BBMP Elections: ಲೋಕಸಭೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪ್ಲ್ಯಾನ್!
ಬೆಂಗಳೂರು,ಜೂನ್ 12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್ ಸರ್ಕಾರ ರಚನೆಯ ಬೆನ್ನಲ್ಲೇ ಮುಂಬರುವ ಚುನಾವಣೆಗಳಿಗೆ ತಯಾರಿ ನಡೆಸುತ್ತಿದೆ.
ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಹಲವು ತಂತ್ರಗಾರಿಕೆಯ ಜೊತೆಗೆ ಸಚಿವರ ಹೆಗಲಿಗೆ ಲೋಕಸಭಾ ಚುನಾವಣಾ ಜವಾಬ್ಧಾರಿಯನ್ನ ನೀಡಿದ್ದು, ಇದೀಗ ಲೋಕಸಭಾ ಚುನಾವಣೆಗೂ ಮುನ್ನವೇ ಬಿಬಿಎಂಪಿ ಚುನಾವಣೆಯನ್ನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನೂ ಬಿಬಿಎಂಪಿ ವಾರ್ಡ್ ವಿಂಗಡನೆ ಎಡವಟ್ಟು ಸರಿಪಡಿಸಲು ರಚಿಸಿರುವ ಸಮಿತಿಯಿಂದ ಅಂತಿಮ ವರದಿ ಸಿದ್ಧವಾಗಿದ್ದು, ಸೋಮವಾರ ಸಂಜೆಯೇ ಬೆಂಗಳೂರು ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಮಂದಾಗಿದೆ. ಇನ್ನೂ ವಾರ್ಡ್ ವಿಂಗಡಣೆ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲದೆ, ಲೋಕಸಭೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ ಎಂದು ತಿಳಿದದು ಬಂದಿದೆ.
ಬಿಬಿಎಂಪಿ ವಾರ್ಡ್ ವಿಂಗಡಣೆ ಕುರಿತಾಗಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಸದಸ್ಯರಾಗಿರುವ ಬೆಂಗಳೂರಿನ ಶಾಸಕರು, ಮಾಜಿ ಮೇಯರ್ಗಳು ಸಭೆ ನಡೆಸಿ ಸಲಹೆ, ಮಾಹಿತಿ ಪಡೆದು ವರದಿ ಸಿದ್ಧಪಡಿಸಿದ್ದಾರೆ. ಅಲ್ಲದೇ ಬಿಬಿಎಂಪಿ ವಾರ್ಡ್ ವಿಂಗಡನೆ ಅವಶ್ಯವೇ? ವಾರ್ಡ್ ವಿಂಗಡನೆ ಮಾಡದೆ ಸಮಸ್ಯೆ ಸರಿಪಡಿಸಬಹುದಾ? ಇದಕ್ಕೆ ಉಪಾಯವಿದೆಯೇ? ಎಂಬ ಹಲವು ಮಾಹಿತಿಯನ್ನ ಒಳಗೊಂಡ ವರದಿಯನ್ನು ಸಿದ್ಧಪಡಿಸಿದೆ.
ಇನ್ನೂ ಸಮಿತಿ ಸಿದ್ದಪಡಿಸಿದ ವರದಿ ಕೈಸೇರುತ್ತಿದ್ದಂತೆ ಮೀಸಲು ಪಟ್ಟಿ ಫೈನಲ್ ಮಾಡಿ ಪಾಲಿಕೆಯ 243 ವಾರ್ಡ್ಗಳಿಗೆ ಚುನಾವಣೆ ನಡೆಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಸರ್ಕಾರದ ಉಚಿತ ಯೋಜನೆಗಳ ಲಾಭ ಪಡೆಯುವ ಉದ್ದೇಶದಿಂದ ಲೋಕಸಭೆ ಚುನಾವಣೆಗೂ ಮುನ್ನ ಅಂದರೆ ನವೆಂಬರ್ ಒಳಗಾಗಿ ಚುನಾವಣೆ ನಡೆಸಲು ಮುಂದಾಗಿದೆ. ಹೀಗಾಗಿ 243 ವಾರ್ಡ್ಗಳಿಗೆ ಹೊಸ ಮೀಸಲಾತಿಯನ್ನು ಪ್ರಕಟಿಸಲು ನಿರ್ಧಾರ ಮಾಡಲಾಗಿದ್ದು, ವರದಿಯ ಸಲಹೆ ಪಡೆದು ಪೈನಲ್ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ಮುಂದಾಗಿದೆ.

ಇತ್ತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಲು ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ನಾವು ವರದಿಯನ್ನು ಸಿದ್ಧಪಡಿಸಿದ್ದೇವೆ ಮತ್ತು ಅದನ್ನು ಇಂದು ಅಥವಾ ನಾಳೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗಿರುವ 243 ವಾರ್ಡ್ಗಳಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಹೈಕೋರ್ಟ್ನಲ್ಲಿ ಹಲವಾರು ಪ್ರಕರಣಗಳಿದ್ದು, ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಕ್ಲಿಯರ್ ಆಗಿದೆ. ನ್ಯಾಯಾಲಯದಿಂದ ಯಾವ ನಿರ್ದೇಶನ ಬರುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಇನ್ನೂ ಬಿಬಿಎಂಪಿ ವಾರ್ಡ್ಗಳನ್ನು 250 ಕ್ಕೆ ಹೆಚ್ಚಿಸುವ ಪ್ರಸ್ತಾವನೆ ವಿಚಾರವಾಗಿ ಮಾತನಾಡಿದ ಅವರು, ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ. ವಾರ್ಡ್ಗಳನ್ನು 250 ಕ್ಕೆ ಹೆಚ್ಚಿಸಲು ಹೋದರೆ ಸಮಯ ತೆಗೆದುಕೊಳ್ಳುತ್ತದೆ. ನಾವೇ ಚುನಾವಣೆ ನಡೆಸುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಕೂಡ ಚುನಾವಣೆ ನಡೆಸಲು ಬಯಸಿದ್ದಾರೆ. ಹಾಗಾಗಿ ನಾವು ಬಿಜೆಪಿಯಂತೆ ಚುನಾವಣೆಯನ್ನು ಮುಂದೂಡುವುದಿಲ್ಲ ಎಂದು ಹೇಳಿದರು.












Click it and Unblock the Notifications