ಬಿಜೆಪಿ ನಾಯಕರ ಹಳೇ ಕೇಸ್ ಕೆದಕಲು ಟಾಸ್ಕ್! ಯಾರಿಂದ ಗೊತ್ತಾ?
ರಾಜ್ಯ ರಾಜಕೀಯದಲ್ಲಿ ಇದೀಗ ರಾಜಕಾರಣಿಗಳ ಎಫ್ಐಆರ್ ಪರ್ವ ಶುರುವಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರ ಮೇಲೂ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧವೂ ಎಫ್ಐಆರ್ ಆಗಿದೆ. ಆದರೆ ಶೀಘ್ರದಲ್ಲೇ ಮತ್ತಷ್ಟು ಮಂದಿ ರಾಜಕಾರಣಿಗಳ ಮೇಲೆ ಎಫ್ಐಆರ್ ದಾಖಲಾಗುವ ಮುನ್ಸೂಚನೆಯನ್ನು ಕಾಂಗ್ರೆಸ್ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗುವಂತೆ ಮಾಡುವಲ್ಲಿ ಬಿಜೆಪಿ ನಾಯಕರ ಪಾತ್ರವಿದೆ ಎನ್ನುವ ಆರೋಪವಿದೆ. ಹಾಗಾಗಿ ಇದಕ್ಕೆ ಪ್ರತೀಕಾರವಾಗಿ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ದಾಖಲಿಸುವ ಕಾಂಗ್ರೆಸ್ ಅಖಾಡಕ್ಕಿಳಿದಿದೆ ಎನ್ನಲಾಗಿದೆ.

ಬಿಜೆಪಿ ನಾಯಕರ ಮೇಲಿರುವ ಕೇಸ್ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ವರದಿ ನೀಡುವಂತೆ ಕಾಂಗ್ರೆಸ್ ಟಾಸ್ಕ್ ಕೂಡ ನೀಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಕಾನೂನು ಘಟಕಕ್ಕೆ ಟಾಸ್ಕ್ ನೀಡಿದ್ದಾರಂತೆ. ಬಿಜೆಪಿ ಶಾಸಕರ ಮೇಲಿರುವ ಹಳೆಯ ಕೇಸ್ಗಳ ಬಗ್ಗೆ ವರದಿ ಸಂಗ್ರಹಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಈಗಾಗಲೇ ಕೆಪಿಸಿಸಿ ಕಾನೂನು ಘಟಕ ಅಖಾಡಕ್ಕಿಳಿದಿದ್ದು, ಎರಡು ಸಭೆಗಳನ್ನೂ ಮಾಡಿದೆಯಂತೆ. ಇಂದು ಮತ್ತೊಂದು ಸಭೆ ಇದೇ ವಿಚಾರವಾಗಿ ನಡೆಯಲಿದೆ. ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಪಕ್ರರಣದಲ್ಲಿ ಸಿಲುಕಿಸಿರುವುದಕ್ಕೆ ಪ್ರತೀಕಾರವಾಗಿ ಈ ರೀತಿ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಹಾಗಾಗಿ ಕೆಪಿಸಿಸಿ ಕಾನೂನು ಘಟಕವು ಸದ್ಯ ಬಿಜೆಪಿ ಶಾಸಕರ ಬೆನ್ನುಬಿದ್ದಿದೆ. ಈ ಹಿಂದೆ ಅಧಿಕಾರಲ್ಲಿದ್ದಾಗ ಬಿಜೆಪಿ ನಾಯಕರು ಹಲವು ಅಕ್ರಮಗಳು ಮಾಡಿರುವ ಸಾಧ್ಯತೆಗಳು ಇರುವುದರಿಂದ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಒಂದು ವೇಳೆ ಬಿಜೆಪಿ ಶಾಸಕರ ಮೇಲಿನ ಪ್ರಕರಣಗಳು ಮತ್ತೆ ಧೂಳು ಕೆಡವಿ ಹೊರಬಂದರೆ, ಮತ್ತಷ್ಟು ಮಂದಿಯ ಮೇಲೆ ಎಫ್ಐಆರ್ ದಾಖಲಾಗುವ ಸಾಧ್ಯತೆ ಕೂಡ ಇದೆ ಎಂಬ ಚರ್ಚೆಗಳು ಗರಿಗೆದರಿವೆ.

ಹಾಗಾಗಿ ಬಿಜೆಪಿ ಶಾಸಕರ ಕೇಸ್ಗಳ ಪ್ರಕರಣದ ಮಾಹಿತಿ ಕಲೆಹಾಕಲು ಕಾಂಗ್ರೆಸ್ ಮುಂದಾಗಿದೆ. ಇದರಿಂದಾಗಿ ಬಿಜೆಪಿ ನಾಯಕರ ಮತ್ತಷ್ಟು ಹಗರಣಗಳು ಬಯಲಿಗೆ ಬರುವ ಸಾಧ್ಯತೆ ಕೂಡ ಇದ್ದು, ಇದರಿಂದ ಅವರ ಮೇಲೆ ಎಫ್ಐಆರ್ ದಾಖಲಾಗಿ ಕೇಸ್ ಕೂಡ ದಾಖಲಾಗಬಹುದು ಎಂದು ಹೇಳಲಾಗುತ್ತಿದೆ.
ಇಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಯಲಿದ್ದು, ಬಿಜೆಪಿ ಶಾಸಕರಿಗೆ ಇದೀಗ ಢವಢವ ಶುರುವಾಗಿದೆ. ಇತ್ತೀಚೆಗೆ ರಾಜಕೀಯದಲ್ಲಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವ ಜೊತೆಗೆ ಉಭಯ ಪಕ್ಷಗಳ ನಡುವಿನ ಹಳೆ ಪ್ರಕರಣಗಳು ಕೂಡ ಜೀವಪಡೆದುಕೊಳ್ಳುತ್ತಿವೆ.
ಇದನ್ನೇ ಮುಂದಿಟ್ಟುಕೊಂಡು ಫೈಟ್ ಮಾಡುವ ಟ್ರೆಂಡ್ ಕೂಡ ಸದ್ಯ ರಾಜ್ಯದಲ್ಲಿದೆ. ಕಾಂಗ್ರೆಸ್ ಕೂಡ ಇದೇ ಮಾಸ್ಟರ್ಪ್ಲ್ಯಾನ್ ಮಾಡಿದ್ದು, ಎಷ್ಟು ಮಂದಿ ಬಿಜೆಪಿ ಶಾಸಕರ ಜಾತಕ ಬಯಲಿಗೆ ಬರಲಿದೆಯೋ ಅನ್ನುವುದೇ ಈಗ ಎದುರಾಗಿರುವ ಯಕ್ಷಪ್ರಶ್ನೆ. ಒಟ್ಟಾರೆ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.












Click it and Unblock the Notifications