ಕಾಂಗ್ರೆಸ್ ಐಕಾನ್ ಸಿದ್ದರಾಮಯ್ಯರಿಗೆ ಎದುರಾಗಿದೆ ಅಗ್ನಿಪರೀಕ್ಷೆ
ಮೈಸೂರು, ಏಪ್ರಿಲ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಎಲ್ಲ ಹನ್ನೊಂದು ವಿಧಾನಸಭಾ ಕ್ಷೇತ್ರಗಳು ಈ ಬಾರಿ ಮುಖ್ಯಪಾತ್ರವನ್ನು ವಹಿಸುತ್ತಿದ್ದು, ಇಲ್ಲಿನ ಒಂದೊಂದು ಕ್ಷೇತ್ರಗಳು ಕೂಡ ಒಂದೊಂದು ರೀತಿಯಲ್ಲಿ ರಾಜ್ಯದ ಗಮನಸೆಳೆಯುವುದರೊಂದಿಗೆ ಭಾರೀ ಕುತೂಹಲವನ್ನು ಕೆರಳಿಸಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇಲ್ಲಿ ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿರುವುದರಿಂದಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಷ್ಟೇ ಅಲ್ಲ ನಾನು ಪ್ರಚಾರಕ್ಕೆ ಹೋಗದಿದ್ದರೂ ಮತದಾರರು ಮತ ಹಾಕುತ್ತಾರೆ ಎಂಬ ಸಂಪೂರ್ಣ ವಿಶ್ವಾಸವೂ ಸಿದ್ದರಾಮಯ್ಯನವರಿಗೆ ಇಲ್ಲದಾಗಿದೆ. ಇದರಿಂದಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಗೆ ಅದರಲ್ಲೂ ತಮ್ಮ ಪುತ್ರ ಸ್ಪರ್ಧಿಸಲಿರುವ ವರುಣ ವಿಧಾಸಭಾ ಕ್ಷೇತ್ರ ಮತ್ತು ತಾವೇ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದತ್ತ ಹೆಚ್ಚಿನ ನಿಗಾ ವಹಿಸುತ್ತಿದ್ದು, ಈಗಾಗಲೇ ವಾರಗಟ್ಟಲೆ ಪ್ರಚಾರ ನಡೆಸಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ 7 ಅಂಕ!
ಚುನಾವಣೆ ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ
ಇಷ್ಟಕ್ಕೂ ಸಿದ್ದರಾಮಯ್ಯ ಅವರು ಚುನಾವಣೆಯನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಈ ಸಲದ ಗೆಲುವು, ಸೋಲು ಎಲ್ಲವೂ ಅವರ ತಲೆಗೆ ಬೀಳುವುದಂತೂ ಸತ್ಯ.
ಇದುವರೆಗೆ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆಗೆ ಹೋದರೂ ಸಾಮೂಹಿಕ ನಾಯಕತ್ವ ಎಂಬ ಮಂತ್ರವನ್ನು ಜಪಿಸುತ್ತಿದ್ದರು. ಆದರೆ ಈ ಬಾರಿಯ ಪರಿಸ್ಥಿತಿ ಹಾಗಿಲ್ಲ.
ಸಿದ್ದರಾಮಯ್ಯ ಅವರು ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವ ಮೂಲಕ ಸಾರಥ್ಯವನ್ನು ತಾವೇ ವಹಿಸಿಕೊಂಡಿದ್ದು, ಇತರೆ ನಾಯಕರು ಅವರಿಗೆ ಸಾಥ್ ನೀಡುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ಪಕ್ಷದ ಐಕಾನ್
ಹಾಗೆ ನೋಡಿದರೆ ಕರ್ನಾಟಕದ ಕಾಂಗ್ರೆಸ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐಕಾನ್. ಬಹುಶಃ ಅವರಿಲ್ಲದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವೇ ಅಪೂರ್ಣವೇ. ಹೀಗಾಗಿ ಅವರು ಕೇವಲ ತವರು ಕ್ಷೇತ್ರದಲ್ಲಷ್ಟೆ ಪ್ರಚಾರ ಮಾಡಿಕೊಂಡು ಕುಳಿತುಕೊಳ್ಳುವ ಹಾಗಿಲ್ಲ.
ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಓಡಾಡಲೇ ಬೇಕಾಗಿದೆ. ಈಗಾಗಲೇ ಕಾಂಗ್ರೆಸ್ನ ಸಾರಥಿ ಎಂಬಂತೆ ಬಿಂಬಿತವಾಗಿರುವುದರಿಂದ ಕೈ ಕಾರ್ಯಕರ್ತರು ತಮ್ಮ ಊರಿನ ಸಮಾವೇಶಕ್ಕೆ ಸಿಎಂ ಬರಲೇ ಬೇಕೆಂದು ಬಯಸುತ್ತಿದ್ದಾರೆ.
ಜೆಡಿಎಸ್ ಎಷ್ಟು ಸೀಟು ಗೆಲ್ಲಲಿದೆ? ಸಿದ್ದರಾಮಯ್ಯ ನುಡಿದ ಭವಿಷ್ಯ
ಪರಮೇಶ್ವರ್ ಸೋಲು ಕಲಿಸಿದ ಪಾಠ
ಮಂದಿನ ಒಂದೊಂದು ದಿನಗಳು ಕೂಡ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಬಹು ನಿರ್ಣಾಯಕವಾಗಿದ್ದು, ಮತದಾರರನ್ನು ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇರಬೇಕಾದ ಅನಿವಾರ್ಯತೆ ಇದ್ದೇ ಇದೆ. ಏಕೆಂದರೆ ಎಲ್ಲ ಪಕ್ಷದ ನಾಯಕರು ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಒಂದಲ್ಲ ಒಂದು ತಂತ್ರವನ್ನು ಅನುಸರಿಸುತ್ತಿದ್ದಾರೆ. ಅದಕ್ಕೆ ಮರುಳಾಗಿ ಮತದಾರ ಮತದಾನದ ವೇಳೆಗೆ ಕನಿಕರ ತೋರಿ ಬಿಟ್ಟರೆ ಅದರ ಪರಿಣಾಮ ಬೇರೆಯದ್ದೇ ಆಗುವ ಸಾಧ್ಯತೆ ಹೆಚ್ಚು.
ಹೀಗಾಗಿ ಈಗ ರಾಜಕೀಯ ನಾಯಕರು ಎಷ್ಟೇ ಪ್ರಚಾರ ನಡೆಸಿದರೂ ಚುನಾವಣೆ ಹತ್ತಿರ ಬರುವಾಗ ಮಾಡುವ ತಂತ್ರಗಳೇ ಹೆಚ್ಚಿನ ಫಲ ನೀಡುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅನುಭವಿಸಿದ ಸೋಲು ಎಲ್ಲರ ಜ್ಞಾಪಕದಲ್ಲಿರಬಹುದು. ಅವರು ರಾಜ್ಯದಾದ್ಯಂತ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸುವುದರಲ್ಲೇ ಮಗ್ನರಾಗಿ ತಾವು ಸ್ಪರ್ಧಿಸುವ ಕ್ಷೇತ್ರದತ್ತ ಉದಾಸೀನತೆ ತೋರಿದ್ದರು. ಅದರ ಪರಿಣಾಮ ಸೋಲು ಕಾಣಬೇಕಾಯಿತು. ಈ ಪಾಠ ಸಿದ್ದರಾಮಯ್ಯ ಅವರನ್ನು ಎಚ್ಚರಿಸುತ್ತಲೇ ಇದೆ.
ರಾಜ್ಯದಾದ್ಯಂತ ಪ್ರವಾಸ ಮಾಡುವ ಅನಿವಾರ್ಯತೆ
ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ವೇಳೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಲು ಅವರಿಗೆ ಸಮಯದ ಅಭಾವವೂ ಅಡ್ಡ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದೆಲ್ಲವನ್ನು ಸೂಕ್ಷ್ಮವಾಗಿ ಅರಿತಿರುವ ಅವರು ಈಗಾಗಲೇ ಒಂದು ಮಟ್ಟಿಗಿನ ಪ್ರಚಾರವನ್ನು ಕ್ಷೇತ್ರದಲ್ಲಿ ಮುಗಿಸಿ ಬಂದಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಬೇಕಾಗಿದೆ. ಅವರ ವರ್ಚಸ್ಸು ಮತದಾರರನ್ನು ಸೆಳೆಯಲಿರುವುದರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಮತವನ್ನು ಕೇಳಲೇ ಬೇಕಾಗಿದೆ. ಆ ಒತ್ತಡದಲ್ಲಿ ತಮ್ಮ ಕ್ಷೇತ್ರವನ್ನು ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ. ಒಟ್ಟಾರೆ ಈ ಬಾರಿಯ ಚುನಾವಣೆ ಅವರಿಗೊಂದು ಅಗ್ನಿಪರೀಕ್ಷೆ ಎನ್ನುವುದಂತು ಸತ್ಯ.