'ನಕಲಿ ಮಹಿಳೆಯರ ಹೆಸರಿನಲ್ಲಿ ಲಕ್ಷಾಂತರ ಹಣ ವಂಚನೆ'- 'ಕೈ' ವಿರುದ್ಧ ಕಮಲ ಕಿಡಿ
ಮಂಗಳೂರು ಬಳಿಕ ಉತ್ತರ ಕನ್ನಡ ಜಿಲ್ಲೆ ಅಂಕೋಲದ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಸಾರ್ವಜನಿಕ ಸಭೆಯ ಮುನ್ನ ಭೇಟಿಯಾಗಿ ಆಶೀರ್ವಾದ ಪಡೆದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ವಾಗ್ದಾಳಿ ಮಾಡಿದರು. 'ಮೂರು ಲಕ್ಷ ನಕಲಿ ಜನರ ಹೆಸರಿನಲ್ಲಿ ಕಾಂಗ್ರೆಸ್ ಕೊಳ್ಳೆ ಹೊಡೆದಿದೆ. ನಕಲಿ ಮಹಿಳೆಯರ ಹೆಸರಿನಲ್ಲಿ ಲಕ್ಷಾಂತರ ಹಣ ಕಾಂಗ್ರೆಸ್ ಕಬಳಿಸಿದೆ' ಎಂದು ಆರೋಪಿಸಿದರು. ಬಳಿಕ ಬಿಜೆಪಿ ಬಗ್ಗೆ ಹಿತನುಡಿಗಳನ್ನಾಡಿದರು.

'ರಾಜ್ಯ ಅಭಿವೃದ್ಧಿಗೆ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರ ಬಂದ ಬಳಿಕ ಮೂರು ಪಟ್ಟು ಬಂಡವಾಳ ಹೂಡಿಕೆ ಹೆಚ್ಚಾಗಲಿದೆ. ದೇಶದ ಪ್ರತಿ ನಾಗರಿಕರಿಗೂ ಬಿಜೆಪಿ ಆಶೀರ್ವಾದಿಸಿದೆ' ಎಂದು ಮೋದಿ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಹೊಗಳಿದರು.
ಬಿಜೆಪಿ ಎಲ್ಲರ ಏಳಿಗೆಗಾಗಿ ವಿಶೇಷವಾಗಿ ಬಡವರು ಮತ್ತು ಮೀನುಗಾರರು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸಿದೆ. ನಾವು ಮಾಡಿರೋ ಕೆಲಸ ಕಾಂಗ್ರೆಸ್ ನಿದ್ದೆಗೆಡಿಸಿದೆ ಎಂದು ಮೋದಿ ಹೇಳಿದರು. ಈ ವೇಳೆ ಪರೋಕ್ಷವಾಗಿ ಖರ್ಗೆ, ಪ್ರಿಯಾಂಕಾ ಗೆ ತಿರುಗೇಟು ಕೊಟ್ಟ ಮೋದಿ, ಕಾಂಗ್ರೆಸ್ ಅವರು ಪದೇ ಪದೇ ಬಿಜೆಪಿ ವಿರುದ್ಧ ಕೆಟ್ಟ ಶಬ್ದಗಳು ಬಳಸುತ್ತಿರುವುದೇಕೆ ಗೊತ್ತಾ? ಕಾಂಗ್ರೆಸ್ ಭ್ರಷ್ಟಾಚಾರ ಹೊರಗೆಳೆಯುತ್ತಿದ್ದಂತೆ ಅವರು ನಮ್ಮ ವಿರುದ್ಧ ಸಮರ ಸಾರಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರವನ್ನು ಮೈಗಂಟಿಸಿಕೊಂಡಿದೆ ಎಂದರು.
'ಕಾಂಗ್ರೆಸ್ ಪ್ರಧಾನಿ ಏನು ಹೇಳಿದ್ರು ಗೊತ್ತಾ? ದೆಹಲಿಯಿಂದ ಒಂದು ರೂಪಾಯಿ ಕಳೆಸಿದ್ರೆ ಸಿಗುತ್ತಿದ್ದದ್ದು 15 ಪೈಸೆ ಮಾತ್ರ ಸಿಗುತ್ತಿತ್ತು. ಉಳಿದ 85 ಪೈಸೆ ಮಾಯವಾಗುತ್ತಿತ್ತು. ಮೂರು ಲಕ್ಷ ನಕಲಿ ಜನರಿಗೆ ಹಣ ರವಾನಿಯಾಗಿದೆ' ಎಂದು ಮೋದಿ ಕಿಡಿ ಕಾರಿದರು.
ಕಾಂಗ್ರೆಸ್ ಅಭಿವೃದ್ಧಿ ಹೆಸರಲ್ಲಿ ಓಟು ಕೆಳುತ್ತಿಲ್ಲ. ಬದಲಿಗೆ ನಿವೃತ್ತಿ ಹೆಸರಿನಲ್ಲಿ ಓಟು ಕೇಳುತ್ತಿದೆ. ನಾವು ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಬರೀ ಬೈಗುಳದಲ್ಲಿ ಮುಳುಗಿ ಹೋಗಿತ್ತು ಎಂದು ಕಿಡಿ ಕಾರಿದರು.
ಅನುದಾನ ಕಳುಹಿಸಿದ್ರೆ ಕಾಂಗ್ರೆಸ್ ಅವರು ನುಂಗಿ ನೀರು ಕುಡಿತಾಯಿದ್ರು. ಆದರೆ ಬಿಜೆಪಿ ಐದು ಲಕ್ಷ ಜನರಿಗೆ ಜನ್ಧನ ಯೋಜನೆಯಡಿ, ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ ಅನುಕೂಲವಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ. ಪಿಎಂ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರರಿಗೆ ಅನುಕೂಲ, ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವುದು ಸೇರಿದಂತೆ ಅನೇಕ ಸಹಕಾರವನ್ನು ಮಾಡಿದೆ ಎಂದರು.
ಜೊತೆಗೆ ಆದಿವಾಸಿ ಸಮುದಾಯಕ್ಕೆ ಬಿಜೆಪಿ ಒತ್ತು ನೀಡಿದೆ. ಆದಿವಾಸಿ ಸಮುದಾಯದವರನ್ನೇ ರಾಷ್ಟ್ರಪತಿ ಮಾಡಲಾಗಿದೆ. ಕಾಂಗ್ರೆಸ್ ಆದಿವಾಸಿಗಳ ಅಭಿವೃದ್ಧಿಗೆ ಮುಂದಾಗಿಲ್ಲ. ಆದಿವಾಸಿ ಮಹಿಳೆ ರಾಷ್ಟ್ರಪತಿ ಆಗಿದ್ದಾರೆ. ರಾಜ್ಯವನ್ನು ಸಮಗ್ರಗೊಳಿಸುವುದು ನಮ್ಮ ಗುರಿ. ಕಳೆದ ಒಂದು ಶತಮಾನದಲ್ಲಿ ಕೊರೊನಾ ಮಹಾಮಾರಿ ಬಂದಿರಲಿಲ್ಲ. ಆದರೆ ಬಿಜೆಪಿ ಅದನ್ನು ಸಮರ್ಥವಾಗಿ ನಿರ್ವಹಿಸಿದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಿಜೆಪಿ ಸರ್ಕಾರ ಆಗಿರಲಿ ಎಂದು ಮೋದಿ ಮನವಿ ಮಾಡಿದರು.












Click it and Unblock the Notifications