅವರು ರಥಗಳ ಸಂಚಾರದ ಸಮಾರೋಪ ನಡೆಯಲಿದೆ. ಬೃಹತ್ ರ್ಯಾಲಿ ಮೂಲಕ ಮೋದಿಜಿ ಅವರು ಪಾಂಚಜನ್ಯದ ಶಂಖನಾದ ಮಾಡಲಿದ್ದಾರೆ. ಒಂದು ವಾರದಿಂದ ತಯಾರಿ ನಡೆದಿದೆ. ದೇವನಹಳ್ಳಿಯಲ್ಲಿ ಇವತ್ತು ವೇದಿಕೆ ವೀಕ್ಷಿಸಲಿದ್ದೇನೆ ಎಂದರು.












Click it and Unblock the Notifications